ಮೈಸೂರು ಸಂಸದ ಪ್ರತಾಪ್ ಸಿಂಹಗೆ ಬುದ್ಧಿ ಹೇಳಿದ ಬಿಜೆಪಿ ಶಾಸಕ!
ಮೈಸೂರು, ಅ. 21: ಮುಖ್ಯಮಂತ್ರಿ ಬದಲಾವಣೆ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕುರಿತು ಬಿಜೆಪಿಯಲ್ಲಿ ವಾಗ್ವಾದಗಳು ನಡೆದಿರುವುದಾಗಲೇ, ಬಿಜೆಪಿಯ ಸಂಸದ ಹಾಗೂ ಶಾಸಕರ ಮಧ್ಯೆ ಜಗಳ ತಾರಕಕ್ಕೇರಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಹಾಗೂ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಇದು ರಾಜ್ಯ ಬಿಜೆಪಿಗೆ ಮತ್ತೊಂದು ತಲೆನೋವು ಸೃಷ್ಟಿ ಮಾಡಿದೆ.
ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರದ ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆ ಕುರಿತು ಸಂಸದ ಪ್ರತಾಪ್ ಸಿಂಹ ಅವರು ಅತಿಯಾದ ಮುತುವರ್ಜಿ ವಹಿಸಿದ್ದನ್ನು ನಂಜನಗೂಡು ಶಾಸಕ ಹರ್ಷವರ್ಧನ್ ಅವರು ಈ ಹಿಂದೆಯೆ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಸುಖಾಸುಮ್ಮನೆ ತನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ ಎಂದೂ ಅವರು ಹಲವು ಬಾರಿ ಸಿಂಹಗೆ ಪರೋಕ್ಷ ಎಚ್ಚರಿಕೆಯನ್ನು ಕೊಟ್ಟಿದ್ದರು.
ಮೈಸೂರು: ವೃತ್ತಕ್ಕೆ ಮೃತ ಪಾಲಿಕೆ ಸದಸ್ಯರ ಹೆಸರಿಡಲು ಪ್ರತಾಪ್ ಸಿಂಹ ವಿರೋಧ
ಹೀಗಾಗಿ ಮೊದಲಿನಿಂದಲೂ ಶಾಸಕ ಹರ್ಷವರ್ಧನ್ ಹಾಗೂ ಪ್ರತಾಪ್ ಸಿಂಹ ಮಧ್ಯೆ ಯುದ್ಧ ನಡೆಯುತ್ತಲೇ ಇದೆ. ಇತ್ತೀಚಿಗಷ್ಟೇ ಸಂಸದ ಪ್ರತಾಪ್ ಸಿಂಹ ಅವರು ನಂಜನಗೂಡು ಜನರು ಯುದ್ಧಗೆ ಬರುತ್ತಾರೆ ಎಂದು ಹರ್ಷವರ್ಧನ್ ಮೇಲೆ ಪರೋಕ್ಷ ಆರೋಪ ಮಾಡಿದ್ದರು. ಅದಕ್ಕೆ ಹರ್ಷವರ್ಧನ್ ಏನೇನು ಹೇಳಿದ್ದಾರೆ? ಮುಂದಿದೆ ಓದಿ!
ಶ್ರೀನಿವಾಸ ಪ್ರಸಾದ್ ನಿಮಗೆ ಉತ್ತರ ಕೊಡುತ್ತಾರೆ ಎಚ್ಚರ!
ನಂಜನಗೂಡು ಅಭಿವೃದ್ದಿ ವಿಚಾರದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬೇಡಿ ಎಂದು ಶಾಸಕ ಹರ್ಷವರ್ಧನ್ ಸಂಸದ ಪ್ರತಾಪ್ ಸಿಂಹ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ವೃಥಾ ನನ್ನ ಮೇಲೆ ಆರೋಪ ಮಾಡಬೇಡಿ. ಇನ್ನು ಮುಂದೆಯೂ ನನ್ನ ಬಗ್ಗೆ ಮಾತನಾಡಿದರೆ ಈ ಬಾರಿ ನಾನು ಉತ್ತರ ಕೊಡುವುದಿಲ್ಲ. ಈ ಕ್ಷೇತ್ರದಲ್ಲಿ 6 ಬಾರಿ ಗೆದ್ದಿರುವ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಉತ್ತರ ಕೊಡುತ್ತಾರೆ. ಅದನ್ನು ತಡೆದುಕೊಳ್ಳೋದಕ್ಕೆ ನೀವು ರೆಡಿ ಆಗಿರಿ ಎಂದು ಸಿಂಹಗೆ ಎಚ್ಚರಿಕೆ ನೀಡಿದ್ದಾರೆ.
