ಮೈಸೂರಿಗೆ ಬಂದು ಆತಂಕ ತಂದ ಕೊರೊನಾ ಸೋಂಕಿತ ತಾಯಿ- ಗರ್ಭಿಣಿ ಮಗಳು
ಮೈಸೂರು, ಜೂನ್ 04: ಹೋಂ ಕ್ವಾರಂಟೈನ್ ನಲ್ಲಿದ್ದ ತಾಯಿ ಮಗಳು ನಿಯಮ ಉಲ್ಲಂಘಿಸಿ ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದು, ಅವರಲ್ಲಿ ಇದೀಗ ಕೊರೋನಾ ಸೋಂಕು ದೃಢವಾಗಿರುವುದು ಆತಂಕ್ಕೀಡು ಮಾಡಿದೆ. ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಸೋಂಕು ಹರಡದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ತಾಯಿ-ಮಗಳು ಆತಂಕವನ್ನು ತಂದಿತ್ತಿದ್ದಾರೆ.
ಹೋಂ ಕ್ವಾರಂಟೈನ್ ನಲ್ಲಿದ್ದ ಅವರಿಬ್ಬರು ನಿಯಮ ಉಲ್ಲಂಘಿಸಿ ಬೆಂಗಳೂರಿನಿಂದ ಮೈಸೂರಿಗೆ ಮಂಗಳವಾರ ಆಗಮಿಸಿದ್ದರು. ಬುಧವಾರ ಈ ಇಬ್ಬರಲ್ಲೂ ಸೋಂಕು ಹರಡಿರುವುದು ದೃಢಪಟ್ಟಿದೆ. ಅಧಿಕಾರಿಗಳು ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ದು, ಅವರಿದ್ದ ಬಡಾವಣೆಯ ಎರಡು ರಸ್ತೆಗಳನ್ನು ರಾಮಕೃಷ್ಣನಗರದ ಜಿ ಬ್ಲಾಕ್ನ ಒಂದು ರಸ್ತೆಯನ್ನು ಸೀಲ್ಡೌನ್ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿ ಮೈಸೂರಿಗೆ ಬಂದಿದ್ದರು
ಈ ತಾಯಿ-ಮಗಳು ನಗರದ ಹಲವೆಡೆ ಓಡಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಸಂಗತಿ ಜನತೆಯಲ್ಲಿ ಆತಂಕ ತಂದಿದೆ. ಮೂಲತಃ ಮೈಸೂರಿನ ರಾಮಕೃಷ್ಣನಗರದ ಜಿ ಬ್ಲಾಕ್ 7ನೇ ಕ್ರಾಸ್ ನಿವಾಸಿ ಮಹಿಳೆ (50 ವರ್ಷ) ಮತ್ತು ಆರು ತಿಂಗಳ ಗರ್ಭಿಣಿ ಮಗಳು (27 ವರ್ಷ) ಈ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಅವರು ವಾಸ್ತವ್ಯ ಹೂಡಿದ್ದ ಬಡಾವಣೆಯ ಜನ ಬೆಚ್ಚಿ ಬಿದ್ದಿದ್ದಾರೆ. ಆದರೆ ಅವರಿಬ್ಬರು ಹೋಮ್ ಕ್ವಾರಂಟೈನ್ ನಲ್ಲಿದ್ದ ಕಾರಣ ಅಕ್ಕಪಕ್ಕದ ನಿವಾಸಿಗಳು ಆತಂಕಪಡಬೇಕಾಗಿಲ್ಲ ಎಂದು ಹೇಳಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿ ಬ್ಲಾಕ್ನ 7ನೇ ಕ್ರಾಸ್ ಅನ್ನು ಸೀಲ್ ಡೌನ್ ಮಾಡಿ, ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ..
