ಪಾರಿವಾಳಗಳಿಗೆ ಆಹಾರ ನೀಡುವ ಮೂಲಕ ಸುಷ್ಮಾ ಸ್ವರಾಜ್ ಗೆ ಶ್ರದ್ಧಾಂಜಲಿ
ಮೈಸೂರು, ಆಗಸ್ಟ್ 7 : ಕೇಂದ್ರದ ಮಾಜಿ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಕಳೆದ ರಾತ್ರಿ ದೆಹಲಿಯಲ್ಲಿ ಹೃದಯಾಘಾತದಿಂದ ನಿಧನದ ಹಿನ್ನೆಲೆಯಲ್ಲಿ ಇಂದು ಶಾಸಕ ಎಸ್.ಎ.ರಾಮದಾಸ್ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮೈಸೂರಿನ ಹೆಲ್ಪಿಂಗ್ ಹ್ಯಾಂಡ್ಸ್ ಟ್ರಸ್ಟ್ ಸಹಯೋಗದಿಂದ ಅರಮನೆ ಮುಂಭಾಗ ಬರುವ ಪಾರಿವಾಳಗಳಿಗೆ ಆಹಾರ ನೀಡುವ ಮೂಲಕ ಸುಷ್ಮಾ ಸ್ವರಾಜ್ ಗೆ ಅಂತಿಮ ನಮನ ಸಲ್ಲಿಸಿದರು.
ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್
ಸಾಮಾನ್ಯ ಕುಟುಂಬದಿಂದ ಬಂದ ಮಹಿಳೆ ಸುಷ್ಮಾ ಸ್ವರಾಜ್, ಬಿಜೆಪಿ ಪ್ರಭಾವಿ ಮಹಿಳಾ ನಾಯಕಿಯಾಗಿ ಹೊರ ಹೊಮ್ಮಿದವರು. ಕರ್ನಾಟಕಕ್ಕೂ ಸುಷ್ಮಾ ಸ್ವರಾಜ್ ರಿಗೂ ಅವಿನಾಭಾವ ಸಂಬಂಧವಿತ್ತು. ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದರು. ವರಮಹಾಲಕ್ಷ್ಮೀ ಪೂಜೆಗೆ 2 ದಿನ ಬಾಕಿ ಇದೆ. ಆಗಲೇ ವಿಧಿ ಅವರನ್ನ ಕರೆದುಕೊಂಡಿದೆ. ಪಾರಿವಾಳಗಳಿಗೆ ನೀಡುವ ಆಹಾರದಲ್ಲಿ ಹೆಸರು ಬರೆಸಿ ಸಂತಾಪ ಸೂಚಿಸಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಕಚೇರಿಯಲ್ಲೂ ಶ್ರದ್ಧಾಂಜಲಿ : ಸುಷ್ಮಾ ಸ್ವರಾಜ್ ನಿಧನದ ಹಿನ್ನೆಲೆ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಬಿಜೆಪಿ ನಾಯಕಿಯಾಗಿ, ಸಚಿವೆಯಾಗಿ ಸುಷ್ಮಾ ಸ್ವರಾಜ್ ಮಾಡಿದ ಸಾಧನೆಗಳನ್ನು ಇದೇ ವೇಳೆ ನೆನಪಿಸಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮುಖಂಡರು ಭಾಗಿಯಾಗಿದ್ದರು.