ಪ್ರೀತಿಯ ಕೋತಿಗಾಗಿ ಮಂದಿರ ನಿರ್ಮಿಸುತ್ತಿದ್ದಾರೆ ಶಾಸಕ ಸಾ.ರಾ.ಮಹೇಶ್
ಬೆಂಗಳೂರು, ಜನವರಿ 25: ಕೋತಿಗಳನ್ನು ಆಮಜನೇಯನ ಸ್ವರೂಪವೆಂದೇ ನಂಬಲಾಗುತ್ತದೆ. ಅವುಗಳು ಸತ್ತರೆ ತಿಥಿ ಮಾಡಿ ಭೋಜನ ಸಹ ಹಾಕಿಸುವ ಸಂಪ್ರದಾಯ ಈಗಲೂ ಇದೆ. ಆದರೆ ರಾಜ್ಯದ ಶಾಸಕರೊಬ್ಬರು ತಮ್ಮ ಪ್ರೀತಿಯ ಕೋತಿಗಾಗಿ ಗುಡಿಯನ್ನೇ ನಿರ್ಮಿಸುತ್ತಿದ್ದಾರೆ.
ಹೌದು, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ತಮ್ಮ ಪ್ರೀತಿಯ ಕೋತಿಗಾಗಿ ಮಂದಿರ ನಿರ್ಮಿಸುತ್ತಿದ್ದಾರೆ.
ಕೆ.ಆರ್.ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ತಮ್ಮ ಫಾರ್ಮ್ಹೌಸ್ನಲ್ಲಿ ಬಹು ಪ್ರೀತಿಯಿಂದ ಚಿಂಟು ಎಂಬ ಕೋತಿಯನ್ನು ಸಾಕಿದ್ದರು. ಅದು ಕೆಲವು ದಿನಗಳ ಹಿಂದಷ್ಟೆ ನಿಧನ ಹೊಂದಿತ್ತು. ಕೋತಿ ಚಿಂಟು ನೆನಪಿಗಾಗಿ ಸಾ.ರಾ.ಮಹೇಶ್ ಗುಡಿಯನ್ನು ಕಟ್ಟುತ್ತಿದ್ದಾರೆ.
ಚಿಂಟು ಕೋತಿಯ ಕುರಿ ಮರಿಯ ಮೇಲೆ ಕೂತಿರುವ ಮುದ್ದಾದ ಚಿತ್ರವೊಂದು ಸಾ.ರಾ.ಮಹೇಶ್ ಬಳಿ ಇದೆ, ಆ ಚಿತ್ರವನ್ನೇ ಆಧರಿಸಿ ಕೋತಿ ಚಿಂಟು ಮತ್ತು ಕುರಿಮರಿಯ ವಿಗ್ರಹ ತಯಾರಾಗಿದೆ.
ಚಿಂಟು ಮತ್ತು ಕುರಿಮರಿ ಮಧ್ಯೆ ಸ್ನೇಹ
ಕೋತಿ ಚಿಂಟು ಮತ್ತು ಕುರಿಮರಿ ಮಧ್ಯೆ ಆಪ್ತವಾದ ಸ್ನೇಹ ಏರ್ಪಟ್ಟಿಂತೆ. ಕುರಿ ಮರಿ ಸಹ ಕೆಲ ತಿಂಗಳ ಹಿಂದೆ ಸಾವನ್ನಪ್ಪಿತ್ತು. ಹಾಗಾಗಿ ಕುರಿಮರಿಯ ಮೇಲೆ ಚಿಂಟು ಕೋತಿ ಕೂತಿರುವ ರೀತಿಯಲ್ಲಿಯೇ ವಿಗ್ರಹ ನಿರ್ಮಿಸಲಾಗಿದೆ.
ವಿದೇಶದಿಂದ ವಾಪಸ್ಸಾಗಿದ್ದರು ಸಾ.ರಾ.ಮಹೇಶ್
ಚಿಂಟು ಜೊತೆ ಬಹಳ ಆತ್ಮೀಯತೆ ಹೊಂದಿದ್ದ ಸಾ.ರಾ.ಮಹೇಶ್ ಚಿಂಟು ಸಾವಿನ ಸುದ್ದಿ ಕೇಳಿ ವಿದೇಶದಿಂದ ವಾಪಸ್ಸಾಗಿದ್ದರು. ಚಿಂಟುವಿಗೆ ಶಾಸ್ತ್ರೋಕ್ತ ರೀತಿ ಅಂತ್ಯಸಂಸ್ಕಾರ ಮಾಡಿ ಜನವರಿ 11 ಅದರ ತಿಥಿ ಸಹ ಮಾಡಿದ್ದಾರೆ. ವಿದ್ಯುತ್ ವೈರ್ ತಗುಲಿ ಚಿಂಟು ಅಸುನೀಗಿತ್ತು.
20 ಲಕ್ಷ ವೆಚ್ಚದಲ್ಲಿ ಗುಡಿ ನಿರ್ಮಿಸುತ್ತಿದ್ದಾರೆ ಸಾ.ರಾ.ಮಹೇಶ್
ಚಿಂಟು ವಿನ ಅಂತ್ಯಸಂಸ್ಕಾರವನ್ನು ಮೈಸೂರಿನ ಬಳಿಯ ತಮ್ಮ ಫಾರಂ ಹೌಸ್ನಲ್ಲಿ ಸಾ.ರಾ.ಮಹೇಶ್ ಮಾಡಿದ್ದು, ಅದೇ ಜಾಗದಲ್ಲಿ ಗುಡಿ ಸಹ ನಿರ್ಮಾಣವಾಗಲಿದೆ. 20 ಲಕ್ಷ ವೆಚ್ಚದಲ್ಲಿ ಸಾ.ರಾ.ಮಹೇಶ್ ಪ್ರೀತಿಯ ಕೋತಿಗಾಗಿ ದೇಗುಲ ನಿರ್ಮಿಸುತ್ತಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ದೇವಾಲಯ ಉದ್ಘಾಟನೆ ಆಗಲಿದೆ.
ಪ್ರಾಣಿ ಪ್ರಿಯ ಶಾಸಕ ಸಾ.ರಾ.ಮಹೇಶ್
ಪ್ರಾಣಿ ಪ್ರಿಯ ಆಗಿರುವ ಶಾಸಕ ಸಾ.ರಾ.ಮಹೇಶ್ ಅವರು ತಮ್ಮ ಫಾರಂ ಹೌಸ್ನಲ್ಲಿ ಹಲವು ಪ್ರಾಣಿಗಳು, ಪಕ್ಷಗಳನ್ನು ಸಾಕಿದ್ದಾರೆ. ಹಸು-ಕರುಗಳಂತೂ ಸಾಕಷ್ಟು ಸಂಖ್ಯೆಯಲ್ಲಿವೆ.