ನೀವು ಮಾವು ಪ್ರಿಯರೇ, ಹಾಗಾದರೇ ತಿನ್ನೋ ಮುನ್ನ ಯೋಚಿಸ್ಲೇಬೇಕು...
ಮೈಸೂರು, ಜೂನ್ 3: ನೀವು ಮಾವು ಪ್ರಿಯರೆ? ಹೌದು ಎಂದಾದರೆ, ಮಾರುಕಟ್ಟೆಯಲ್ಲಿ ಹಣ್ಣು ಖರೀದಿಸುವ ಮುನ್ನ ತುಸು ಯೋಚಿಸಿ. ಇಲ್ಲದಿದ್ದರೆ, ಹಣ್ಣು ತಿಂದು ಆರೋಗ್ಯ ಕೆಡಿಸಿಕೊಳ್ಳಬೇಕಾದಿತು.
ಮಾವಿನ ಋತುಮಾನದ ಆರಂಭದಲ್ಲಿ ಹೆಚ್ಚು ಲಾಭ ಗಳಿಕೆಯ ದುರಾಸೆಗೆ ವರ್ತಕರು ಮಾವಿನಕಾಯಿಗಳನ್ನು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ಬಳಸಿ ಬೇಗ ಹಣ್ಣು ಮಾಡುವ ತಂತ್ರಗಾರಿಕೆಯನ್ನು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಕ್ಯಾಲ್ಸಿಯಂ ಕಾರ್ಬೈಡ್ ಸೇವನೆ ಕ್ಯಾನ್ಸರ್ ಕೂಡ ತರಬಲ್ಲದು ಎಂಬುದು ವೈದ್ಯರ ಆತಂಕ.
ಮಾವು ಮೇಳಕ್ಕೆ ಏಕೆ ಹೋಗಲೇಬೇಕು, ಈ ಬಾರಿಯ ವಿಶೇಷತೆಗಳೇನು?
ಸರ್ಕಾರ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮೇಲೆ ನಿಷೇಧ ಹೇರಿದ್ದರೂ ಮಾರುಕಟ್ಟೆಯಲ್ಲಿ ವರ್ತಕರು ಕದ್ದುಮುಚ್ಚಿ ಯಥೇಚ್ಛವಾಗಿ ಅದನ್ನು ಬಳಕೆ ಮಾಡಿ ಗ್ರಾಹಕರಿಗೆ ಮರಳು ಮಾಡುವ ಕೆಲಸವನ್ನು ನಿರಾಂತಕವಾಗಿ ಮುಂದುವರಿಸಿದ್ದಾರೆ. ಇದೇ ಆತಂಕಕ್ಕೆ ಎಡೆಮಾಡಿಕೊಟ್ಟಿರುವುದು.
ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಏಕೆ?: ಮಾವಿನ ಋತುವಿನ ಆರಂಭದಲ್ಲಿ ಹಣ್ಣಿನ ಬೆಲೆ ಹೆಚ್ಚಿರುತ್ತದೆ. ಹೀಗಾಗಿ ಕೆಲವು ವರ್ತಕರು ಲಾಭ ಗಳಿಕೆಯ ಸಲುವಾಗಿ ಕಾಯಿಯನ್ನು ಕಿತ್ತು, ಅವುಗಳನ್ನು ಕ್ಯಾಲ್ಸಿಯಂ ಕಾರ್ಬೈಡ್ ದ್ರಾವಣದಲ್ಲಿ ಅದ್ದಿ, ಬಲವಂತವಾಗಿ ಹಣ್ಣು ಮಾಡುತ್ತಾರೆ. ಕಾರ್ಬೈಡ್ ಮಾರಾಟಕ್ಕೆ ಸರ್ಕಾರ ನಿಷೇಧ ಹೇರಿದ್ದರೂ ನಗರದ ಕೆಲವು ಗೊಬ್ಬರ ಮತ್ತು ರಾಸಾಯನಿಕ ಮಾರಾಟ ಅಂಗಡಿಗಳಲ್ಲಿ ಈಗಲೂ ಇದರ ಮಾರಾಟ ನಡೆದಿದೆ. ಹಣ ತೆತ್ತು ಈ ಬಿಳಿ ವಿಷವನ್ನು ಕೊಂಡೊಯ್ಡು ಹಣ್ಣು ಮಾಗಿಸಲಾಗುತ್ತಿದೆ.
ತೊಂದರೆ ಏನು?: ಕಾರ್ಬೈಡ್ ಯುಕ್ತ ಹಣ್ಣನ್ನು ನೇರವಾಗಿ ಸೇವನೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಿಂದ ಹಿಡಿದು ದೀರ್ಘಕಾಲೀನ ಸಮಸ್ಯೆಗಳಿಗೂ ಈ ರಾಸಾಯನಿಕ ಕಾರಣವಾಗಬಹುದು. ಅದರಲ್ಲೂ ಕ್ಯಾನ್ಸರ್ನಂತಹ ಮಹಾಮಾರಿ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವೈದ್ಯರು.
