ರೋಹಿಣಿ ಸಿಂಧೂರಿ ರಾಜೀನಾಮೆ ಕೊಡ್ತೀರಾ?; ಸಾ. ರಾ. ಮಹೇಶ್
ಮೈಸೂರು, ಜೂನ್ 14; "ನೀವು ಐಎಎಸ್ ಹುದ್ದೆಗೆ ರಾಜೀನಾಮೆ ಕೊಡ್ತೀರಾ?. ಈಗ ಅದನ್ನು ನಾನು ಹೇಳುವುದಿಲ್ಲ. ಮನಸಾಕ್ಷಿ, ಆತ್ಮಸಾಕ್ಷಿ, ತಾಯಿ ಹೃದಯ ಇದ್ದರೆ ಒಮ್ಮೆ ಕುಳಿತುಕೊಂಡು ಮನಸಾಕ್ಷಿಯನ್ನು ಕೇಳಿ ಸಾಕು. ಈ ರೀತಿ ಅಧಿಕಾರಿಯನ್ನು ನಾನು ಜೀವನದಲ್ಲಿ ನೋಡಿಲ್ಲ" ಎಂದು ಕೆ. ಆರ್. ನಗರ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಾ. ರಾ. ಮಹೇಶ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ದ ವಾಗ್ದಾಳಿ ನಡೆಸಿದರು. "ಅದೇನೋ ಕಮ್ ಬ್ಯಾಕ್ ಅಂತೆ. ರಾಜ್ಯದ ಜನರು ಈ ಬಗ್ಗೆ ತೀರ್ಮಾನ ಮಾಡಬೇಕು" ಎಂದು ವ್ಯಂಗ್ಯವಾಡಿದರು.
ಸಾರಾ ಸಭಾಂಗಣ ಕುರಿತು ಸಮಗ್ರ ತನಿಖೆ ಮಾಡಿ ಎಂದ ರೋಹಿಣಿ ಸಿಂಧೂರಿ
"ಶ್ರೀಮತಿ ರೋಹಿಣಿ ಸಿಂಧೂರಿ ಅಂತಾ ನಾವು ಕರೆಯುತ್ತೇವೆ. ಪತಿಯ ಆಸ್ತಿ ಮಾಹಿತಿ ಎಲ್ಲಿ?. ಆಸ್ತಿ ಮಾಹಿತಿ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನ ಇಲ್ಲವಾ?. ಬೇರೆಯಾಗಿ ವಾಸವಾಗಿದ್ದರೆ ಸರಿ. ಸರ್ಕಾರಿ ನೌಕರೆ ಅನ್ನೋದನ್ನು ಮರೆತು ವರ್ತಿಸಿದ್ದಾರೆ" ಎಂದು ಟೀಕಿಸಿದರು.
"ಅಧಿಕಾರ ದುರುಪಯೋಗ, ಪಟ್ಟಭದ್ರಾಹಿತಾಸಕ್ತಿ, ಕೆಲವು ಸಾಮಾಜಿಕ ಜಾಲತಾಣ ಬಳಸಿಕೊಂಡು ಈ ರೀತಿ ಕೃತ್ಯವನ್ನು ಮಾಡಿದ್ದಾರೆ. ಈ ರೀತಿ ಅಧಿಕಾರಿಯನ್ನು ನಾನು ಜೀವನದಲ್ಲಿ ನೋಡಿಲ್ಲ" ಎಂದು ಸಾ. ರಾ. ಮಹೇಶ್ ಹೇಳಿದರು.
ಮೈಸೂರು ನೂತನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಆರೋಪ
ಪತ್ರಿಕಾಗೋಷ್ಠಿ ಮುಖ್ಯಾಂಶಗಳು
* ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರಿಯನ್ನು ಮನೆಗೆ ಕರೆಸಿಕೊಂಡರು ನಿರ್ಗಮಿತ ಡಿಸಿ. ಆ ವ್ಯಕ್ತಿಯಿಂದ ಮಾಹಿತಿ ತರಿಸಿಕೊಂಡು. ಆಯುಕ್ತರಿಗೆ ಜೂನ್ 5ರಂದು ಹಳೆ ಡೇಟ್ ಹಾಕಿಸಿ ಪತ್ರ ಬರೆದರು. ಜೂನ್ 6 ರಂದು ವರ್ಗಾವಣೆಯಾದರು.
