ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ಶಾಸಕ ತನ್ವೀರ್ ಸೇಠ್; ಕಾರಣ?
ಮೈಸೂರು, ಮಾರ್ಚ್ 4: ಮೈಸೂರು ಪಾಲಿಕೆ ಮೇಯರ್ ಚುನಾವಣೆ ಬಳಿಕ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳ ನಡುವೆಯೂ ತಮ್ಮ ಕ್ಷೇತ್ರದ ಅಭಿವೃದ್ಧಿಯತ್ತ ನಿಗಾವಹಿಸಿರುವ ಶಾಸಕ ತನ್ವೀರ್ ಸೇಠ್, ಈ ಬಾರಿಯ ಬಜೆಟ್ನಲ್ಲಿ ಮೈಸೂರು ನಗರ ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಮೈಸೂರು: ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸಲು ಸಿಎಂಗೆ ಮನವಿ
ರಾಜ್ಯ ಬಜೆಟ್ ಕೌಂಟ್ ಡೌನ್ ಶುರುವಾಗಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಆಯವ್ಯಯ ಮಂಡನೆಗೆ ಸಕಲ ಸಿದ್ಧತೆ ನಡೆದಿದೆ. ಮಾರ್ಚ್ 8ರಂದು ರಾಜ್ಯ ಬಜೆಟ್ ಅನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದು ಮೈಸೂರು ನಗರದ ಅಭಿವೃದ್ಧಿ ಕುರಿತು ಸಲಹೆ ನೀಡಿದ್ದಾರೆ.
ಈ ಕುರಿತು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಶಾಸಕ ತನ್ವೀರ್ ಸೇಠ್, ಮೈಸೂರು ನಗರದ ಅಭಿವೃದ್ಧಿ ವಿಚಾರ ಕುರಿತು 30ಕ್ಕೂ ಹೆಚ್ಚು ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ನಂತರ ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗಿರುವ ಅಗತ್ಯ ಸೌಕರ್ಯಗಳನ್ನು ಬಜೆಟ್ ನಲ್ಲಿ ಮಂಜೂರು ಮಾಡುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಪ್ರತ್ಯೇಕ ಜಲಮಂಡಳಿ ರಚನೆ, ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹಿಸಿದ ದಂಡ ಮೊತ್ತದ ಶೇ.50ರಷ್ಟು ಹಣವನ್ನು ಸಂಚಾರ ಅಭಿವೃದ್ಧಿಗೆ ಬಳಸುವುದು, ಪೊಲೀಸ್ ಅಕಾಡೆಮಿ ಮತ್ತು ತರಬೇತಿ ಸ್ಥಳಾಂತರಕ್ಕೆ ನಗರದ ಹೊರ ವಲಯದಲ್ಲಿ 100 ಎಕರೆ ಜಾಗ ಮೀಸಲು, ನರಸಿಂಹರಾಜ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ರೈಲ್ವೆ ಗೂಡ್ಸ್ ಶೆಡ್ ಬಳಿ ಲಾರಿ ಟರ್ಮಿನಲ್ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಿಎಂ ಬಿ.ಎಸ್ ಯಡಿಯೂರಪ್ಪಗೆ ಶಾಸಕ ತನ್ವೀರ್ ಸೇಠ್ ಸಲ್ಲಿಕೆ ಮಾಡಿದ್ದಾರೆ.