ಮಗನ ಸೋಲಿನ ಸೇಡಿಗೆ ಸಂಸದೆ ವಿರುದ್ಧ ಕೀಳಾಗಿ ಮಾತನಾಡಬಾರದು
ಮೈಸೂರು, ಜುಲೈ 5: "ತಮ್ಮ ಮಗನ ಸೋಲಿನ ಸೇಡಿಗೆ ಒಬ್ಬ ಸಂಸದೆ ವಿರುದ್ಧ ಕೀಳುಮಟ್ಟಕ್ಕೆ ಇಳಿದು ಮಾತನಾಡುವುದು ಸರಿಯಲ್ಲ,'' ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.
ಮೈಸೂರು ನಗರದ ಖಾಸಗಿ ಹೋಟೆಲ್ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರೊಂದಿಗೆ ರಹಸ್ಯ ಮಾತುಕತೆ ನಡೆಸಿ, ಹೊರ ಬಂದ ಎಚ್. ವಿಶ್ವನಾಥ್, ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿ ಮಾತಿನ ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಬಿಎಸ್ವೈ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಸೋಮಶೇಖರ್ ಗರಂ
"ಮಿಸ್ಟರ್ ಕುಮಾರಸ್ವಾಮಿ ಮೈಂಡ್ ಯುವರ್ ಲಾಂಗ್ವೇಜ್, ನಿಮ್ಮ ಮಗನ ಸೋಲಿನ ಸೇಡನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದೀರಾ? ಎಂದು ಪ್ರಶ್ನಿಸಿ, ಅಣೆಕಟ್ಟಿನ ಸಮಸ್ಯೆ ಇದ್ದರೆ ಪರಿಶೀಲಿಸೋಣ ಅಂತಾ ಹೇಳಬೇಕು. ಅದನ್ನು ಬಿಟ್ಟು ಹೆಣ್ಣು ಮಗಳನ್ನು ಮಲಗಿಸಿ ಅಂದರೆ ಅದೆಂತಹ ಭಾಷೆ,'' ಎಂದು ಪ್ರಶ್ನಿಸಿದರು.
ಸುಮಲತಾ ರೆಬೆಲ್ ಆ್ಯಕ್ಟರ್, ರೆಬೆಲ್ ಸಂಸದೆ. ಜೊತೆಗೆ ಮಂಡ್ಯದ ಸೊಸೆ, ರೆಬೆಲ್ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ. ಅಂತಹ ಹೆಣ್ಣು ಮಗಳಿಗೆ ಅವಮಾನ ಮಾಡುತ್ತೀರಾ? ಎರಡು ಬಾರಿ ಸಿಎಂ ಆದವರ ಬಾಯಲ್ಲಿ ಇಂತಹ ಮಾತು ಬರಬಾರದು,'' ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.
ವಿಜಯೇಂದ್ರ ವಿರುದ್ಧ ಕಿಡಿ
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಜೈಲಿಗೆ ಕಳುಹಿಸಿದ್ದೆ ಪುತ್ರ ವಿಜಯೇಂದ್ರ. ಅವರ ನಕಲಿ ಸಹಿ ಮಾಡಿ ಅವರನ್ನು ಜೈಲಿಗೆ ಕಳುಹಿಸಿದ್ದ. ಈಗ ಇಡೀ ಕುಟುಂಬವನ್ನು ಜೈಲಿಗೆ ಕಳುಹಿಸುತ್ತಾನೆ,'' ಎಂದು ವಿಜಯೇಂದ್ರ ವಿರುದ್ಧವೂ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಶ್ರೀರಾಮುಲು ಮುಗಿಸಲು ಹೊರಟಿರುವುದು ವಿಜಯೇಂದ್ರನೆ
"ವಿಜಯೇಂದ್ರನ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈತನಿಂದ ಹಿಂದುಳಿದ ನಾಯಕರನ್ನು ತುಳಿಯುವ ಕೆಲಸವಾಗುತ್ತಿದೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ದೆ ಈತ. ರಮೇಶ್ ಜಾರಕಿಹೊಳಿ, ಶ್ರೀರಾಮುಲುರನ್ನು ಮುಗಿಸಲು ಹೊರಟಿರುವುದು ವಿಜಯೇಂದ್ರನೆ. ಜಾರಕಿಹೊಳಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರ ಇದೆ. ಎಷ್ಟು ದಿನ ನಿಮ್ಮದು ನಡೆಯುತ್ತೇ ಎಂಬುದನ್ನು ನಾವು ನೋಡುತ್ತೇವೆ. ರಾಜಕಾರಣದಲ್ಲಿ ಇದು ಸರಿಯಲ್ಲ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸೋಮಶೇಖರ್ಗೆ ಟಾಂಗ್
"ಯಡಿಯೂರಪ್ಪ ವಿರುದ್ಧ ಮಾತನಾಡುವವರು ಅವರ ಧೂಳಿಗೂ ಸಮರಲ್ಲ,'' ಎಂಬ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ""ಸೋಮಶೇಖರ್, ನೀನು ಬೇಕಾದರೆ ಯಡಿಯೂರಪ್ಪನ ಪಾದ ನೆಕ್ಕು. ಅವರ ಮಗನ ಭ್ರಷ್ಟಾಚಾರ, ಅವ್ಯವಹಾರ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವಾ? ಎಂದು ಪ್ರಶ್ನಿಸಿ, ರಾಜ್ಯದಲ್ಲಿ 104 ಸ್ಥಾನ ಬಂದಿದ್ದು, ಯಡಿಯೂರಪ್ಪನಿಂದ ಅಲ್ಲ. 25 ಸಂಸದರು ಗೆದ್ದಿದ್ದು ಯಡಿಯೂರಪ್ಪರಿಂದ ಅಲ್ಲ. ಇದು ಆಗಿದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ. ಅವರ ಹೆಸರನ್ನೇ ಕರ್ನಾಟಕದಲ್ಲಿ ಯಡಿಯೂರಪ್ಪ ಮರೆಸಿದ್ದಾರೆ,'' ಎಂದು ಸಿಎಂ ವಿರುದ್ಧ ಎಂಎಲ್ಸಿ ವಿಶ್ವನಾಥ್ ಗುಡುಗಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲೇಬೇಕು
"ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲೇಬೇಕು. ಇದರ ಪ್ರಕ್ರಿಯೆ ನಡೆದಿದ್ದು, ಬಲ ಬರುವುದು ತಡವಾಗಬಹುದು, ಆದರೆ ಖಂಡಿತವಾಗಿ ಸಿಎಂ ಬದಲಾವಣೆ ಆಗಲಿದ್ದಾರೆ,'' ಎಂದು ಭವಿಷ್ ನುಡಿದರು.
"ಸಚಿವ ಯೋಗೇಶ್ವರ್ ಹೇಳಿಕೆ ಸಮರ್ಥಿಸಿಕೊಂಡ ಎಚ್. ವಿಶ್ವನಾಥ್, "ಸರ್ಕಾರದ ಯಾವುದೇ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷದವರು ಮಾತನಾಡುತ್ತಿಲ್ಲ. ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಧ್ವನಿ ಎತ್ತುತ್ತಿಲ್ಲ. ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲಿ ಬಿಜೆಪಿ ಸದಸ್ಯನಾಗಿರುವ ನಾನು ವಿರೋಧಿಸಿದೆ. ಆದರೆ ಬೇರೆ ಯಾರೂ ಇದನ್ನು ಕೇಳಲಿಲ್ಲ. ಇದರಿಂದ ಸ್ಪಷ್ಟವಾಗಿ ತಿಳಿಯಲಿದೆ,'' ಎಂದರು.