ದಲಿತ ಶಾಸಕನ ಮೇಲೆ ವೃಥಾ ಆರೋಪ ಮಾಡಬೇಡಿ
ಜ್ಯುಬಿಲಿಯೆಂಟ್ ಕಂಪನಿ ನೀಡಿದ್ದ ಕಿಟ್ ವಿಚಾರದಲ್ಲಿಯೂ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಒಬ್ಬ ದಲಿತ ಶಾಸಕನ ಮೇಲೆ ಆರೋಪ ಮಾಡುವುದು ಸರಿ ಅಲ್ಲ.
ಈಗಾಗಲೇ ಆರ್. ಧ್ರುವನಾರಾಯಣ ಅವರು ಮಾಡಿದ ಆರೋಪಕ್ಕೆ ನಂಜನಗೂಡು ದೇವಸ್ಥಾನದ ಬಳಿ ಉತ್ತರ ಕೊಟ್ಟಿದ್ದೇನೆ. ಕಂಪನಿ ಕೊಟ್ಟಿದ್ದ ಕಿಟ್ಗಳಲ್ಲಿ 5 ಸಾವಿರ ಕಿಟ್ಗಳನ್ನು ಮೈಸೂರಿಗೆ ಕೊಟ್ಟಿದ್ದೇನೆ, ಇದು ನಿಮಗೆ ನೆನಪಿರಲಿ ಎಂದು ಸಿಂಹಗೆ ಹರ್ಷವರ್ಧನ್ ಎಚ್ಚರಿಸಿದ್ದಾರೆ.
ಬಹಿರಂಗ ಚರ್ಚೆಗೆ ಬನ್ನಿ, ನಾನು ಸಿದ್ಧನಿದ್ದೇನೆ
ನಿಮ್ಮ ಮಾತುಗಳು ನನಗೆ ಬೇಸರ ತರಿಸಿವೆ. ನೀವು ಮಾತನಾಡಿರುವುದು ನಂಜನಗೂಡು ಜನತೆಗೆ. ನೀವು ಆರೋಪಿಸಿರುವ ವಿಚಾರಗಳ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಾಗಿದ್ದೇನೆ. ನಂಜನಗೂಡು ಕ್ಷೇತ್ರದ ಜನ ನಿಮಗೆ ಮತ ಹಾಕಿಲ್ಲ. ಬೀದರ್-ಕಲಬುರ್ಗಿಗೆ ಹೋಗಿ ಹೀಗೆ ಮಾತನಾಡಿ ನೋಡೋಣ. ನಿಮಗೆ ಆಗ ಗೊತ್ತಾಗುತ್ತದೆ ಎಂದು ಪ್ರತಾಪ್ ಸಿಂಹ ಅವರನ್ನು ಹರ್ಷವರ್ಧನ್ ತರಾಟೆಗೆ ತೆಗೆದು ಕೊಂಡಿದ್ದಾರೆ.
ಹೌದು! ನಾವು ಯುದ್ಧ ಮಾಡಿಯೇ ಗೆದ್ದಿರೋದು
ನಂಜನಗೂಡು ಜನ ಯುದ್ಧಗೆ ಬರ್ತಾರೆ ಎಂದಿದ್ದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿರುವ ಶಾಸಕ ಹರ್ಷವರ್ಧನ್ ಅವರು, ಹೌದು! ನಾವು ಯುದ್ಧ ಮಾಡಿಯೇ ಗೆದ್ದಿರೋದು. ಯಾವ ವಿಚಾರಕ್ಕೆ ಯುದ್ಧ ಮಾಡಬೇಕು ಯಾವುದಕ್ಕೆ ಮಾಡಬಾರದು ಎಂಬುದೂ ನಮಗೂ ಗೊತ್ತು. ಮೀಸಲು ಕ್ಷೇತ್ರದಲ್ಲಿ ಗೆಲ್ಲಲು ಯುದ್ಧ ಮಾಡಬೇಕು. ನನ್ನ ಬಗ್ಗೆ ಮಾಡಿರುವ ಆರೋಪವನ್ನು ಸಾಬೀತುಪಡಿಸಿ. ಒಂದೇ ಪಕ್ಷದವರು ಕಿತ್ತಾಡಿಕೊಂಡ್ರೆ ಸರಿ ಇರೋದಿಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ನಂಜನಗೂಡು ಶಾಸಕ ಹರ್ಷವರ್ಧನ್ ಬುದ್ಧಿ ಹೇಳಿದ್ದಾರೆ.