ಮೈಸೂರಿಗೆ ಮೂರನೇ ಮಹಾರಾಣಿ ಅವಶ್ಯಕತೆಯಿಲ್ಲ: ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಕಿಡಿ
ಮೈಸೂರು, ನವೆಂಬರ್ 24: ಮೈಸೂರಿನಲ್ಲಿ ಈಗಾಗಲೇ ಇಬ್ಬರು ಮಹಾರಾಣಿಯರಿದ್ದಾರೆ. ಮೂರನೇ ಮಹಾರಾಣಿಯ ಅವಶ್ಯಕತೆ ಮೈಸೂರಿಗೆ ಇಲ್ಲ. ನೀವು ಮೂರನೇ ಮಹಾರಾಣಿ ರೀತಿ ವರ್ತಿಸಬೇಡಿ ಎಂದು ಹುಣಸೂರು ಶಾಸಕ ಎಚ್.ಪಿ ಮಂಜುನಾಥ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದರು.
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಪಿ ಮಂಜುನಾಥ್ ಅವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಶಾಸಕ ಬರೆದ ಪತ್ರಕ್ಕೂ ಜಿಲ್ಲಾಧಿಕಾರಿ ಉತ್ತರಿಸುವುದಿಲ್ಲ
ಹುಣಸೂರು ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕ್ಷೇತ್ರದ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಅವರಿಗೆ ಅನೇಕ ಬಾರಿ ಪತ್ರ ಬರೆದು ಗಮನ ಸೆಳೆದಿದ್ದೇನೆ. ಆದರೆ ಒಂದು ಪತ್ರಕ್ಕೂ ಅವರಿಂದ ಪ್ರತಿಕ್ರಿಯೆ ದೊರೆತ್ತಿಲ್ಲ. ನನಗೆ ಪತ್ರವೇ ತಲುಪಿಲ್ಲ ಎಂದು ಅವರು ಹೇಳಲಿ, ನಾನು ಸುಮ್ಮನಾಗುತ್ತೇನೆ ಎಂದರು. ಒಬ್ಬ ಶಾಸಕ ಬರೆದ ಪತ್ರಕ್ಕೂ ಜಿಲ್ಲಾಧಿಕಾರಿ ಉತ್ತರಿಸುವುದಿಲ್ಲ. ನೀವು ಈ ರೀತಿ ಮಹಾರಾಣಿಯಾಗಿ ಮೆರೆಯಬೇಡಿ, ಅಧಿಕಾರಿಯಾಗಿ ವರ್ತಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಆಕ್ರೋಶಗೊಂಡರು.
ನ. 24, 25ರಂದು ಯಡಿಯೂರಪ್ಪ ಮೈಸೂರು ಪ್ರವಾಸ
ಚುನಾವಣೆಯನ್ನು ಎದುರಿಸಿ ಎಂದು ಶಾಸಕ ಸವಾಲು
ನೀವು ನಿಮ್ಮದೇ ಧಾಟಿಯಲ್ಲಿ ಅಧಿಕಾರ ನಡೆಸುತ್ತೀದ್ದೀರ. ಜನಪ್ರತಿನಿಧಿಗಳ ಅವಶ್ಯಕತೆ ಇಲ್ಲ, ಎಲ್ಲವನ್ನೂ ನಾನೇ ಮಾಡುತ್ತೇನೆ ಎಂಬ ನಿಲುವು ಸರಿಯಲ್ಲ. ಈ ಬಾರಿಯ ಗಜಪಯಣಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಆಹ್ವಾನಿಸಲಿಲ್ಲ. ಆದರೆ, ನೀವು ಹೋಗಿ ಅಲ್ಲಿ ಮಾಡಿದ್ದೇನು? ನಾಲ್ಕು ಗಂಧಕಡ್ಡಿ ಹಚ್ಚಿ ಆನೆಗಳಿಗೆ ಪೂಜೆ ಮಾಡಿದ್ದೀರಿ. ಆ ಕೆಲಸವನ್ನು ನಾವು ಮಾಡಿದರೆ ಆಗುತ್ತಿರಲಿಲ್ಲವೇ? ಕರೆದರೆ ನಾವು ಬಂದು ಗಂಧದ ಕಡ್ಡಿ ಹಚ್ಚುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು. ನಿಮಗೆ ಇಷ್ಟೊಂದು ಮೆರೆಯುವ ಆಸೆ ಇದ್ದರೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯನ್ನು ಎದುರಿಸಿ ಎಂದು ಶಾಸಕ ಸವಾಲು ಹಾಕಿದರು.
