“ಸಾ.ರಾ ಮಹೇಶ್ ನನ್ನ ಸಮನಲ್ಲ, ಅವನ ಬಗ್ಗೆ ನಾನು ಮಾತನಾಡೋದಿಲ್ಲ”
ಮೈಸೂರು, ಜುಲೈ 26: "ಸಾ.ರಾ ಮಹೇಶ್ ನನ್ನ ಸಮನಲ್ಲ, ಅವನ ಬಗ್ಗೆ ನಾನು ಮಾತನಾಡೋದೆ ಇಲ್ಲ" ಎಂದು ವಿಧಾನ ಪರಿಷತ್ ಗೆ ನೂತನವಾಗಿ ನಾಮ ನಿರ್ದೇಶನಗೊಂಡಿರುವ ಎಚ್.ವಿಶ್ವನಾಥ್ ಅವರು ಶಾಸಕ ಸಾ.ರಾ ಮಹೇಶ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಸಾ.ರಾ ಮಹೇಶ್ ನನಗೆ ಸಮನಲ್ಲ, ನನ್ನ ಪ್ರತಿಸ್ಪರ್ಧಿಯೂ ಅಲ್ಲ. ನಾನಂತೂ ಅವನ ಬಗ್ಗೆ ಮಾತನಾಡೋಲ್ಲ. 'ಸಾ.ರಾ Its not match to me'. ನನ್ನ ಆಯ್ಕೆಯ ಬಗ್ಗೆ ಕಾನೂನಿನ ತೊಡಕಿದ್ದರೆ ಅದನ್ನ ರಾಜ್ಯಪಾಲರೇ ಉತ್ತರ ಕೊಡುತ್ತಾರೆ. ಇವರು ಪತ್ರ ಬರೆಯುವುದರಿಂದ ನನಗೇನು ಸಮಸ್ಯೆ ಇಲ್ಲ. ಅದನ್ನು ತೀರ್ಮಾನ ಮಾಡೋದು ರಾಜ್ಯಪಾಲರು ಎಂದು ಕಿಡಿಕಾರಿದರು.
ವಿಶ್ವನಾಥ್ ಗೆ ಎಂಎಲ್ಸಿ ಸ್ಥಾನ; ಸಾರಾ ಮಹೇಶ್ ಹೇಳುತ್ತಿರುವುದೇನು?
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ವಿರೋಧ ಪಕ್ಷಗಳಿಗೆ ಬರೀ ವಿರೋಧ ಮಾಡೋದು ಮಾತ್ರವೇ ಗೊತ್ತು. ಅವರು ಅಧಿಕಾರದಲ್ಲಿದ್ದಾಗ ರಾತ್ರಿ ವೇಳೆಯೂ ಸೂರ್ಯ ಚಂದ್ರ ಕಾಣುತ್ತಾರೆ. ಆದರೆ ಅವರು ಅಧಿಕಾರದಲ್ಲಿಲ್ಲ ಎಂದರೆ ಅದೇಕೋ ರಾತ್ರಿ ವೇಳೆ ಸೂರ್ಯ ಕಾಣುತ್ತಿಲ್ಲ ಎನ್ನುತ್ತಾರೆ ಎಂದರು.
ವಿರೋಧ ಪಕ್ಷದವರಿಗೆ ಸರ್ಕಾರದ ಸಾಧನೆ ಅಥವಾ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡುವುದು ಗೊತ್ತಿಲ್ಲ. ಬಿಜೆಪಿ ಸರ್ಕಾರ ಒಂದು ವರ್ಷದಲ್ಲಿ ಒಂದಾದರೂ ಒಳ್ಳೆಯ ಕೆಲಸ ಮಾಡಿಲ್ಲವೇ? ಎಂದು ಪ್ರಶ್ನಿಸಿದ ಅವರು, ಆ ಒಂದು ಕೆಲಸವನ್ನಾದರೂ ಒಳ್ಳೆಯದು ಆಗಿದೆ ಅಂತ ಹೇಳಲಿ. ಅದನ್ನು ಬಿಟ್ಟು ಎಲ್ಲವನ್ನು ಟೀಕೆ ಮಾಡುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕರ ನಿಲುವುಗಳು ದ್ವಂದ್ವದಿಂದ ಕೂಡಿದೆ ಎಂದು ತಿಳಿಸಿದರು.
ಎಚ್ ವಿಶ್ವನಾಥ್ ಗೆ ತಪ್ಪಿದ ಟಿಕೆಟ್; ಸಾರಾ ಮಹೇಶ್ ಏನಂದರು...
ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮ ತಂಡ ಕಟ್ಟಿಕೊಂಡು ಕೆಲಸ ಮಾಡಿದ್ದಾರೆ. ಆದರೆ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ನುಂಗಿಹಾಕಿದೆ. ಆದರೂ ಕಷ್ಟದ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದು, ಇಂತಹ ಸರ್ಕಾರ ಅಧಿಕಾರಕ್ಕೆ ಬರಲು ನಾವು ಕಾರಣರಾಗಿದ್ದೇವೆ ಎನ್ನುವುದು ನನಗೆ ಹೆಮ್ಮೆ ತಂದಿದೆ. ನಮ್ಮ ನಡೆಯಿಂದ ಸಂವಿಧಾನದ ಅಡಿಯಲ್ಲಿ ಇಂತಹ ಬದಲಾವಣೆ ಆಗಿದೆ ಎನ್ನುವ ಸಮಾಧಾನವಿದೆ. ಒಂದು ವರ್ಷದ ಈ ಸಾಧನೆ ನನಗೆ ಸಾರ್ಥಕತೆ ಅನುಭವ ತಂದಿದೆ ಎಂದು ಸರ್ಕಾರಕ್ಕೆ ಶುಭಾಶಯ ಕೋರಿದರು.