ಮೈಸೂರಿಗೆ ಪ್ರಧಾನಿ ಆಗಮನ: ಗಮನ ಸೆಳೆದ ಮೋದಿ ಯೋಗಾಸನದ ಮರಳು ಶಿಲ್ಪಗಳು
ಮೈಸೂರು, ಜೂನ್ 20: ಸಾಂಸ್ಕೃತಿಕ ನಗರ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಿಸಿದೆ. ಮೂರು ವರ್ಷಗಳ ಬಳಿಕ ಮೈಸೂರಿಗೆ ಆಗಮಿಸಿರುವ ಅವರು ಮಂಗಳವಾರ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಮೈಸೂರಿನ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮೋದಿ ಯೋಗಾಸನ ಮಾಡಲಿದ್ದಾರೆ. ಆದರೆ ಈಗಾಗಲೇ ಮೋದಿಯವರ ಮರಳಿನ ವಿವಿಧ ಶಿಲ್ಪಗಳನ್ನು ತಮ್ಮ ಮ್ಯೂಸಿಯಂನಲ್ಲಿ ನಿರ್ಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮೈಸೂರಿನ ಮರಳು ಕಲಾವಿದೆ ಎಂ.ಎನ್. ಗೌರಿ ಅವರು ಗೌರವ ಅರ್ಪಿಸಿದ್ದಾರೆ.
ಚಾಮುಂಡಿಬೆಟ್ಟಕ್ಕೆ ತೆರಳುವ ರಸ್ತೆಯ ಕೆ.ಸಿ.ಲೇಔಟ್ ನಲ್ಲಿರುವ ನಿರ್ಮಿಸಿರುವ ತಮ್ಮ ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂನಲ್ಲಿ ಮೋದಿಯವರ ಯೋಗಾಸನದ ವಿವಿಧ ಭಂಗಿಯನ್ನು ಮರಳಿನಲ್ಲಿ ನಿರ್ಮಿಸಿದ್ದು ಅದೀಗ ಎಲ್ಲರ ಗಮನಸೆಳೆಯುತ್ತಿದೆ. ಹಾಗೆ ನೋಡಿದರೆ ಮೈಸೂರು ಯೋಗ ವಿಷಯದಲ್ಲಿ ದೇಶ ವಿದೇಶಗಳ ಜನರ ಗಮನ ಸೆಳೆದಿದೆ. ಯೋಗ ಕಲಿಯಲೆಂದೇ ದೇಶ ವಿದೇಶಗಳಿಂದ ಜನ ಇಲ್ಲಿಗೆ ಬರುತ್ತಾರೆ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರಿಗೆ ಯೋಗದ ಪರಿಚಯ ಮಾಡಿಕೊಡುವ ಕೆಲಸವನ್ನು ಕಲಾವಿದೆ ಗೌರಿ ಅವರು ಮಾಡಿದ್ದಾರೆ.
ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿರುವ ಮೊದಲ ಪ್ರಧಾನಿ ಮೋದಿ!
ಮೈಸೂರಿನ ಮೊದಲ ಮರಳಿನ ಮ್ಯೂಸಿಯಂ
ಇನ್ನು ಮರಳು ಶಿಲ್ಪ ಕಲಾವಿದೆ ಎಂ.ಎನ್. ಗೌರಿ ಅವರ ಬಗ್ಗೆ ಹೇಳ ಬೇಕೆಂದರೆ, ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಇನ್ ಫೈನ್ ಆರ್ಟ್ಸ್ ಡಿಗ್ರಿ ಪಡೆದಿದ್ದು, ಹತ್ತಾರು ವರ್ಷಗಳಿಂದ ಮರಳಿನ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕಡಲ ತೀರದಲ್ಲಿ ಮರಳಿನ ಶಿಲ್ಪಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಮರಳಿನ ಮ್ಯೂಸಿಯಂ ಕೂಡ ಇರುತ್ತದೆ. ಇದೆಲ್ಲವನ್ನು ನೋಡಿದ್ದ ಅವರು ತಾವೇಕೆ ಒಂದು ಮರಳಿನ ಮ್ಯೂಸಿಯಂನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಬಾರದು ಎಂದು ಆಲೋಚನೆ ಮಾಡಿದರು.
ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ
ಗೌರಿಗೆ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವುದು ಬಹುಮುಖ್ಯವಾಗಿತ್ತು. ಜತೆಗೆ ಪ್ರವಾಸಿಗರನ್ನು ಸೆಳೆಯುವ ಮೈಸೂರಿನಲ್ಲಿ ಒಂದು ಮರಳಿನ ಮ್ಯೂಸಿಯಂ ಮಾಡಲೇಬೇಕೆಂಬ ನಿರ್ಧಾರ ಮಾಡಿದರು. ಅದರ ಫಲವಾಗಿ 2014ರಲ್ಲಿ ಹತ್ತರಿಂದ ಹದಿಮೂರು ಚದರಡಿ ವಿಸ್ತೀರ್ಣದಲ್ಲಿರುವ ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ ಆರಂಭಗೊಂಡಿತು.