ನಿರಾಳವಾಗಿದ್ದ ಅರಮನೆ ನಗರಿಯಲ್ಲಿ ಮತ್ತೆ ಕೇಸ್; ಸಹಕಾರ ಕೇಳಿದ ಡಿಸಿ
ಅನುಮತಿ ಪಡೆಯದೇ ಬೆಂಗಳೂರು ಬಿಟ್ಟಿದ್ದರು
ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ತಾಯಿ, ಮಗಳನ್ನು ಅಲ್ಲಿಯೇ ಪರೀಕ್ಷೆ ನಡೆಸಿ ಕ್ವಾರಂಟೈನ್ ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ಮಗಳು ಗರ್ಭಿಣಿಯಾಗಿದ್ದರಿಂದ ಹೋಂ ಕ್ವಾರಂಟೈನ್ನಲ್ಲಿರುವುದಾಗಿ ಅನುಮತಿ ಕೇಳಿ, ಬೆಂಗಳೂರಿನ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದರು. ಬಳಿಕ ಬುಧವಾರ ಬೆಳಗ್ಗೆ ಫಲಿತಾಂಶದಲ್ಲಿ ಸೋಂಕು ಹರಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಅಧಿಕಾರಿಗಳು ಅವರ ಮನೆಗೆ ತೆರಳಿದ್ದಾರೆ. ಆದರೆ ಮಂಗಳವಾರ ತಾಯಿ ಮಗಳು ಇಬ್ಬರು ಬಾಡಿಗೆ ಕಾರಿನಲ್ಲಿ ಮೈಸೂರಿನ ರಾಮಕೃಷ್ಣ ನಗರದ ತಮ್ಮ ನಿವಾಸಕ್ಕೆ ಅಧಿಕಾರಿಗಳ ಅನುಮತಿ ಪಡೆಯದೇ ಕದ್ದು ಬಂದಿರುವ ವಿಷಯ ತಿಳಿದುಬಂದಿದೆ.
ಮೈಸೂರು ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಿದ ಅಧಿಕಾರಿಗಳು
ಕೂಡಲೇ ಕಾರ್ಯಪ್ರವೃತ್ತರಾದ ಬೆಂಗಳೂರಿನ ಅಧಿಕಾರಿಗಳು ಮೈಸೂರು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಜಿಲ್ಲಾಡಳಿತ ಸೋಂಕಿತರ ಮನೆಯನ್ನು ಪತ್ತೆಹಚ್ಚಿ, ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಜೊತೆಗೆ ಅವರಿದ್ದ ರಾಮಕೃಷ್ಣ ನಗರದ ಜಿ. ಬ್ಲಾಕ್ ನ ಎರಡು ಮುಖ್ಯ ರಸ್ತೆಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದಾರೆ.
ಮೈಸೂರೀಗ ಕೊರೊನಾಮುಕ್ತ; ಕಾರಣಕರ್ತರಿಗೆ ಉಸ್ತುವಾರಿ ಸಚಿವರ ಅಭಿನಂದನಾರ್ಪಣೆ
ಕಾರು ಚಾಲಕನ ಪತ್ತೆಗೆ ಪ್ರಯತ್ನ
ಅಧಿಕಾರಿಗಳ ಅನುಮತಿ ಪಡೆಯದೇ ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಮೈಸೂರಿಗೆ ಬಂದ ಈ ಇಬ್ಬರು ಸೋಂಕಿತ ಮಹಿಳೆಯರು ನಗರದ ಹಲವೆಡೆ ಓಡಾಡಿದ್ದು, ಬಡಾವಣೆಯ ಉದ್ಯಾನದಲ್ಲಿ ವಾಯು ವಿಹಾರಕ್ಕೆ ತೆರಳಿ ಸ್ನೇಹಿತರೊಂದಿಗೆ ಮಾತಾಡಿದ್ದಾರೆ. ಈ ಹಿನ್ನೆಲೆ ಇಬ್ಬರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಜೊತೆಗೆ ಬೆಂಗಳೂರಿನಿಂದ ಕರೆತಂದ ಕಾರು ಚಾಲಕ ದೊಡ್ಡಬಳ್ಳಾಪುರದವನೆಂದು ಗುರುತಿಸಲಾಗಿದ್ದು, ಆತನನ್ನು ಸಂಪರ್ಕಿಸಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಸೀಲ್ ಡೌನ್ ಮಾಡಿರುವ ಎರಡೂ ರಸ್ತೆಯಲ್ಲಿನ ಮನೆಯವರು ಹೊರ ಹೋಗದಂತೆ ಹಾಗೂ ಹೊರಗಿನವರು ಆ ಪ್ರದೇಶಕ್ಕೆ ತೆರಳದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.