ಜೆಡಿಎಸ್ ಹಿರಿಯ, ಪ್ರಭಾವೀ ಮುಖಂಡನ ಉಚ್ಚಾಟನೆಗೆ ಮಹೂರ್ತ ಫಿಕ್ಸ್?
ಮೈಸೂರು, ಜ 6: ಜಾತ್ಯಾತೀತ ಜನತಾದಳ ತಮ್ಮ ಪಕ್ಷದ ಹಿರಿಯ ಮುಖಂಡರೊಬ್ಬರ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಸದ್ಯದಲ್ಲೇ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿದೆ.
ಜೆಡಿಎಸ್ ಪಕ್ಷ ಎನ್ಡಿಎ ಮೈತ್ರಿಕೂಟದ ಜೊತೆ ಸೇರಲಿದೆ, ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದ ನಂತರ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜೆಡಿಎಸ್ ಸಮನಾದ ಅಂತರ ಕಾಯ್ದುಕೊಳ್ಳಲು ಆರಂಭಿಸಿದೆ.
ಜೆಡಿಎಸ್ ಪಕ್ಷ ನಿಷ್ಠರ ಸಭೆಗೆ ನನಗೆ ಆಹ್ವಾನ ಬಂದಿಲ್ಲ, ಆದರೂ ಹೋಗುತ್ತೇನೆ
ಇವೆಲ್ಲದರ ನಡುವೆ, ಎರಡು ದಿನಗಳ ಹಿಂದೆ ನಡೆದ ಜೆಡಿಎಸ್ ಯುವ ಘಟಕದ ಸಭೆಯಲ್ಲೂ ಅಶಿಸ್ತು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು, ಪಕ್ಷದೊಳಗೆ ಇದ್ದು, ಪಾರ್ಟಿಗೆ ವಿರುದ್ದವಾಗಿ ಕೆಲಸ ಮಾಡುವವರ ವಿರುದ್ದ ಎಚ್ಡಿಕೆ ಪರೋಕ್ಷವಾಗಿ ಕಿಡಿಕಾರಿದ್ದರು.
ಮೈಸೂರು ಭಾಗದ ಪ್ರಬಾವೀ ಮುಖಂಡ, ಕೃಷ್ಣರಾಜನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಪಕ್ಷದ ಹಿರಿಯ ಮುಖಂಡರೊಬ್ಬರನ್ನು ಉಚ್ಚಾಟಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
NDA ಮೈತ್ರಿಕೂಟಕ್ಕೆ ಜೆಡಿಎಸ್, ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಕುಮಾರಸ್ವಾಮಿ? ಸ್ಪಷ್ಟನೆ
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಕುತೂಹಲಕ್ಕೆ ಎಡೆಮಾಡಿದ್ದ ಕ್ಷೇತ್ರಗಳಲ್ಲಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರ ಕೂಡಾ ಒಂದು. ಅಲ್ಲಿಂದ ಸ್ಪರ್ಧಿಸಿದ್ದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ 36 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು. ಆದರೆ, ಚುನಾವಣೆ ಗೆದ್ದ ಕೆಲವೇ ತಿಂಗಳಲ್ಲಿ ಜಿಟಿಡಿ ಮತ್ತು ಕುಮಾರಸ್ವಾಮಿಯವರ ಸಂಬಂಧ ಹದೆಗೆಡಲು ಆರಂಭಿಸಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳುತ್ತಾ, ಬದಲಾದ ರಾಜಕೀಯದಲ್ಲಿ, ಜಿಟಿಡಿಯವರಿಗೆ ಕಾಂಗ್ರೆಸ್ ಮುಖಂಡರ ಜೊತೆ ಒಡನಾಟ ಹೆಚ್ಚಾಗುತ್ತಾ ಬಂತು.
ಶಾಸಕ ಸಾ.ರಾ.ಮಹೇಶ್ ಹೇಳಿಕೆ
"ರಾಜಕೀಯ ಎಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಏನಾದರೂ ತೊಂದರೆಯಿದ್ದರೂ, ಪಕ್ಷದ ಒಳಚೌಕಟ್ಟಿನಲ್ಲಿ ಚರ್ಚೆಯನ್ನು ಮಾಡಬೇಕು. ಎಷ್ಟೇ ದೊಡ್ಡವರಾಗಿರಲಿ, ಪಾರ್ಟಿಗಿಂತ ದೊಡ್ಡವರು ಯಾರೂ ಅಲ್ಲ. ಪಕ್ಷದಲ್ಲಿ ಇದ್ದುಕೊಂಡು, ಪಕ್ಷಕ್ಕೇ ಡ್ಯಾಮೇಜ್ ಆಗುವ ಕೆಲಸವನ್ನು ಮಾಡಿದಾಗ ಅನಿವಾರ್ಯವಾಗಿ ಕ್ರಮ ತೆಗೆದುಕೊಳ್ಲಬೇಕಾಗುತ್ತದೆ"ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಜಿ.ಟಿ.ದೇವೇಗೌಡ ಉಚ್ಚಾಟನೆಯ ಸಾಧ್ಯತೆ
ಸಮಯ, ಸಂದರ್ಭಕ್ಕೆ ತಕ್ಕಂತೆ ಯಾರು ಬದಲಾಗುತ್ತಿದ್ದಾರೆ ಎನ್ನುವುದನ್ನು ಜನ ಗಮನಿಸಿದ್ದಾರೆ. ಪಕ್ಷಕ್ಕೆ ಮುಜುಗರ ತರುವವರ ವಿರುದ್ದ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ನಮ್ಮ ನಾಯಕರಾದ ಕುಮಾರಸ್ವಾಮಿಯವರು ಚರ್ಚಿಸಿದ್ದಾರೆ"ಎಂದು ಸಾ.ರಾ.ಮಹೇಶ್ ಅವರು ಜಿ.ಟಿ.ದೇವೇಗೌಡ ಉಚ್ಚಾಟನೆಯ ಸಾಧ್ಯತೆಯ ಬಗ್ಗೆ ವಿವರಿಸಿದ್ದಾರೆ.
ಕಾಲಕ್ಕೆ ತಕ್ಕಂತೆ ಬದಲಾವಣೆಗಳು ನಡೆಯುತ್ತಿರುತ್ತವೆ
"ಕಾಲಕ್ಕೆ ತಕ್ಕಂತೆ ಬದಲಾವಣೆಗಳು ನಡೆಯುತ್ತಿರುತ್ತವೆ, ಅದೇ ರೀತಿ ಜೆಡಿಎಸ್ ನಲ್ಲೂ ಬದಲಾವಣೆಯಾಗುತ್ತಿದೆ. ಈ ವರ್ಷ ನನ್ನಲ್ಲಿ ಏನೂ ಬದಲಾವಣೆಯಾಗುವುದಿಲ್ಲ. 2023ರಲ್ಲಿ ಬದಲಾವಣೆ ಆದರೂ ಆಗಬಹುದು" ಎನ್ನುವ ಹೇಳಿಕೆಯನ್ನು ಎರಡು ದಿನಗಳ ಹಿಂದೆ ಜಿ.ಟಿ.ದೇವೇಗೌಡ ನೀಡಿದ್ದರು.