ಕಾಂಗ್ರೆಸ್ನ ಆಂತರಿಕ ಕಲಹ ಒಪ್ಪಿಕೊಂಡ ಯತೀಂದ್ರ ಸಿದ್ದರಾಮಯ್ಯ
ಮೈಸೂರು, ಜೂನ್ 24: ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಇರುವುದನ್ನು ಒಪ್ಪಿಕೊಂಡಿರುವ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಪಕ್ಷದಲ್ಲಿ ಆಂತರಿಕವಾಗಿ ಎಷ್ಟೋ ವಿಚಾರಗಳಿರಲಿದ್ದು, ಆಂತರಿಕ ವಿಚಾರಗಳನ್ನು ನಾವೇ ಬಗೆಹರಿಸಿಕೊಳ್ತೀವಿ ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ v/s ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ನಾಯಕತ್ವ ಹಾಗೂ ಮುಂದಿನ ಸಿಎಂ ವಿಚಾರವಾಗಿ ಜಟಾಪಟಿ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಶಾಸಕ ಯತೀಂದ್ರ, "ಎಲ್ಲಾ ಪಕ್ಷದಲ್ಲೂ ಬೇರೆ ಬೇರೆ ನಾಯಕರ ಅನುಯಾಯಿಗಳು ಅವರವರ ವೈಯುಕ್ತಿಕ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಹಾಗಂತ ಆಯಾ ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ ಅಂತ ಅಲ್ಲ. ಪಕ್ಷದ ವಿಚಾರ ಬಂದಾಗ ನಾವೆಲ್ಲಾ ಒಟ್ಟಾಗಿ ನಿಲ್ತೀವಿ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಈ ವಿಚಾರದಲ್ಲಿ ಇಷ್ಟಕ್ಕೆ ಫುಲ್ ಸ್ಟಾಪ್ ಹಾಕಬೇಕು. ಶಾಸಕರ ವೈಯುಕ್ತಿಕ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ," ಎಂದರು.
ಚುನಾವಣೆ ಘೋಷಣೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ!
"ಸಿದ್ದರಾಮಯ್ಯನವರು ನಾನೇ ಮುಂದಿನ ಸಿಎಂ ಅಂತ ಎಲ್ಲೂ ಹೇಳಿಲ್ಲ. ಮುಂದಿನ ಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟದ್ದು,'' ಎಂದು ಹೇಳಿದರು.
"ಜಮೀರ್ ಅಹ್ಮದ್ "ಮುಂದಿನ ಸಿಎಂ ಸಿದ್ದರಾಮಯ್ಯ' ಎಂಬ ಹೇಳಿಕೆಗೆ ಅನಗತ್ಯ ಗೊಂದಲ ಆಗಬಾರದೆಂದು ಡಿ.ಕೆ. ಶಿವಕುಮಾರ್ ಆವೇಶದಿಂದ ಹೇಳಿದ್ದಾರೆ. ಮಾಧ್ಯಮಗಳು ಗೊಂದಲ ಮೂಡಿಸೋದನ್ನು ತಪ್ಪಿಸಲು ಡಿಕೆಶಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಇಲ್ಲಿಗೆ ವಿರಾಮ ಹೇಳಬೇಕಿದೆ," ಎಂದರು.
ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಎಂಬ ಪರಮೇಶ್ವರ್ ಹೇಳಿಕೆ ಬಗ್ಗೆಯೂ ಮಾತಾಡಿದ ಅವರು, "ಪಕ್ಷದ ವಿಚಾರ ಬಂದಾಗ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಆಗ್ತಾರೆ ಅದರಲ್ಲೇನು ತಪ್ಪಿಲ್ಲ," ಎಂದು ತಿಳಿಸಿದರು.
"ಕೊರೊನಾ ಸೋಂಕು ನಿಯಂತ್ರಣ ಆಗದಿದ್ದಾಗ ಡೆಲ್ಟಾ ರೀತಿಯ ಮಾರಕ ವೈರಸ್ಗಳು ಪತ್ತೆಯಾಗುತ್ತವೆ. ಮಾರಕವಾದ ವೈರಸ್ಗಳನ್ನು ತಡೆಯಲು ಸೋಂಕನ್ನು ನಿಯಂತ್ರಿಸಬೇಕು. ಆಗ ಮಾತ್ರ ಡೆಡ್ಲಿ ಮುಟ್ಯೂಷನ್ಗಳು ಬರುವುದು ತಪ್ಪುತ್ತದೆ," ಎಂದು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
"ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ ಬುಧವಾರ ಶೇ.3.5ಕ್ಕೆ ಬಂದಿದೆ. ಇನ್ನೊಂದು ವಾರದಲ್ಲಿ ಮತ್ತಷ್ಟು ಕಡಿಮೆ ಆಗಲಿದೆ. ಆದರೆ ಸೋಂಕು ಕಡಿಮೆ ಆಯ್ತು ಅಂತ ಮೈ ಮರೆಯಬಾರದು. ಈಗ ಎರಡನೇ ಅಲೆ ಮುಗಿಯುತ್ತಿದೆ. ಮೂರನೇ ಅಲೆ ಎದುರಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಬೇಕಾದ ಚಿಕಿತ್ಸಾ ಸೌಲಭ್ಯಗಳನ್ನು ಮಾಡಿಕೊಳ್ಳಬೇಕು," ಎಂದು ಒತ್ತಾಯ ಮಾಡಿದರು.