ಡ್ರಗ್ಸ್ ಮಾಫಿಯಾ ಮಟ್ಟಹಾಕಲು ಈಗ ಸಮಯ ಬಂದಿದೆ: ಎಚ್.ವಿಶ್ವನಾಥ್
ಮೈಸೂರು, ಸೆಪ್ಟೆಂಬರ್ 2: ಕೋವಿಡ್ ಹೇಗೆ ಜಗತ್ತಿನ್ನು ಆವರಿಸಿದೆಯೋ, ಅದೇ ರೀತಿ ಡ್ರಗ್ಸ್ ದಂಧೆ ಕೂಡ ಗೊತ್ತಿಲ್ಲದೆ ಆವರಿಸಿದೆ. ಇಂದಿನ ಯುವಕ, ಯುವತಿಯರು ಅರಿವಿಲ್ಲದೆ ಅದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರುತ್ತಿದ್ದು, ಯಾವುದೇ ಸರ್ಕಾರವನ್ನು ಬೊಟ್ಟು ಮಾಡಬಾರದು. ಇದು ನಿನ್ನೆ ಮೊನ್ನೆ ಪ್ರಕರಣ ಅಲ್ಲ. ನಮಗೆ ಅರಿವು ಇಲ್ಲದೆ ನಾವೇ ಬೆಳೆಸಿಕೊಂಡು ಬಂದಿದ್ದೇವೆ ಎಂದರು.
ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲ: ಶಿವರಾಮೇಗೌಡ
ಡ್ರಗ್ಸ್ ಮಾಫಿಯಾ ಹಲವು ಹಂತದಲ್ಲಿ ಬೆಳೆದು ಸೆಲೆಬ್ರಿಟಿಗಳವರೆಗೂ ಬಂದು ನಿಂತಿದೆ. ಒಬ್ಬ ಸೆಲೆಬ್ರಿಟಿಯೇ ಅದನ್ನು ಬಯಲು ಮಾಡಿದ್ದು ವಿಶೇಷ ಹಾಗೂ ಸೂಜಿಗ. ಪೊಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಆ ಸೆಲೆಬ್ರಿಟಿ ಮಾಡಿದ್ದಾನೆ ಎಂದು ವಿಶ್ವನಾಥ್ ತಿಳಿಸಿದರು.
ಪೊಲೀಸರು ಈಗ ಸಮಾಜದ ಮುಂದೆ ತಲೆಬಾಗಿ ನಿಲ್ಲುವ ಪರಿಸ್ಥಿತಿಗೆ ಬಂದಿದ್ದಾರೆ. ಇಂದು ಗಂಭೀರ ಸಮಸ್ಯೆಯನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ. ಈ ಗಂಭೀರ ಸಮಸ್ಯೆಯನ್ನು ಗಂಭೀರವಾಗಿಯೇ ತೆಗೆದುಕೊಳ್ಳಬೇಕು. ನಾವೆಲ್ಲ ಈ ಬಗ್ಗೆ ಮಾತನಾಡಬೇಕು ಎಂದು ಮೈಸೂರಿನಲ್ಲಿ ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿದರು.
ಡ್ರಗ್ಸ್ ದಂಧೆಯನ್ನ ಹತ್ತಿಕ್ಕಲೇಬೇಕು, ಯಾರ್ಯಾರು ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ರಾಜಕಾರಣಿಗಳ, ಚಿತ್ರರಂಗದವರ, ಉದ್ಯಮಿಗಳ ಮಕ್ಕಳ ದೌಲು ಎಲ್ಲರಿಗೂ ತಿಳಿಯಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
ಯಾರು ಡ್ರಗ್ಸ್ ದಂಧೆಯನ್ನು ಬಹಿರಂಗ ಪಡಿಸಿದವರನ್ನು ವಿಮರ್ಶೆ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಅವರನ್ನು ಡ್ರಿಲ್ ಮಾಡಿ ವಿಚಾರಣೆ ಮಾಡುತ್ತಿದ್ದಾರೆ. ಇದು ಸಮಂಜಸವಲ್ಲ ಎಂದು ಇಂದ್ರಜಿತ್ ಲಂಕೇಶ್ ಪರ ಮಾಜಿ ಸಚಿವ ಎಚ್.ವಿಶ್ವನಾಥ್ ಬ್ಯಾಟ್ ಬೀಸಿದರು.
ಪೊಲೀಸರಿಗೆ ಎಲ್ಲವು ಗೊತ್ತಿದೆ, ಎಲ್ಲಿ ಕಳ್ಳನತ ಆಗುತ್ತೆ ಎಲ್ಲಿ ಕಳ್ಳರಿದ್ದಾರೆ. ದಂಡುಪಾಳ್ಯದವರು ಏನ್ ಮಾಡುತ್ತಿದ್ದಾರೆ ಅನ್ನೋದು ಸಹ ಗೊತ್ತಿದೆ. ಪೊಲೀಸರಿಗೆ ಗೊತ್ತಿಲ್ಲದೆ ಏನೂ ಆಗುವುದಿಲ್ಲ. ಆದರೂ ಅವರು ಗೊತ್ತಿಲ್ಲದರ ರೀತಿ ಇದ್ದಾರೆ. ಪಂಜಾಬ್ ರಾಜ್ಯ ಡ್ರಗ್ಸ್ ದಂಧೆಯಿಂದ ಹಾಳಾಗಿ ಹೋಗಿದೆ. ಅಲ್ಲಿನ ಸಿಎಂ ಕೂಡಾ ನಲುಗಿ ಹೋಗಿದ್ದಾರೆ. ಇದೀಗ ನಮ್ಮ ರಾಜ್ಯದಲ್ಲೂ ಅದೇ ರೀತಿಯ ವಾತವರಣ ನಿರ್ಮಾಣ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡ್ರಗ್ಸ್ ಬಗ್ಗೆ ಮಾತನಾಡಲು ಮಡಿವಂತಿಕೆ ಬೇಡ, ನನ್ನ ಮನೆಯಲ್ಲಿ ನನ್ನ ಮಗ ಏನ್ ಕುಡಿತಾನೋ ಏನ್ ತೆಗೆದುಕೊಳ್ಳುತ್ತಾನೋ ಗೊತ್ತಿಲ್ಲ.
ನನ್ನ ಮಗ ಯಾವ ದಂಧೆ ಮಾಡುತ್ತಾನೆ ಅಂತ ನನಗೆ ಗೊತ್ತಿರುವುದಿಲ್ಲ. ಹಾಗಾಗಿ ಎಲ್ಲರೂ ಅವಾರ ಮಕ್ಕಳ ಬಗ್ಗೆ ಚಿಂತನೆ ಮಾಡಬೇಕು. ಅವರ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.