ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಬೇಡಿ: ಎಚ್.ವಿಶ್ವನಾಥ್ ಗರಂ
ಮೈಸೂರು, ಸೆಪ್ಟೆಂಬರ್ 29: ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಬೇಡಿ ಎನ್ನುವ ಮೂಲಕ ಶಿಕ್ಷಣ ಸಚಿವ ಸುರೇಶ್ಕುಮಾರ್ ನಡೆಗೆ ಸ್ವಪಕ್ಷದವರೇ ಆದ ವಿಧಾನ ಪರಿಷತ್ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಾಲೆಗಳ ಆರಂಭದ ವಿಚಾರದಲ್ಲಿ ಸಚಿವ ಸುರೇಶ್ಕುಮಾರ್ ಅವರು ಶಾಸಕರಿಗೆ ಪತ್ರ ಬರೆದಿದ್ದಾರೆ. ಇದು ಜನಪ್ರತಿನಿಧಿಗಳ ತೀರ್ಮಾನ ಆಗಬಾರದು. ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡಬೇಡಿ ಎಂದು ಗರಂ ಆಗಿದ್ದಾರೆ.
ಶಾಲಾ-ಕಾಲೇಜು ಪ್ರಾರಂಭದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ: ಸುರೇಶ್ ಕುಮಾರ್!
ಯಾವ ಜನಪ್ರತಿನಿಧಿಯೂ ಚುನಾವಣೆ ವೇಳೆ ಶಿಕ್ಷಣದ ಬಗ್ಗೆ ಚರ್ಚೆಯೇ ಮಾಡಿಲ್ಲ. ಎಲ್ಲ ಜನಪ್ರತಿನಿಧಿಗಳಿಗೂ ಶಿಕ್ಷಣದ ಬಗ್ಗೆ ಎಲ್ಲ ಮಾಹಿತಿ ಇರುವುದಿಲ್ಲ. ಹಾಗಾಗಿ ಅವರ ಸಲಹೆಯಿಂದ ಶಾಲೆ ಆರಂಭ ಮಾಡುವ ನಿರ್ಧಾರ ಸರಿಯಲ್ಲ. ನೀವು ಶಾಲೆ ಆರಂಭಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಅನ್ನುವುದನ್ನು ಹೇಳಿ. ಎಲ್ಲವನ್ನು ಜನಪ್ರತಿನಿಧಿಗಳ ಮೇಲೆ ಹಾಕಬೇಡಿ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಚಿವರಾಗಿ ಶಾಲೆ ಆರಂಭಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮೊದಲು ತಿಳಿಸಿ. ಸುಮ್ಮನೆ ಒಂದು ಕಾಗದ ಬರೆದು ಕುಳಿತುಕೊಂಡರೆ ಅದು ಸರಿಯಲ್ಲ. ಇದು ಶಿಕ್ಷಣ ಮಂತ್ರಿಯೊಬ್ಬರು ಮಾಡುವ ಕೆಲಸವಲ್ಲ. ಪೋಷಕರ ಮನಸ್ಸಿನ ಮೇಲೆ ಚೆಲ್ಲಾಟ ಶೋಭೆ ತರುವುದಿಲ್ಲ. ನೀವು ಪೋಷಕರನ್ನು, ಮಕ್ಕಳನ್ನು, ಶಿಕ್ಷಕರನ್ನು ಗೊಂದಲದಲ್ಲಿ ಇಡಬೇಡಿ ಎಂದು ಎಚ್ಚರಿಸಿದ್ದಾರೆ.
ಸುರೇಶ್ ಕುಮಾರ್ ಅವರೇ, ನೀವು ಹೇಳಿಕೆ ಕೊಟ್ಟು ವಾಪಸ್ ಪಡೆದು ಗೊಂದಲ ಸೃಷ್ಟಿಸಬೇಡಿ. ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳ ಬಗ್ಗೆಯೂ ಯೋಚನೆ ಮಾಡಬೇಕು. ಎಲ್ಲವನ್ನು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.