ಮೈಸೂರಿನಲ್ಲೆಲ್ಲೂ ಕೋತಿಗಳು ಸಾರ್ ಕೋತಿಗಳು !
ಕಾನೂನು ಭೀತಿಯಿಂದಾಗಿ ಮಹಾ ನಗರ ಪಾಲಿಕೆಯ ಅಧಿಕಾರಿಗಳೂ ಕೋತಿ ಹಿಡಿಯಲು ಹಿಂದೇಟು ಹಾಕುತ್ತಿದ್ದು, ಅರಣ್ಯ ಇಲಾಖೆಯು ಅಸಹಾಯಕವಾಗಿ ಕೂತಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣ.
ಮೈಸೂರು, ಮಾರ್ಚ್ 2 : ನಗರದ ವಿವಿಧ ಬಡಾವಣೆಗಳಲ್ಲಿ ಕೋತಿಗಳ ಕಾಟ ಹೆಚ್ಚುತ್ತಿದೆ. ಆದರೆ, ಅರಣ್ಯ ಇಲಾಖೆ ಹಾಗೂ ನಗರಪಾಲಿಕೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯ ಕಾರಣ ಕೋತಿಗಳ ನಿಯಂತ್ರಣ ಇದುವರೆವಿಗೂ ಸಾಧ್ಯವಾಗಿಲ್ಲ. ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಲು ನಾವು ಸಕಲ ಸಿದ್ಧತೆ ಮಾಡಿಕೊಂಡಿದ್ದೇವಾದರೂ ಅರಣ್ಯ ಇಲಾಖೆಯ ಅಸಹಕಾರದಿಂದ ನಾವು ಅಸಹಾಯಕರಾಗಿದ್ದೇವೆ ಎನ್ನುತ್ತಾರೆ ನಗರ ಪಾಲಿಕೆ ಅಧಿಕಾರಿಗಳು.
ಕೋತಿಗಳನ್ನು ಅಷ್ಟು ಸುಲಭವಾಗಿ ಯಾರೂ ಹಿಡಿಯುವಂತಿಲ್ಲ. ಅದಕ್ಕೆ ಕಾನೂನಿನಲ್ಲಿ ಸಾಕಷ್ಟು ಮಿತಿಗಳಿವೆ. ಪ್ರಾಣಿ ಸಂರಕ್ಷಣಾ ಕಾಯ್ದೆಯನ್ವಯ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಇನ್ನಿತರ ಇಲಾಖೆಯ ಅಧಿಕಾರಿಗಳು ಅಥವಾ ಬೇರೆ ಯಾರೇ ಆಗಲಿ ಕೋತಿಗಳನ್ನು ಹಿಡಿದಲ್ಲಿ 5 ವರ್ಷಗಳ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.
ಹೀಗಾಗಿ ಕೋತಿಗಳ ನಿಯಂತ್ರಣಕ್ಕೆ ನಗರಪಾಲಿಕೆ, ಪುರಸಭೆ, ನಗರ ಸಭೆ ಹೀಗೆ ಯಾವುದೇ ಇಲಾಖೆ ಓಡಿಸಲು ಬಂದವರ ವಿರುದ್ಧವೇ ತಿರುಗಿ ಬೀಳುತ್ತಿವೆ. ಆದರೆ, ಅರಣ್ಯ ಇಲಾಖೆಯ ಅನುಮತಿ ಸಿಗದ ಹಿನ್ನೆಲೆ ಯಲ್ಲಿ ಗನ್ ಮೂಲಕ ಶಬ್ದ ಮಾಡಿ ಕೋತಿಗಳನ್ನು ಸ್ಥಳದಿಂದ ಓಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ, ಕೋತಿಗಳು ಸ್ವಲ್ಪ ಸಮಯದ ನಂತರ ಅದೇ ಸ್ಥಳಕ್ಕೆ ವಾಪಸ್ಸಾಗುತ್ತಿವೆ. ಹೀಗಾಗಿ ಅವುಗಳನ್ನು ಹಿಡಿದು ಕಾಡಿಗೆ ಬಿಡುವ ಮಾರ್ಗವೇ ಅಂತಿಮ ಎನ್ನುವುದು ಪಾಲಿಕೆ ಅಧಿಕಾರಿಗಳ ಮಾತು.