ಯಾವುದೇ ಕಡತಗಳನ್ನು ಉಳಿಸಿಕೊಂಡಿಲ್ಲ
ಶಾಸಕರ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಜಿಲ್ಲಾಧಿಕಾರಿ ಮುಂದಾದಾಗ, ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಶಾಸಕ ಜಿ.ಟಿ ದೇವೇಗೌಡ ಜಿಲ್ಲಾಧಿಕಾರಿ ಅವರನ್ನು ತಡೆದರು. ಆಗ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ""ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಯಾವುದೇ ಕಡತಗಳನ್ನು ಉಳಿಸಿಕೊಂಡಿಲ್ಲ. ಕೆಲವು ಸಮಸ್ಯೆ ಇರುವ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲು ಸಮಯಾವಕಾಶ ಬೇಕಾಗುತ್ತದೆ. ಇದಕ್ಕಾಗಿ ಅವರು ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ'' ಎಂದು ಹೇಳಿದರು.
ಮಾತೃ ಹೃದಯ ಇರಬೇಕು
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್.ಪಿ. ಮಂಜುನಾಥ್, ಅವರು ಸ್ಪಂದನ ಕಾರ್ಯಕ್ರಮ ಮಾಡಲಿ, ಬೇಡ ಅನ್ನುವುದಿಲ್ಲ. ಆದರೆ, ಒಬ್ಬ ಶಾಸಕರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸುವಷ್ಟು ಸೌಜನ್ಯ ಅವರಿಗೆ ಇರಬೇಕು. ಅಧಿಕಾರಿ ಗಂಡಾಗಲಿ, ಹೆಣ್ಣಾಗಲಿ ಅವರಿಗೆ ಮಾತೃ ಹೃದಯ ಇರಬೇಕು. ಹಾಗಿದ್ದಲ್ಲಿ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಹುಣಸೂರು ಐಟಿಐ ಕಾಲೇಜಿಗೆ ಜಾಗ ಮಂಜೂರು ಮಾಡುವ ವಿಚಾರ, ನಗರಸಭೆಗೆ ಆಯುಕ್ತರನ್ನು ನೇಮಕ ಮಾಡುವ ವಿಚಾರ ಸೇರಿದಂತೆ ಹಲವು ವಿಚಾರದ ಕುರಿತು ಜಿಲ್ಲಾಧಿಕಾರಿ ಅವರ ಗಮನ ಸೆಳೆದರೂ ಸ್ಪಂದನೆ ದೊರೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಕಾಲದಿಂದಲೇ ನನೆಗುದಿಗೆ ಬಿದ್ದಿದೆ
ಈ ಹಂತದಲ್ಲಿ ಜಿಲ್ಲಾಧಿಕಾರಿ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅವರ ಬಗ್ಗೆ ರಾಣಿ, ಮಹಾರಾಣಿ ಎಂದು ಟೀಕಿಸುವುದು ಸರಿಯಲ್ಲ. ವೈಯಕ್ತಿಕ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಬೇಡಿ. ಐಟಿಐ ಕಾಲೇಜಿಗೆ ಜಾಗ ಮಂಜೂರು ಮಾಡುವ ವಿಚಾರ ಸಿದ್ದರಾಮಯ್ಯ ಅವರ ಕಾಲದಿಂದಲೇ ನನೆಗುದಿಗೆ ಬಿದ್ದಿದೆ. ಈಗ ಬಂದಿರುವ ಜಿಲ್ಲಾಧಿಕಾರಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ನಾನು ರಾಜೀನಾಮೆ ನೀಡಲು ಸಹ ಸಿದ್ಧ
ಸಂಸದರ ಮಾತಿನಿಂದ ಮತ್ತಷ್ಟು ಅಸಮಾಧಾನಗೊಂಡ ಶಾಸಕ ಎಚ್.ಪಿ ಮಂಜುನಾಥ್, ಹುಣಸೂರು ಕ್ಷೇತ್ರದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಆ ವಿಚಾರ ನಿಮಗೂ ಗೊತ್ತು. ನನ್ನ ಅವಧಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ನಡೆಯುವುದಿಲ್ಲ ಎಂದಾದರೆ ನಾನು ರಾಜೀನಾಮೆ ನೀಡಲು ಸಹ ಸಿದ್ಧ. ಮತ್ತೊಂದು ಉಪ ಚುನಾವಣೆ ಎದುರಾಗಲಿ, ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಬರಲಿ. ಆಗಲಾದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.