* 30 ವರ್ಷಗಳ ಹಿಂದೆ ಎಕರೆಗೆ 90 ಸಾವಿರ ರೂಪಾಯಿಗೆ ಭೂಮಿ ಖರೀದಿ ಮಾಡಿದ್ದೆ. ಎರಡು ಎಕರೆ ಅಕ್ರಮ ಅಂತ ಹೇಳಿದರು. ನಾನು ಖರೀದಿ ಮಾಡಿದ್ದು 4 ಎಕರೆ. ಈ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ.
* ಲಿಂಗಾಂಬುದಿಪಾಳ್ಯ ಬಫರ್ ಝೋನ್ ವ್ಯಾಪ್ತಿ ಸಂಬಂಧ ಪತ್ರ ಬರೆದಿದ್ದಾರೆ. 2018ರ ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಕಾರ 30 ಮೀಟರ್ ಇದೆ. ಆದರೆ ರೋಹಿಣಿ ಸಿಂಧೂರಿ 2016ರ ಕಾಯ್ದೆ ಪ್ರಕಾರ ಆದೇಶಗಳನ್ನು ಹೊರಡಿಸಿದ್ದಾರೆ.
* ಇವರು ಏನು ಓದಿದ್ದಾರೋ ಗೊತ್ತಿಲ್ಲ. ಆಂಧ್ರದ ಲಾಭಿಯಿಂದ ದಲಿತ ಐಎಎಸ್ ಅಧಿಕಾರಿಯನ್ನು 28 ದಿನಗಳಲ್ಲೇ ವರ್ಗಾವಣೆ ಮಾಡಿಸಿದರು. ನಾನು ಇದಕ್ಕೆ ಕಾರಣರಾದ ರೋಹಿಣಿ ಸಿಂಧೂರಿಯನ್ನು ವಿರೋಧ ಮಾಡಿದ್ದೆ.
* ಕೋವಿಡ್ನಿಂದ ಮೈಸೂರು ನಗರದಲ್ಲಿ 238 ಮಂದಿ ಸಾವನ್ನಪ್ಪಿದ್ದಾರೆ ಅಂತಾ ವರದಿ ನೀಡಿದರು. ಆದರೆ 969 ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ ಈಗಾಗಲೇ ಕೋವಿಡ್ನಿಂದ ಸತ್ತ ಬಿಪಿಎಲ್ ಕುಟುಂಬದ ವ್ಯಕ್ತಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಈಗ ಲೆಕ್ಕಕ್ಕೆ ಸಿಗದೇ ಸತ್ತವರ ಕುಟುಂಬಕ್ಕೆ ಪರಿಹಾರ ಕೊಡುವವರು ಯಾರು?.
* ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸಂವೇದನಾಶೀಲತೆ ಇಲ್ಲದ ಅಧಿಕಾರಿ. ಕರ್ತವ್ಯಲೋಪ ಮುಚ್ಚಿಕೊಳ್ಳಲು ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದ ಜನರು ಇದನ್ನು ಗಮನಿಸಬೇಕು.
* ನಾನು ರಾಜಕಾಲುವೆ ಅಥವಾ ಹಳ್ಳದ ಮೇಲೆ ಚೌಟ್ರಿ ಕಟ್ಟಿದ್ದರೆ ರಾಜ್ಯಪಾಲರಿಗೆ ನೀಡುವೆ. ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುವೆ. ನೀವು ಐಎಎಸ್ ಹುದ್ದೆಗೆ ರಾಜೀನಾಮೆ ಕೊಡ್ತೀರಾ?.
* ಸಾ. ರಾ. ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ವಿಚಾರವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಭೂಮಾಪಕರು, ಎಸಿ ತಹಶೀಲ್ದಾರ್ ಭೂದಾಖಲೆಗಳ ಜಂಟಿ ನಿರ್ದೇಶಕರು ವರದಿ ನೀಡಿದ್ದಾರೆ.
* ಅಧಿಕಾರಿಗಳು ಇಂದಿನ ಮ್ಯಾಪ್ ಬಿಡುಗಡೆ ಮಾಡಿದ್ದಾರೆ. ಸರ್ವೇ ಮಾಡಿ ಹೊಸ ಮ್ಯಾಪ್ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಇಂದಿನ ಜಿಲ್ಲಾಧಿಕಾರಿ ಸಹ ಸಹಿ ಮಾಡಿದ್ದಾರೆ. ಸಾ. ರಾ. ಕಲ್ಯಾಣ ಮಂಟಪ ಹಳ್ಳದ ಮೇಲೆ ನಿರ್ಮಾಣವಾಗಿಲ್ಲ. ಯಾವುದೇ ಜಾಗ ಒತ್ತುವರಿ ಮಾಡಿಕೊಂಡಿಲ್ಲ.