ಜನತಾ ಕರ್ಫ್ಯೂ ಆಚರಿಸುವಂತೆ ಶಾಸಕ ರಾಮದಾಸ್ ಮನವಿ
ಮೈಸೂರು, ಮಾರ್ಚ್ 20: ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯ ಮೇರೆಗೆ ಮಾರ್ಚ್ 22 ರ ಭಾನುವಾರ ಎಲ್ಲರೂ ಮನೆಯಲ್ಲಿಯೇ ಉಳಿದು ಸ್ವಘೋಷಿತ ಕರ್ಫ್ಯೂ ಆಚರಿಸಬೇಕು ಎಂದು ಶಾಸಕ ಎಸ್.ಎ ರಾಮದಾಸ್ ಅವರು ಮನವಿ ಮಾಡಿಕೊಂಡಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಮಹಾನಗರದ ಎಲ್ಲಾ ಸಂಘ ಸಂಸ್ಥೆಗಳು, ಸಂಯುಕ್ತ ಸಂಸ್ಥೆಗಳು ಈ ಒಂದು ರಾಷ್ಟ್ರೀಯ ಕರೆಗೆ ಸ್ಪಂದಿಸಲು ಒಪ್ಪಿದ್ದಾರೆ. ಅದರ ಜೊತೆಯಲ್ಲಿ ಮೈಸೂರಿನ ಎಲ್ಲಾ ಮಾರುಕಟ್ಟೆಗಳು, ಎಲ್ಲಾ ಉದ್ಯಾನವನಗಳು, ಆಟದ ಮೈದಾನಗಳು, ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಹತ್ತದಂತೆ ಮನವಿ ಮಾಡುವ ಕಾರ್ಯ ಹಾಗೂ ಎಲ್ಲಾ ವ್ಯಾಪಾರ ವ್ಯವಹಾರಗಳ ಸ್ಥಗಿತಕ್ಕಾಗಿ ಮನವಿ ಮಾಡಲಾಗಿದೆ ಎಂದರು.
ಸಾರಿಗೆ ವಾಹನಗಳು, (ಸರ್ಕಾರಿ, ಖಾಸಗಿ ಬಸ್ಸುಗಳು, ಕಾರು, ಆಟೋ ಮುಂತಾದ ವಾಹನಗಳು)ರಸ್ತೆಗೆ ಇಳಿಯದಂತೆ ಮನವಿ ಮಾಡಲಾಗಿದೆ. ವಿಶೆಷವಾಗಿ ಚರ್ಚ್ ಮುಖ್ಯಸ್ಥರು, ಮಸೀದಿಗಳ ಮುಖ್ಯಸ್ಥರು, ದೇವಾಲಯಗಳ ಅರ್ಚಕರಿಗೂ ಕೂಡ ಜನತಾ ಕರ್ಫ್ಯೂಗೆ ಸಹಕರಿಸಬೇಕೆಂದು ಕೋರಿದ್ದೇವೆ. ಹೋಟೆಲ್ ಗಳು, ಪೆಟ್ರೋಲ್ ಬಂಕ್ ಗಳು, ಟೀ ಸ್ಟಾಲ್, ಫುಟ್ ಪಾತ್ ವೆಂಡರ್ಸ್, ಪಾನ್ ಶಾಪ್, ಹೇರ್ ಕಟ್ಟಿಂಗ್ಸ್ ಸೆಲೂನ್, ಹೀಗೆ ಎಲ್ಲಾ ವ್ಯಾಪಾರ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ವರ್ತಕರ ಸಂಘ, ಬಾರ್ & ರೆಸ್ಟೋರೆಂಟ್ ಅಸೋಸಿಯೇಶನ್, ಮಿಲ್ಕ್ ವೆಂಡರ್ ಅಸೊಸಿಯೇಶನ್, ಪೆಟ್ರೋಲ್ ಬಂಕ್ ಗಳ ಅಸೋಸಿಯೇಶನ್, ಟೀ ಸ್ಟಾಲ್ ಅಸೋಸಿಯೇಶನ್, ಯೋಗ ಅಸೋಸಿಯೇಶನ್, ಫುಟ್ ಪಾತ್ ಹೋಟೆಲ್ ಮತ್ತು ಅಂಗಡಿಗಳ ಅಸೋಸಿಯೇಶನ್, ಓಲಾ ಉಬರ್ ಅಸೋಸಿಯೇಶನ್, ಬಿಎಐ, ಛತ್ರಗಳ ಮುಖ್ಯಸ್ಥರು ಸ್ವಯಂ ಕರ್ಫ್ಯೂಗೆ ಬೆಂಬಲ ನೀಡಬೇಕೆಂದರು.
ಬಾರ್ ಕೌನ್ಸಿಲ್ ಅಸೋಸಿಯೇಶನ್, ಸಣ್ಣ ಕೈಗಾರಿಕೋದ್ಯಮಗಳ ಅಸೋಸಿಯೇಶನ್, ಹಾಸ್ಟೆಲ್ ಗಳ ಮುಖ್ಯಸ್ಥರು, ಹೋಟೆಲ್ ಮಾಲೀಕರ ಸಂಘ, ಟ್ರಾವಲ್ಸ್ ಅಸೋಸಿಯೇಶನ್, ಪತ್ರಿಕಾ ವಿತರಕರ ಸಂಘ, ಆಟೋ ಸಂಘಗಳು, ವಾಹನ ಚಾಲಕರ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ಜ್ಯೂಯೆಲರ್ಸ್ ಅಸೋಸಿಯೇಶನ್, ಮಾರುಕಟ್ಟೆಗಳ ಸಂಘಸಂಸ್ಥೆಗಳು ಸಹಕರಿಸುವಂತೆ ಕೋರಿದರು.