ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ. ಮಹೇಶ್ ಹಾಗೂ ಮಲ್ಲೇಶ್ ದೂರು
ಮೈಸೂರು, ಜೂನ್ 21: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಹಲವು ಆರೋಪಗಳನ್ನು ಮಾಡುವ ಮೂಲಕ ಮಾತಿನ ಸಮರ ನಡೆಸುತ್ತಿದ್ದ ಮೈಸೂರಿನ ರಾಜಕೀಯ ನಾಯಕರು ಇದೀಗ ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಹೋರಾಟವನ್ನು ಆರಂಭಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರು ಮೈಸೂರಿನ ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಅವರ ವಿರುದ್ಧ ಜಟಾಪಟಿ ನಡೆಸುತ್ತಿದ್ದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹಾಗೂ ಚಾಮರಾಜನಗರದ ಬಿಜೆಪಿ ಮುಖಂಡ ಮಲ್ಲೇಶ್, ದೂರು ನೀಡುವ ಮೂಲಕ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಸಮರ ಸಾರಿದ್ದಾರೆ.
ತನಿಖಾಧಿಕಾರಿಗೆ ದೂರು
ದೇಶದ ಗಮನ ಸೆಳೆದಿದ್ದ ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಕರಣಕ್ಕೆ ರೋಹಿಣಿ ಸಿಂಧೂರಿ ಅವರೇ ಕಾರಣ ಎಂದಿದ್ದ ಚಾಮರಾಜನಗರದ ಬಿಜೆಪಿ ಮುಖಂಡ, ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ತನಿಖಾಧಿಕಾರಿಗೆ ದೂರು ನೀಡಿದ್ದಾರೆ. ಆಕ್ಸಿಜನ್ ದುರಂತದ ತನಿಖೆಗೆ ಸರ್ಕಾರ ನೇಮಕ ಮಾಡಿರುವ ಬಿ.ಎ. ಪಾಟೀಲ್ ಸಮಿತಿಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮನವಿ ಪತ್ರ, ಪೆನ್ಡ್ರೈವ್ ಹಸ್ತಾಂತರ ಮಾಡಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೆ ವಾಗ್ದಾಳಿ
ಆಸ್ತಿ ಮುಟ್ಟುಗೋಲಿಗೆ ಮನವಿ
ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೇಮಿಸಿದ್ದ ನ್ಯಾ. ವೇಣುಗೋಪಾಲ್ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಇದರಲ್ಲಿ ರೋಹಿಣಿ ಸಿಂಧೂರಿ ತಪ್ಪಿಲ್ಲ ಅಂತ ಹೇಳಲಾಗಿದೆ. ಆದರೆ ಅವರು ಇದುವರೆಗೂ ಚಾಮರಾಜನಗರಕ್ಕೆ ಬಂದು ತನಿಖೆ ಮಾಡಿಲ್ಲ ಹಾಗೂ ಪ್ರತಿವಾದಿಗಳ ಹೇಳಿಕೆ ದಾಖಲಿಸಿಕೊಂಡಿಲ್ಲ. ಅಲ್ಲದೇ ಸರ್ಕಾರ ನೇಮಿಸಿರುವ ಬಿ.ಎ. ಪಾಟೀಲ್ ಹಾಗೂ ಶಿವಯೋಗಿ ಕಳಸದ್ ಅವರಿಂದಲೂ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಪ್ರಕರಣದಲ್ಲಿ ಸಂಭವಿಸಿದ 24 ಸಾವುಗಳು ರೋಹಿಣಿ ಸಿಂಧೂರಿ ಮಾಡಿದ ಕೊಲೆಯಾಗಿದ್ದು, ಅವರ ವಿರುದ್ಧ ಐಪಿಸಿ ಕಾಯ್ದೆ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಬೇಕು. ಜತೆಗೆ ರೋಹಿಣಿ ಸಿಂಧೂರಿ ಅವರ ಸ್ವಂತ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕಾನೂನು ಹೋರಾಟಕ್ಕಿಳಿದ ಸಾರಾ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ. ಮಹೇಶ್ ನಡುವೆ ನಡೆಯುತ್ತಿರುವ ಆರೋಪ- ಪ್ರತ್ಯಾರೋಪದ ಜಟಾಪಟಿ ಇದೀಗ ಕಾನೂನಿನ ಮೆಟ್ಟಿಲೇರಿದೆ. ತಮ್ಮ ವಿರುದ್ಧ ಭೂ ಒತ್ತುವರಿ ಆರೋಪ ಮಾಡಿರುವ ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ತೊಡೆ ತಟ್ಟಿರುವ ಶಾಸಕ ಸಾ.ರಾ. ಮಹೇಶ್, ಮೈಸೂರು ಜಿಲ್ಲಾಧಿಕಾರಿ ಅಧಿಕೃತ ಸರಕಾರಿ ನಿವಾಸದ ನವೀಕರಣಕ್ಕೆ ಪಾರಂಪರಿಕ ಸಂರಕ್ಷಣಾ ಸಮಿತಿ ಅನುಮತಿ ಇಲ್ಲದೆ ಕಟ್ಟಡ ನವೀಕರಿಸಿ, ನಿವಾಸದ ನೆಲ ಹಾಸಿಗೆಯ ನವೀಕರಣ ಮಾಡಲಾಗಿದೆ. ಇದರ ತನಿಖೆಗೆ ಒತ್ತಾಯಿಸಿ ದೂರು ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.
ರೋಹಿಣಿ ಸಿಂಧೂರಿ ಯಾವ ಪ್ರತಿತಂತ್ರ ಹುಡುಕುತ್ತಾರೆ?
ಶಾಸಕ ಸಾ.ರಾ. ಮಹೇಶ್ ನೀಡಿರುವ ದೂರಿನ ಅನ್ವಯ ಈಗಾಗಲೇ ತನಿಖೆಗೆ ಮುಂದಾಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಾಸಕರು ನೀಡಿರುವ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ 7 ದಿನಗಳ ಒಳಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಗಳು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ಒಟ್ಟಾರೆ ರೋಹಿಣಿ ಸಿಂಧೂರಿ ಮೈಸೂರಿನಿಂದ ವರ್ಗಾವಣೆಯಾಗಿ ಹೋದರೂ, ಅವರ ಮೇಲೆ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ನಾಯಕರ ಸಿಟ್ಟು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ನಿರ್ಗಮಿತ ಡಿಸಿ ವಿರುದ್ಧ ಸ್ಥಳೀಯ ರಾಜಕೀಯ ನಾಯಕರು, ಕಾನೂನು ಹೋರಾಟದ ಅಸ್ತ್ರ ಪ್ರಯೋಗಿಸಿದ್ದು, ತಮ್ಮ ಎದುರಾಳಿಗಳ ತಂತ್ರಕ್ಕೆ ರೋಹಿಣಿ ಸಿಂಧೂರಿ ಯಾವ ಪ್ರತಿತಂತ್ರ ಹುಡುಕುತ್ತಾರೆ? ಎಂಬುದು ಎಲ್ಲರಲ್ಲಿ ಕುತೂಹಲ ಸೃಷ್ಟಿಸಿದೆ.