ಯುವಕರಲ್ಲೇ ಕಾಣಿಸಿಕೊಳ್ಳುತ್ತಿದೆ ಅತಿ ಹೆಚ್ಚು ಕೊರೊನಾ ಸೋಂಕು
ಮೈಸೂರು, ಏಪ್ರಿಲ್ 3: ಸೆಕೆಂಡರಿ ಕಾಂಟ್ಯಾಕ್ಟ್ ನವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಬಾರದ ಪರಿಣಾಮ ಮೈಸೂರಿನಲ್ಲಿ ಕೊರೊನಾ ಹೆಚ್ಚಾಗಿದ್ದು, ಅದರಲ್ಲೂ ಯುವಕರಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿನ್ನೆ ಕೊರೊನಾ ಪಾಸಿಟಿವ್ ಪ್ರಕರಣ 170ರ ಗಡಿ ದಾಟಿದ್ದು, ಇದರಲ್ಲಿ ನಗರ ಪ್ರದೇಶದಲ್ಲೇ ಹೆಚ್ಚು ಪಾಸಿಟಿವ್ ಪ್ರಕರಣಗಳ ವರದಿಯಾಗಿದೆ. ಸದ್ಯ ಪ್ರತಿದಿನ 6 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಮಾರ್ಗಸೂಚಿಗೆ ಜಿಮ್ ಅಸೋಸಿಯೇಷನ್ ತೀವ್ರ ಆಕ್ಷೇಪ
ಇನ್ನೂ, ಸಣ್ಣ ವಯಸ್ಸಿನವರಲ್ಲಿ ನಮಗೆ ಕೊರೊನಾ ಬರಲ್ಲ ಎಂಬ ಅಸಡ್ಡೆ ಮನೋಭಾವ ಇದೆ. ಇದರ ಪರಿಣಾಮವಾಗಿ ಯುವಕರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ಜಿಲ್ಲಾಡಳಿತ ಸಹ ಅನಾಲಿಸಿಸ್ ಮಾಡಿದೆ. ಜತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಅದರಲ್ಲೂ ಬೇರೆ ಕಾಯಿಲೆ ಇರುವವರಿಗೆ ಕೊರೊನಾ ಸೋಂಕು ತಗುಲಿ ಸಾವನ್ನಪ್ಪುತ್ತಿದ್ದಾರೆ ಎಂದರು.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳನ್ನು ಮುಚ್ಚುವ ಪ್ರಸ್ತಾಪವನ್ನು ನಾವು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿಲ್ಲ. ಪ್ರವಾಸಿ ತಾಣಗಳಿಂದ ಕೊರೊನಾ ಹೆಚ್ಚಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗಿಂತ ಮೈಸೂರಿನಲ್ಲಿ ಸೋಂಕು ಅತಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಪ್ರತಿ ದಿನ ಆರು ಸಾವಿರ ಟೆಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದಲ್ಲದೇ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳ ಬಳಕೆ ಮಾಡಿಕೊಳ್ಳುವ ಸಂಬಂಧ, ವಾರ್ಡ್ವಾರು ಖಾಸಗಿ ಆಸ್ಪತ್ರೆಗಳ ಮೂಲಕ ನಾಳೆಯಿಂದ ವ್ಯಾಕ್ಸಿನ್ ನೀಡುತ್ತೇವೆ. ಇದಲ್ಲದೇ ಪ್ರತಿ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವಾಗ ಡಾಕ್ಟರ್ ಹಾಗೂ ಸೀನಿಯರ್ ನರ್ಸ್ ಸ್ಥಳದಲ್ಲಿ ಇರಲೇಬೇಕು ಎಂದು ಸೂಚಿಸಿದ್ದಾರೆ.
ಇದೇ ವೇಳೆ ಲಸಿಕೆ ಪಡೆದರೂ ಪಾಸಿಟಿವ್ ಬಂದ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಲಸಿಕೆ ಪಡೆದ ಮಾತ್ರಕ್ಕೆ ಪಾಸಿಟಿವ್ ಬರಲ್ಲ ಅಂತ ಯಾರೂ ಹೇಳಿಲ್ಲ. ಆದರೆ ಸಾವು ನೋವು ಸಂಭವಿಸಲ್ಲ ಎನ್ನುವ ವಿಶ್ವಾಸ ಅಷ್ಟೇ. ಎರಡೂ ಲಸಿಕೆ ಪಡೆದ ಬಳಿಕ ಸ್ವಲ್ಪ ಸೋಂಕು ತಗಲುವುದು ಕಡಿಮೆ ಆಗಲಿದೆ ಎಂದು ತಿಳಿಸಿದರು.
ಇನ್ನು ಚಿತ್ರಮಂದಿರಗಳಲ್ಲಿ ಶೇ.50 ಆಸನ ಮಾತ್ರ ಭರ್ತಿಗೆ ಮಾತ್ರ ಅವಕಾಶ ನೀಡಿರುವ ಸರ್ಕಾರದ ಆದೇಶದ ಕುರಿತು ಮಾಹಿತಿ ನೀಡಿದ ಅವರು, ಇಂದಿನಿಂದ ಥಿಯೇಟರ್ಗೆ ಶೇ.50ರಷ್ಟು ಅವಕಾಶ ಕಡ್ಡಾಯವಾಗಿದ್ದು, ಈಗಾಗಲೇ ಬುಕ್ಕಿಂಗ್ ಫುಲ್ ಆಗಿದ್ದರೂ, ರದ್ದು ಮಾಡಬೇಕು. ಜೊತೆಗೆ ಇಂದಿನಿಂದ ಸರ್ಕಾರದ ಹೊಸ ಮಾರ್ಗಸೂಚಿ ಕಡ್ಡಾಯ ಜಾರಿಗೊಳ್ಳಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.