ಲಾಲ್ಬಾಗ್ನಲ್ಲಿ ಮಾವು-ಹಲಸು ಮೇಳಕ್ಕೆ ಕುಮಾರಸ್ವಾಮಿ ಚಾಲನೆ
ಏನಿದು ಕಾರ್ಬೈಡ್?: ಕ್ಯಾಲ್ಸಿಯಂ ಕಾರ್ಬೈಡ್ (CaC2) ಮಾರುಕಟ್ಟೆಯ ವರ್ತಕರು, ರೈತರಿಗೆ ಕಾರ್ಬೈಡ್ ಎಂದೇ ಪರಿಚಿತ. ಹಣ್ಣಿನ ವ್ಯಾಪಾರಿಗಳಿಗೆ ಇದರ ಪರಿಚಯ ಇದ್ದೇ ಇರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಮಾವು, ಬಾಳೆ, ಕಲ್ಲಂಗಡಿ ಸಹಿತ ವಿವಿಧ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಇದನ್ನು ಬಳಸಲಾಗುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳು ಇದರ ಬಳಕೆಗೆ ನಿಷೇಧ ಹೇರಿವೆ. ಆದರೆ ಮಾರುಕಟ್ಟೆಯಲ್ಲಿ ಇಂದಿಗೂ ಮುಕ್ತವಾಗಿ, ಚಿಲ್ಲರೆ ರೂಪದಲ್ಲಿ ಇದರ ಮಾರಾಟ ನಡೆದಿದೆ. ಈ ಕಾರ್ಬೈಡ್ ಆರ್ಸೆನಿಕ್ ಮತ್ತು ಫಾಸ್ಪರಸ್ ನಂತಹ ರಾಸಾಯನಿಕಗಳನ್ನು ಒಳಗೊಂಡಿದ್ದು, ಇವು ಮಾನವ ದೇಹದ ಅಂಗಾಂಗಳಿಗೆ ಸಂಚಕಾರ ತರಬಲ್ಲವು. ಮುಖ್ಯವಾಗಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳನ್ನು ತಂದೊಡ್ಡಬಲ್ಲವು ಎಂಬುದನ್ನು ಈಚಿನ ವೈಜ್ಞಾನಿಕ ಸಂಶೋಧನೆಗಳು ನಿರೂಪಿಸಿವೆ.
ಅಂಚೆಯಲ್ಲಿ ಪತ್ರ ಮಾತ್ರವಲ್ಲ ಮಾವಿನ ಹಣ್ಣು ಕೂಡ ನಿಮ್ಮ ಮನೆಗೆ ಬರುತ್ತೆ!
ನೈಸರ್ಗಿಕ ವಿಧಾನಗಳೇನು?: ಹಣ್ಣನ್ನು ಮಾಗಿಸಲು ನೈಸರ್ಗಿಕವಾದ ಹಲವು ವಿಧಾನಗಳಿವೆ. ಒಣ ಹುಲ್ಲಿನಲ್ಲಿ ಚೆನ್ನಾಗಿ ಬಲಿತ ಕಾಯಿಗಳನ್ನು ಮುಚ್ಚಿಡುವುದು ಅತ್ಯಂತ ನೈಸರ್ಗಿಕ ವಿಧಾನ. ಅದನ್ನು ಬಿಟ್ಟರೆ ಎಥಿಲಿನ್ ನಂತಹ ಹಾನಿಕಾರಕವಲ್ಲದ ದ್ರಾವಣಗಳನ್ನು ಬಳಸಿ ಹಣ್ಣನ್ನು ಮಾಗಿಸಬಹುದು. ಇದರಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಯಾವುದೇ ಹಣ್ಣಿನಲ್ಲಿ ಅದನ್ನು ಬಳಸುವ ಮುನ್ನ ನೀರಿನಲ್ಲಿ ಒಂದೆರಡು ನಿಮಿಷ ನೆನೆಸಿ, ಚೆನ್ನಾಗಿ ತೊಳೆದೇ ತಿನ್ನಬೇಕು ಎನ್ನುವುದು ವೈದ್ಯರ ಸಲಹೆ.
ಪತ್ತೆ ಹಚ್ಚುವುದು ಹೇಗೆ? : ಹಣ್ಣುಗಳು ಅಲ್ಲಲ್ಲಿ ಒಣಗಿದಂತೆ ಕಾಣುವುದು, ಹಣ್ಣಿನ ಮೇಲೆ ಚುಕ್ಕೆಗಳು ಇರುವುದು, ಹಣ್ಣು ರುಚಿಯಾಗಿ ಇರದಿರುವುದು ಗಮನಕ್ಕೆ ಬಂದರೆ ಅದು ಕ್ಯಾಲ್ಸಿಯಂ ಕಾರ್ಬೈಡ್ ನಿಂದ ಮಾಗಿಸಿದ ಹಣ್ಣು ಎಂದು ತಿಳಿಯಬೇಕು.