"ನಾಲಿಗೆ, ಮಾತು ಎರಡೂ ಕಳೆದುಕೊಂಡ ಸಿಎಂ ಯಡಿಯೂರಪ್ಪ''
ಮೈಸೂರು, ಜನವರಿ 13: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಈ ಹಿಂದೆ ಜೆಡಿಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದ, ಹಾಲಿ ಎಂಎಲ್ಸಿ ಎಚ್.ವಿಶ್ವನಾಥ್ ಅವರು ಬಿಜೆಪಿ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಬುಧವಾರ ಮಾತನಾಡಿದ ಎಚ್.ವಿಶ್ವನಾಥ್, ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯನನ್ನು ಕರೆದುಕೊಂಡು ಬಂದ್ವಿ, ಅವರೂ ಹೇಳಲಿಲ್ಲ. ಯಡಿಯೂರಪ್ಪಗೆ ತ್ಯಾಗ ಮಾಡಿದ್ವಿ ಅವರೂ ಹೇಳಲಿಲ್ಲ. ಯಡಿಯೂರಪ್ಪ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ತಾವು ಕೊಟ್ಟಿದ್ದ ಮಾತು ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಯಾರಿಂದ ಸರ್ಕಾರ ಬಂತು ಅಂತ ನೆನಪು ಮಾಡಿಕೊಳ್ಳಬೇಕು, 17 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ. ಅವರ ತ್ಯಾಗದಿಂದ ಸರ್ಕಾರ ಬಂದಿದ್ದು ಅದನ್ನು ನೆನಪು ಮಾಡಿಕೊಳ್ಳಿ ಎಂದು ಮೈಸೂರಿನಲ್ಲಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದರು.
ಪಕ್ಷೇತರ ಶಾಸಕ ನಾಗೇಶ್ರನ್ನು ಯಾಕೆ ತೆಗೆಯಬೇಕು
""ಯಡಿಯೂರಪ್ಪನವರೇ ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆದು ಮಾಡಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ಸಿದ್ಧಲಿಂಗೇಶ್ವರನು ಕ್ಷಮಿಸುವುದಿಲ್ಲ. ನೀವು ಎಂತಹ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? 33 ರಲ್ಲಿ 13 ವೀರಶೈವ, 11 ಜನ ಒಕ್ಕಲಿಗ, 4 ಜನ ಕುರುಬರಿಗೆ ಮಂತ್ರಿ ಕೊಟ್ಟಿದ್ದೀರಾ. ಇದೇನಾ ನಿಮ್ಮ ಸಾಮಾಜಿಕ ನ್ಯಾಯ. ಪಕ್ಷೇತರ ಶಾಸಕ ನಾಗೇಶ್ರನ್ನು ಯಾಕೆ ತೆಗೆಯಬೇಕು. ಮುನಿರತ್ನ ಬದಲು ಯೋಗೇಶ್ವರ್ ಅವರಿಗೆ ಯಾಕೆ ಸಚಿವ ಸ್ಥಾನ ಕೊಡುತ್ತೀರಾ ಎಂದು ಪ್ರಶ್ನಿಸಿದರು. ಕೋರ್ಟ್ಗೂ, ನನಗೆ ಮಂತ್ರಿ ಸ್ಥಾನ ಕೊಡುವುದಕ್ಕೂ ಸಂಬಂಧ ಇಲ್ಲ. ಆ ಸೈನಿಕನ ಮೇಲೆ 420 ಕೇಸ್ ಇದೆ. ಅವನಿಗೆ ಸಚಿವನನ್ನಾಗಿ ಮಾಡೋಕೆ ದುಂಬಾಲು ಬಿದ್ದಿದ್ದೀರಾ. ಯಾಕೆ ಎಲ್ಲಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ ಹೇಳಿ. ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ದಾನಾ ಅವನು. ಅವನೇನು ರಾಜೀನಾಮೆ ಕೊಟ್ಟಿದಾನಾ? ಅಥವಾ ನೀವೆನು ಸೈನಿಕನ ಕೈಗೊಂಬೆ ಆಗಿದ್ದೀರಾ? ಎಂದು ಕಟುವಾಗಿ ಪ್ರಶ್ನಿಸಿದರು.
ಅಚ್ಚರಿ ಮೂಡಿಸಿದ ಸಿ. ಪಿ. ಯೋಗೇಶ್ವರ್ ಅಭಿಮಾನಿಗಳ ಬ್ಯಾನರ್!
ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ
ನಿಮ್ಮ ಮಾಜಿ ಪಿಎ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡರಾ ಹೇಳಿ ಎಂದು ಮೈಸೂರಿನಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಪ್ರಶ್ನೆ ಮಾಡಿದರು. ಯಡಿಯೂರಪ್ಪನವರೇ ನಿಮ್ಮಿಂದ ಏನಾದರೂ ನಿರೀಕ್ಷೆ ಮಾಡಿದ್ನಾ ನಾನು? ಸ್ನೇಹದಲ್ಲಿ ಇದ್ದಿದ್ದಕ್ಕೆ ನಿಮಗೆ ಸಹಾಯ ಮಾಡಿದ್ದೇವೆ. ಆದರೆ ನೀವೆನು ಮಾಡಿದ್ದೀರಾ ಹೇಳಿ. ನೀವು ಏನು ಮಾತು ಕೊಟ್ಟಿದ್ದೀರಿ ಅಂತ ಹೇಳಿ? ನೇರವಾಗಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.
ಕುಟುಂಬ ರಾಜಕಾರಣ ನಡೆಯುತ್ತಿದೆ
ಇನ್ನು ಮುಂದುವರಿದು ಮಾತನಾಡಿದ ಮಾಜಿ ಸಚಿವ ಎಚ್.ವಿಶ್ವನಾಥ್, ""ಬನ್ನಿ ಬೇಕಿದ್ದರೆ ಯಡಿಯೂರಿಗೆ ಹೋಗೋಣ, ಏನಾಯ್ತು ಅಂತ ಅಲ್ಲೇ ಮಾತನಾಡೋಣ. ನಾವು ಯಡಿಯೂರಪ್ಪರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನು ಸಿಎಂ ಮಾಡಿದ್ದು ಈ 17 ಜನ. ನಿಮ್ಮ ಸಂಪುಟದಲ್ಲಿ ಎಲ್ಲರೂ ಇರಬೇಕು. ಮುಸ್ಲಿಂ ಕೂಡ ಇರಬೇಕು, ಎಲ್ಲ ಜಾತಿ, ಜನಾಂಗ ಇರಬೇಕು. ಆದರೆ ಇಲ್ಲಿ ಏನಾಗಿದೆ. ನಾಡಿನಲ್ಲಿ ನಾಲಿಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾವೇ, ಆದರೆ ಅದೆಲ್ಲ ಏನಾಯ್ತು ಎಂದರು. ಸಿಎಂ ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಸಿ.ಪಿ ಯೋಗೇಶ್ವರ್ ಮಂತ್ರಿ ಆಗುವುದಕ್ಕೆ ವಿಜಯೇಂದ್ರ ಕಾರಣ. ಅದೇ ರೀತಿ ಯಡಿಯೂರಪ್ಪನವರ ಪ್ರತಿಷ್ಠೆ ಡೆಮಾಲಿಷ್ ಆಗುವುದಕ್ಕೂ ವಿಜಯೇಂದ್ರರೇ ಕಾರಣ'' ಎಂದು ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದರು.
ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ
ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಯಡಿಯೂರಪ್ಪನವರೇ ಹೈಕಮಾಂಡ್. ಯೋಗೇಶ್ವರ್ದು ಬ್ಲಾಕ್ ಮೇಲ್ ತಂತ್ರ. ಅವರ ಬ್ಲಾಕ್ ಮೇಲ್ ಏನಂತ ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಸಚಿವರಾಗುವುದಕ್ಕೆ ಬ್ಯಾಗ್ ಹಿಡಿದುಕೊಳ್ಳುವುದೆ ಮಾನದಂಡವೇ? ಯೋಗೇಶ್ವರ್ಗೆ ಬರಿ ಬಾಂಬೆಯಲ್ಲಿ ಬ್ಯಾಗ್ ಹಿಡಿದಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ನೋವಾಗಿದೆ. ನಾವು ಮನುಷ್ಯರು, ನಮಗೂ ಹೃದಯ ಇದೆ. ನಮಗೂ ನೋವಾಗುತ್ತದೆ ಎಂದು ಮೈಸೂರಿನಲ್ಲಿ ಎಚ್.ವಿಶ್ವನಾಥ್ ಹೇಳಿದರು.