ಇವತ್ತು ಈ ಮರಳಿನ ಮ್ಯೂಸಿಯಂನಲ್ಲಿ ನೂರಾರು ಶಿಲ್ಪಗಳು ಅರಳಿದ್ದು, ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನಸೆಳೆಯುತ್ತಿದೆ. ಅಷ್ಟೇ ಅಲ್ಲದೆ ಮೈಸೂರಿಗೊಂದು ಆಕರ್ಷಣೆಯಾಗಿಯೂ, ಪ್ರವಾಸಿ ತಾಣವಾಗಿಯೂ ಗಮನಸೆಳೆಯುತ್ತಿದೆ. ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಿದರೆ ಇಲ್ಲಿ ನಿರ್ಮಾಣಗೊಂಡ ಸುಮಾರು ಹದಿನೈದು ಅಡಿಯ ಸುಂದರ ಗಣಪತಿಯ ಮರಳಿನ ಶಿಲ್ಪ ಸ್ವಾಗತಿಸುತ್ತದೆ.ಮೈಸೂರಿಗೆ ಪ್ರಧಾನಿ ಭೇಟಿ: ಪ್ರತಿಭಟಿಸಿ ಗಮನ ಸೆಳೆದ ರೈತರು
ವಿಭಿನ್ನ ವೈಶಿಷ್ಟ್ಯ ಶಿಲ್ಪಗಳು
ಈ ಮರಳಿನ ಶಿಲ್ಪ ನಿರ್ಮಾಣಕ್ಕೆ ನೂರಾರು ಲೋಡ್ ಮರಳನ್ನು ಬಳಸಿದ್ದು, ಎಲ್ಲ ಶಿಲ್ಪಗಳನ್ನು ಶೃದ್ಧೆಯಿಂದ ಮಾಡಿದ್ದು, ವಿಭಿನ್ನ ಮತ್ತು ವೈಶಿಷ್ಟ್ಯ ಪೂರ್ಣವಾಗಿರುವುದು ಎದ್ದು ಕಾಣಿಸುತ್ತದೆ. ಇದರಲ್ಲಿ ಮೈಸೂರು ಮಹಾರಾಜರ ಅಧಿದೇವತೆ ಚಾಮುಂಡೇಶ್ವರಿ, ವಿಶ್ವವಿಖ್ಯಾತ ದಸರಾದ ಜಂಬೂಸವಾರಿ, ಕೃಷ್ಣನ ಗೀತೋಪದೇಶ ಹೀಗೆ ಹಲವು ಕಲಾಕೃತಿಗಳು ಕಣ್ಮನ ಸೆಳೆಯುತ್ತದೆ.
ಕಲಾವಿದೆ ಗೌರಿ ಸದಾ ಏನಾದರೊಂದು ಸಾಧಿಸಬೇಕೆನ್ನುವ ಛಲಗಾತಿಯಾಗಿದ್ದು, ತನ್ನ ಕಲಾ ಪ್ರತಿಭೆಯ ಮೂಲಕ ಈಗಾಗಲೇ ಹಲವು ರೀತಿಯ ಮರಳಿನ ಶಿಲ್ಪಗಳನ್ನು ನಿರ್ಮಿಸಿದ್ದು, ಅದರಲ್ಲಿ ಕೆಲವು ಅವರಿಗೆ ಗೌರವವನ್ನು ತಂದು ಕೊಟ್ಟಿದೆಯಲ್ಲದೆ, ಖ್ಯಾತಿಯನ್ನು ಇಮ್ಮಡಿಸಿದೆ.
ಗಮನ ಸೆಳೆಯುತ್ತಿರುವ ಮೋದಿ ಯೋಗಾಸನ ಶಿಲ್ಪ
ಇದುವರೆಗೆ ಸುತ್ತೂರಿನ ಅಖಿಲ ಭಾರತ ವೀರಶೈವ ಮಹಾ ಸಭಾದಲ್ಲಿ ಮರಳಿನಿಂದ ಮಾಡಿದ ಪರಮೇಶ್ವರ, ಲಿಂಗ ಹಾಗೂ ಹಾವಿನ ಕೃತಿಗಳು, ಮಡಿಕೇರಿಯ ದಸರಾದಲ್ಲಿ ಮಾಡಿದ 'ಎ ಟ್ರಿಬ್ಯೂಟ್ ಟು ಅಬ್ದುಲ್ ಕಲಾಂ' ಬೆಂಗಳೂರು ಲಾಲ್ ಬಾಗ್ ನಲ್ಲಿನ ಪ್ರದರ್ಶನ ಮೆಚ್ಚುಗೆ ಪಡೆದಿದೆ. ಇನ್ನು ತಿರುಚ್ಚಿಯಲ್ಲಿ ಮಾಡಿದ ಮರಳಿನ ಕಲಾ ಕೃತಿ ಇದುವರೆಗೆ ರಚಿಸಿರುವ ಮರಳಿನ ಶಿಲ್ಪಗಳಲ್ಲಿ ಅತಿದೊಡ್ಡದಾಗಿದೆ. ಇದು 12 ಅಡಿ ಎತ್ತರ, 20 ಅಡಿ ಉದ್ದ ಹಾಗೂ 60 ಅಡಿ ಅಗಲವಿರುವುದು ವಿಶೇಷವಾಗಿದೆ.
ಸದ್ಯ ತಮ್ಮ ಮ್ಯೂಸಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ಭಂಗಿಗಳಲ್ಲಿ ಯೋಗಾಸನ ಮಾಡುತ್ತಿರುವ ಮರಳಿನ ಶಿಲ್ಪಗಳು ಸುಂದರವಾಗಿ ಮೂಡಿ ಬಂದಿದ್ದು, ಮೋದಿ ಮೈಸೂರಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಎಲ್ಲರ ಚಿತ್ತ ಇತ್ತ ನೆಡುವಂತೆ ಮಾಡಿದೆ.