ಶಕುನಿಗಳ ಮಾತು, ರೈಲು ಹತ್ತಿಸುವವರ ಮಾತು ಕೇಳಬೇಡಿ: ಸಿಎಂಗೆ ಎಚ್.ವಿಶ್ವನಾಥ್ ಸಲಹೆ
ಮೈಸೂರು, ಮೇ 7: ವಿದುರನಾಗಿ ಧೃತರಾಷ್ಟ್ರನಿಗೆ ಬುದ್ದಿ ಹೇಳುತ್ತಿದ್ದೇನೆ, ಶಕುನಿಗಳ ಮಾತು, ರೈಲು ಹತ್ತಿಸುವವರ ಮಾತು ಕೇಳಬೇಡಿ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಮ್ಮ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ಸಚಿವರು ಹಾಗೂ ಶಾಸಕರ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾವು ಸರ್ಕಾರ ತಂದಿರುವುದಕ್ಕೆ ನೀವು MLC ಮಾಡಿರುವುದು. ಇದರಲ್ಲಿ ಈಗ ಮಾತನಾಡುತ್ತಿರುವವರ ಯಾರ ತ್ಯಾಗ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾನು ಯಡಿಯೂರಪ್ಪ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. ಬದಲಿಗೆ ಶಕ್ತಿಪೀಠದಲ್ಲಿ ಕುಳಿತಿರುವ ಸಿಎಂಗೆ ಮಾತನಾಡಿದ್ದೇನೆ. ಶಕ್ತಿಕೇಂದ್ರ ಹೊಳಪು ಕಳೆದುಕೊಳ್ಳುತ್ತಿದೆ. ಆ ಶಕ್ತಿ ಕೇಂದ್ರದ ಕಣ್ಣು, ಕಿವಿ ಬಗ್ಗೆ ಹೇಳಿದ್ದೇನೆ ಎಂದರು.
ಅಲ್ಲದೆ, ಇಬ್ಬರು ಜಿಲ್ಲಾಧಿಕಾರಿಗಳಿಗೆ ಶಟಪ್ ಅಂತಾ ಹೇಳುವ ಧೈರ್ಯ ಸಿಎಂಗೆ ಇಲ್ಲ. ಸರ್ಕಾರ ದೂಸ್ರಾ ಮಾತನಾಡಬೇಡಿ ಅಂತಾ ಹೇಳುವ ಶಕ್ತಿ ಕಳೆದುಕೊಂಡಿದೆ. ಅದನ್ನು ನಾನು ಹೇಳಿದ್ದೇನೆ ಅಷ್ಟೇ. ವಿದುರನಾಗಿ ಧೃತರಾಷ್ಟ್ರನಿಗೆ ಬುದ್ದಿ ಹೇಳುತ್ತಿದ್ದೇನೆ. ನಿಮ್ಮನ್ನು ಮೆಚ್ಚಿ ಮಾತನಾಡುವವರನ್ನು, ಪುತ್ರ ವ್ಯಾಮೋಹ ಬಿಡಿ ಅಂತಾ ಹೇಳುತ್ತಿದ್ದೇನೆ. ಶಕುನಿಗಳ ಮಾತು, ರೈಲು ಹತ್ತಿಸುವವರ ಮಾತು ಕೇಳಬೇಡಿ ಎಂದಿದ್ದೇನೆ ಎಂದು ಹೇಳಿದರು.
ಇದನ್ನು ಹೇಳಿದ್ದು ತಪ್ಪಾ? ನನ್ನ ರಾಜಕೀಯ ಚರಿತ್ರೆ ಏನು? ಅವರ ರಾಜಕೀಯ ಚರಿತ್ರೆ ಏನು? ಈ ಹಿಂದೆ ಮಠ- ಮಾನ್ಯಗಳಿಗೆ ನೂರಾರು ಕೋಟಿ ದೇಣಿಗೆ ನೀಡಿದ್ದೀರಾ. ಅವರನ್ನು ವಾಪಸ್ಸು ಏಕೆ ಕೇಳುತ್ತಿಲ್ಲ? ಸರ್ಕಾರದ ಖಜಾನೆಯಿಂದ ಕೊಟ್ಟಿದ್ದೀರಿ, ವಾಪಸ್ಸು ಸಹಾಯ ಕೇಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದರು.
ರಾಜ್ಯದಲ್ಲಿ ಲಾಕ್ಡೌನ್ ವಿಚಾರ ಮಾಡುವ ಬಗ್ಗೆ ಮಾತನಾಡಿದ ಅವರು, ಸೋಮವಾರದಿಂದ ಯಡಿಯೂರಪ್ಪ ಲಾಕ್ಡೌನ್ ಮಾಡಲೇಬೇಕು. ಬಾಯಿ ಮಾತಿಗೆ ಹೇಳಬಾರದು. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯ ಸುವರ್ಣಸೌಧವನ್ನು 2 ಸಾವಿರ ಬೆಡ್ನ ಆಸ್ಪತ್ರೆ ಮಾಡಿ. ಊರಿನಿಂದ ಹೊರಗಡೆ ಇದ್ದು, ತಾತ್ಕಾಲಿಕ ಆಸ್ಪತ್ರೆ ಮಾಡಿ. ಅಲ್ಲಿ ವರ್ಷಕ್ಕೊಮ್ಮೆ ಸದನ ನಡೆಯುತ್ತೇ, ಅದರ ಬದಲು ಅದನ್ನು ಆಸ್ಪತ್ರೆ ಮಾಡಿ ಜನರಿಗೆ ಒಳ್ಳೆಯದು ಮಾಡಿ ಎಂದರು.
ಮೈಸೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಬರೀ ಅಧಿಕಾರಿಗಳ ಮಾತು ಕೇಳಬೇಡಿ. ನೀವೇ ನೇರವಾಗಿ ಆಸ್ಪತ್ರೆಗೆ ಹೋಗಿ ನೋಡಿ. ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತ ತಪ್ಪಿದ್ದಲ್ಲ, ಡಿಎಚ್ಒ ಸಹ ಅಸಾಯಕರಾಗಿದ್ದಾರೆ. ರಾಜ್ಯದ ಆಡಳಿತಕ್ಕೆ ಗರ ಬಡಿದಿದೆ. ಪಕ್ಕದ ರಾಜ್ಯದವರು ನಮಗೆ ಮಾದರಿಯಾಗಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಬಿಬಿಎಂಪಿ ಬೆಡ್ ಹಗರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ವಾ? ಒಬ್ಬ ಎಂಪಿ ಈ ಹಗರಣವನ್ನು ಬಯಲು ಮಾಡಬೇಕಾಗಿತ್ತಾ? ಸರ್ಕಾರ ಏನು ಮಾಡುತ್ತಿದೆ. ನಾವು ಸಂಸದ ತೇಜಸ್ವಿ ಸೂರ್ಯ ಅವರನ್ನು ಅಭಿನಂದಿದಸಬೇಕು, ಇದಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ಮಾಡಲಾಗುತ್ತಿದ್ದು, ಈ ಕೆಲಸ ಮಾಡಬಾರದು. ತೇಜಸ್ವಿ ಸೂರ್ಯ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು