ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿ ಕಪಿಲ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು
ಮೈಸೂರು, ಆಗಸ್ಟ್ 26: ಮನೆಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ತಾಯಿ ಮಗಳು ಕಪಿಲ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗೆಳತಿ ಮನೆಯವರ ಕಿರುಕುಳ; ಫೇಸ್ ಬುಕ್ ಲೈವ್ ನಲ್ಲಿ ವಿಷ ಕುಡಿದ ಯುವಕ
ನಂಜನಗೂಡಿನ ಸಂಗಮ ಕ್ಷೇತ್ರದ ಮಹದೇವ ತಾತ ಗದ್ದುಗೆ ಪಕ್ಕದ ಸ್ನಾನ ಘಟ್ಟದ ಬಳಿ ತಾಯಿ ಮಗಳು ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಚೇಗೌಡನ ಕೊಪ್ಪಲು ಗ್ರಾಮದ ಮಂಜುಳಾ (39) ಹಾಗೂ ಸೌಮ್ಯಾ (19) ಆತ್ಮಹತ್ಯೆ ಮಾಡಿಕೊಂಡವರು. ಈ ಸಂಬಂಧ ಮಂಜುಳಾ ಅವರ ತಂದೆ ಬೆಟ್ಟೇಗೌಡ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇವರಿಬ್ಬರೂ ಮೊದಲೇ ಆತ್ಮಹತ್ಯೆಗೆ ತೀರ್ಮಾನ ಮಾಡಿಕೊಂಡು ಮನೆಯಿಂದ ಬಂದಿದ್ದು, ಆತ್ಮಹತ್ಯೆಗೆ ಮುನ್ನ ತಮ್ಮ ಮೊಬೈಲ್ ನಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಳಿಕ ನದಿಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಮಂಜುಳಾ ಅವರನ್ನು ಬಂಡಿಪಾಳ್ಯದ ಕುಮಾರ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಮಂಜುಳಾಗೆ ದೀಪಕ್ ಹಾಗೂ ಸೌಮ್ಯ ಎಂಬ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ. 7 ತಿಂಗಳ ಹಿಂದೆ ಸೌಮ್ಯಾಳ ಗಂಡ ಮೃತಪಟ್ಟಿದ್ದರಿಂದ ಜುಗುಪ್ಸೆಗೊಂಡು ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಳಗ್ಗಿನ ಸಮಯವಾಗಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಯಾರೂ ಇರಲಿಲ್ಲ. ಹೀಗಾಗಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ಆದರೆ ಅವರ ಮೃತದೇಹ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದದನ್ನು ಗ್ರಾಮಸ್ಥರು ನೋಡಿದ್ದು, ಕೂಡಲೇ ಈ ಬಗ್ಗೆ ಹುಲ್ಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಕರೆಸಲಾಗಿದ್ದು, ನದಿಯಿಂದ ಶವವನ್ನು ಹೊರ ತೆಗೆಯಲಾಗಿದೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.