ಕಳೆದ 2014ರಿಂದಲೂ ನಗರಪಾಲಿಕೆ ಅಧಿಕಾರಿಗಳು ಕೋತಿ ಹಿಡಿಯಲು ಮುಂದಾಗುತ್ತಿಲ್ಲ. ನಾವು ಕೋತಿ ಹಿಡಿಯಲು ಅರ್ಜಿ ಹಾಕಿದರೆ ಅಷ್ಟು ಸುಲಭವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಅನುಮತಿ ನೀಡುವುದಿಲ್ಲ. ಹೀಗಾಗಿ ನಾವೇಕೆ ಅವರ ಮುಂದೆ ಕೈಕಟ್ಟಿ ನಿಲ್ಲಬೇಕು ಎನ್ನುವುದು ಅಧಿಕಾರಿಗಳ ವಾದ. ನಗರದಲ್ಲಿ ಕೂಡ ಹಲವಾರು ವರ್ಷಗಳಿಂದ ಕೋತಿಗಳ ಸಮಸ್ಯೆ ತೀವ್ರವಾಗಿದೆ.
ನಗರದ ಸರಸ್ವತಿಪುರಂ, ಸಿದ್ಧಾರ್ಥ ಬಡಾವಣೆ, ಗೋಕುಲಂ, ಒಂಟಿಕೊಪ್ಪಲು ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮನೆಯ ಒಳಗೇ ನುಗ್ಗುವ ಕೋತಿಗಳು ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡುವುದಲ್ಲದೆ, ಕೋತಿಗಳನ್ನು ಹಿಡಿಯಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ, ಅರಣ್ಯ ಇಲಾಖೆಯವರು ಮಾತ್ರ ಸ್ಪಂದಿಸಿಲ್ಲ.
ಅಂತಿಮವಾಗಿ ಕಳೆದ 6 ತಿಂಗಳಿನಿಂದ ನಗರ ಪಾಲಿಕೆಯ ಪಶು ವೈದ್ಯಾಧಿಕಾರಿ ಡಾ.ಸುರೇಶ್ ಅವರು ಖುದ್ದು ಅರಣ್ಯ ಇಲಾಖೆಯ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೋತಿಗಳನ್ನು ಹಿಡಿಯಲು ಅನುಮತಿ ನೀಡುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ತಂಡ ಸಿದ್ಧ: ನಗರದಾದ್ಯಂತವಿರುವ ಕೋತಿಗಳ ಕಾಟವನ್ನು ಹತ್ತಿಕ್ಕಲು ನಗರಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಕೋತಿಗಳನ್ನು ಹಿಡಿಯುವಲ್ಲಿ ಪರಿಣಿತರಾಗಿರುವ ನಾಗಮಂಗಲದ ಗ್ರಾಮೀಣ ಕೂಟ ಹಾಗೂ ಪೂನಾ ರಾಜ್ಯದ ಮೀರಜ್ನಲ್ಲಿರುವ ಕೋತಿ ಹಿಡಿಯುವ ಪಡೆಯೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ.
ಎರಡೂ ತಂಡದವರೂ ಕೋತಿಗಳನ್ನು ಹಿಡಿಯುವಲ್ಲಿ ನುರಿತವರಾಗಿದ್ದಾರೆ. ಈ ತಂಡಗಳು ಈಗಾಗಲೇ ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಇನ್ನಿತರ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಕೋತಿಗಳನ್ನು ಹಿಡಿದು ಕಾಡಿಗಟ್ಟುವ ಕೆಲಸ ಮಾಡಿವೆ. ಹೀಗಾಗಿ ಆದಷ್ಟು ಶೀಘ್ರವಾಗಿ ಅರಣ್ಯ ಇಲಾಖೆಯು ಕೋತಿಗಳನ್ನು ಹಿಡಿಯಲು ಅನುಮತಿ ನೀಡಿದಲ್ಲಿ ನಗರದಲ್ಲಿ ಕೋತಿಗಳನ್ನು ನಿಯಂತ್ರಣಕ್ಕೆ ತರಬಹುದು ಎಂಬುದು ಅಧಿಕಾರಿಗಳ ವಾದ.
ಅಂತಿಮವಾಗಿ ಕಳೆದ 6 ತಿಂಗಳಿನಿಂದ ನಗರ ಪಾಲಿಕೆಯ ಪಶು ವೈದ್ಯಾಧಿಕಾರಿ ಡಾ.ಸುರೇಶ್ ಅವರು ಖುದ್ದು ಅರಣ್ಯ ಇಲಾಖೆಯ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೋತಿಗಳನ್ನು ಹಿಡಿಯಲು ಅನುಮತಿ ನೀಡುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.