ಮುಸ್ಲಿಮರು ಈ ದೇಶದ ಪ್ರಜೆಗಳು, ವ್ಯಾಪಾರ ಮಾಡಲು ಅವಕಾಶ ಕೊಡಿ; ಎಚ್. ವಿಶ್ವನಾಥ್
ಮೈಸೂರು, ಮಾರ್ಚ್ 23: ಮುಸ್ಲಿಮರು ಈ ದೇಶದ ಪ್ರಜೆಗಳು, ಹಾಗಾಗಿ ಹಿಂದೂ ಹಬ್ಬದ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ಉಡುಪಿಯ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶವನ್ನು ಹಿಂದೂ ಸಂಘಟನೆಗಳು ನಿರ್ಬಂಧಿಸಿವೆ. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ಇಂತಹ ನಡೆ ಅಮಾನವೀಯ. ಮುಸ್ಲಿಮರು ಈ ದೇಶದ ಪ್ರಜೆಗಳು. ಅವರನ್ನು ಅಲ್ಲಿ ವ್ಯಾಪಾರಕ್ಕೆ ಬರಬೇಡಿ, ಇಲ್ಲಿ ಬರಬೇಡಿ ಎಂದು ಹೇಳುವುದು ಸಂವಿಧಾನ ವಿರೋಧಿ ನಿಲುವು ಎಂದು ಹೇಳಿದರು.
ಮುಸ್ಲಿಮರಿಗೆ ವ್ಯಾಪಾರ ನಿಷೇಧ ಸರಿಯಲ್ಲ, ಎಲ್ಲರೂ ಭಕ್ತರೇ; ಬಪ್ಪನಾಡು ಮಂಡಳಿ ಸ್ಪಷ್ಟನೆ
ಹೀಗೆ ಮಾಡಿದರೆ ಅವರು ಎಲ್ಲಿ ಹೋಗುತ್ತಾರೆ ನೀವೇ ಹೇಳಿ? ರಾಜ್ಯ ಸರ್ಕಾರ ತಕ್ಷಣ ಮುಸ್ಲಿಂ ವರ್ತಕರ ನೆರವಿಗೆ ಬರಬೇಕು. ಇಂತಹ ಬಹಿಷ್ಕಾರಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜೇಮ್ಸ್ ಚಿತ್ರ ಎತ್ತಂಗಡಿ ಆಗಬಾರದು
ಚಿತ್ರಮಂದಿರಗಳಿಂದ ಜೇಮ್ಸ್ ಚಿತ್ರ ತೆರವು ವಿಚಾರ ಕುರಿತಂತೆ ಮಾತನಾಡಿದ ಎಂಎಲ್ಸಿ ಎಚ್. ವಿಶ್ವನಾಥ್, ಸಾಂಸ್ಕೃತಿಕ ರಾಯಭಾರಿಯಾದ ಕುಟುಂಬಕ್ಕೆ ಅವಮಾನ ಮಾಡಬಾರದು. ಡಾ. ರಾಜ್ಕುಮಾರ್ ಕುಟುಂಬ ರಾಜ್ಯದಲ್ಲಿ ಸಾಂಸ್ಕೃತಿಕ ರಾಯಬಾರಿಯಂತೆ ಇದೆ. ಅವರ ಕುಡಿ ಡಾ. ಪುನೀತ್ ರಾಜ್ಕುಮಾರ್ ನಿಧನದ ನಂತರ ಜೇಮ್ಸ್ ಚಿತ್ರ ಬಿಡುಗಡೆ ಆಗಿದೆ. ಇಡೀ ಕುಟುಂಬ ರಾಜ್ಯದ ಜನರ ಜೊತೆ ಬೆಸೆದುಕೊಂಡಿದೆ. ಈ ಸಂದರ್ಭದಲ್ಲಿ ಜೇಮ್ಸ್ ಎತ್ತಂಗಡಿ ಆಗಬಾರದು. ಜೇಮ್ಸ್ ಚಿತ್ರ ಚಿತ್ರಮಂದಿರಗಳಿಂದ ಎತ್ತಂಗಡಿ ಆದರೆ ರಾಜ್ಯದ ಜನ ರೊಚ್ಚಿಗೇಳುತ್ತಾರೆ ಎಂದು ಎಚ್ಚರಿಸಿದರು.
ತೆಲುಗಿನ ಆರ್ಆರ್ಆರ್ ಚಿತ್ರಕ್ಕಾಗಿ ಜೇಮ್ಸ್ ಎತ್ತಂಗಡಿ ಆಗಬಾರದರು. ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಬೇಕು. ಕಾಶ್ಮೀರ್ ಫೈಲ್ಸ್ ಸಿನಿಮಾವೇ ಬೇರೆ. ಅದೊಂದು ರಕ್ತಸಿಕ್ತ ಚರಿತ್ರೆ. ಅದನ್ನು ನೋಡಬೇಕಾದವರು ನೋಡುತ್ತಾರೆ. ಮೊದಲು ನಮ್ಮ ಸಿನಿಮಾಗಳಿಗೆ ಆದ್ಯತೆ ಕೊಡಬೇಕು ಎಂದರು.
Recommended Video
ಮುಸ್ಲಿಂ ಸಮುದಾಯದವರು ಮಳಿಗೆ ತೆರೆಯುವುದನ್ನು ನಿರಾಕರಿಸುವುದು ತಪ್ಪು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.