"ಜನರ ಸೀಟಿ, ಕೇಕೆಗೆ ಸಿದ್ದರಾಮಯ್ಯ ಭಾಷಣ ಮಾಡೋದು...''
ಮೈಸೂರು, ಫೆಬ್ರವರಿ 20: ಮಾಜಿ ಸಿಎಂ ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿ ಬೇಕಾದರೆ ಕೊಡಲಿ, ಆದರೆ ಅನ್ನಭಾಗ್ಯ ಅಕ್ಕಿ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲಿ, ಅವರ ನಾಯಕತ್ವದಿಂದಲೇ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಕುಟುಕಿದರು.
ಮೈಸೂರಿನಲ್ಲಿ ಮಾತನಾಡಿದ ಎಂಎಲ್ಸಿ ವಿಶ್ವನಾಥ್, ನಾನು ಹಾಳಾಗಿದ್ದು, ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ. ದೇವೇಗೌಡರು ಅವರನ್ನು ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದೆ. ಸಿದ್ದರಾಮಯ್ಯ ಅವಧಿಯಲ್ಲೇ ಕುರುಬ ಜನಾಂಗಕ್ಕೆ ಹೆಚ್ಚು ಅನ್ಯಾಯ ಆಯ್ತು ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.
JDS ಜತೆ ಕಾಂಗ್ರೆಸ್ ಮೈತ್ರಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್: ದಳಪತಿಗಳತ್ತ ಎಲ್ಲರ ಚಿತ್ತ
ಕೇವಲ ದರ್ಪ, ದುರಂಹಕಾರದಿಂದ ಸರ್ಕಾರ ನಡೆಸಲು ಸಾಧ್ಯವಿಲ್ಲ ಅಂತ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ವಿಶ್ವನಾಥ್, ಇತ್ತೀಚೆಗೆ ಕೇವಲ ಜನರ ಸೀಟಿ ಹಾಗೂ ಕೇಕೆಗೆ ಸಿದ್ದರಾಮಯ್ಯ ಭಾಷಣ ಮಾಡ್ತಾರೆ. ಚುನಾವಣೆಗೆ ಇನ್ನೂ 2.5 ವರ್ಷ ಇರುವಾಗಲೇ ಅಧಿಕಾರಕ್ಕೆ ಬರ್ತೇವೆ ಅಂತ ಬೊಬ್ಬೆ ಹೊಡೆಯುತ್ತಿದ್ದೀರಾ. ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಇನ್ನು, ಬಿಪಿಎಲ್ ಕಾರ್ಡ್ ಬಗ್ಗೆ ಇದೇ ವೇಳೆ ಮಾತನಾಡಿದ ವಿಶ್ವನಾಥ್, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳು ಕಡಿತ ಆಗಬೇಕು ಅಂತ ಹೇಳಿದರು. ರಾಜ್ಯದಲ್ಲಿ ಶೇ.85 ರಷ್ಟು ಬಿಪಿಎಲ್ ಕಾರ್ಡ್ ಇದೆ. ಹಾಗಾದರೆ ರಾಜ್ಯ ಯಾವ ದಿಕ್ಕಿನಲ್ಲಿ ಹೋಗುತ್ತಿದೆ. ಇದನ್ನು ಯಾರು ಕೇಳಬಾರದಾ ಎಂದು ವಿಷಾದ ವ್ಯಕ್ತಪಡಿಸಿದರು.
ಒಂದೊಂದು ಮನೆಯಲ್ಲಿ 4 ಬಿಪಿಎಲ್ ಕಾರ್ಡ್ ಇದೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿಲ್ಲ. ಅನ್ನಭಾಗ್ಯ ಅಕ್ಕಿಯಿಂದ ಸಾಕಷ್ಟು ಮಂದಿ ಕೋಟ್ಯಾಧಿಪತಿ ಆಗಿದ್ದಾರೆ. ರಾಜ್ಯದ ಅಕ್ಕಿ, ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಕ್ರಮ ಸಾಗಣೆ ಆಗಿದೆ ಅಂತ ಆರೋಪಿಸಿದರು. ಇದೆಲ್ಲ ಜನರ ತೆರಿಗೆ ಹಣ, ಅದು ಪೋಲಾಗುತ್ತಿದೆ. ರಾಜ್ಯದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಇವುಗಳನ್ನು ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವೆಂದು ಆಕ್ರೋಶ ಹೊರಹಾಕಿದರು.