ಸಾ ರಾ ಮಹೇಶ್ ಗುಳ್ಳೆ ನರಿ; ವಿಶ್ವನಾಥ್ ಪುತ್ರ ಅಮಿತ್
ಮೈಸೂರು, ಜುಲೈ 22: "ನನ್ನ ತಂದೆ ವಿಶ್ವನಾಥ್ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಸಾಬೀತುಪಡಿಸಿ ನಂತರ ಸಾ ರಾ ಮಹೇಶ್ ಮಾತನಾಡಲಿ" ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಸವಾಲೆಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾ ರಾ ಮಹೇಶ್ ಗೆ ಆನೆ ತೂಕವೂ ಇಲ್ಲ. ನಾಯಿ ನಿಯತ್ತೂ ಇಲ್ಲ. ಗುಳ್ಳೆ ನರಿ, ಸಮಯ ಸಾಧಕ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಆತ್ಮಸಾಕ್ಷಿ ಇದ್ದರೆ ಸದನಕ್ಕೆ ಬನ್ನಿ; ವಿಶ್ವನಾಥ್ ಗೆ ಸವಾಲೆಸೆದ ಸಚಿವ ಸಾ ರಾ ಮಹೇಶ್
"ನಮ್ಮ ತಂದೆಯವರನ್ನು ಜಾತ್ಯತೀತ ಜನತಾ ದಳಕ್ಕೆ ಕರೆತಂದದ್ದು ಸಾ ರಾ ಮಹೇಶ್ ಅಲ್ಲ, ಮಧು ಬಂಗಾರಪ್ಪ ಅವರು. ನಾವು ಜಾ.ದಳಕ್ಕೆ ಬಂದ ಮೇಲೆ ಸಾ ರಾ ಮಹೇಶ್ ಗೆದ್ದಿದ್ದು. ಇಲ್ಲ ಅಂದ್ರೆ 5 ಸಾವಿರ ಮತಗಳಲ್ಲಿ ಸೋಲುತ್ತಿದ್ದರು. ಅಧಿಕಾರ ಹಾಗೂ ಹಾಗೂ ದುಡ್ಡಿನ ದಾಹದಿಂದ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಸಾ ರಾ ಮಹೇಶ್ ಅವರಿಗೂ ಇಬ್ಬರು ಮಕ್ಕಳಿದ್ದಾರೆ. ಅವರು ಯೋಚಿಸಿ ಮಾತನಾಡಬೇಕು. ನಮ್ಮ ತಂದೆ ವಿಶ್ವನಾಥ್ ಅವರು ಬಿಜೆಪಿ ಸೇರ್ಪಡೆಗೆ ಕೋಟಿ ಕೋಟಿ ಹಣ ಪಡೆದಿರುವ ಬಗ್ಗೆ ಆಣೆ ಪ್ರಮಾಣ ಮಾಡಲಿ ಎಂದು ಹೇಳುತ್ತಿದ್ದಾರೆ. ಸಾ ರಾ ಮಹೇಶ್ ಅವರೇ ನನ್ನ ಮಗನ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಬಿಜೆಪಿಯಿಂದ ನಾವೊಂದು ರುಪಾಯಿಯನ್ನೂ ಮುಟ್ಟಿಲ್ಲ. ದಯವಿಟ್ಟು ಸಾರ್ವಜನಿಕರ ಮುಂದೆ ಬಂದು ಬಿಜೆಪಿಯಿಂದ ಹಣ ಪಡೆದಿರುವ ಬಗ್ಗೆ ಸಾಬೀತು ಮಾಡಿ" ಎಂದು ಅಮಿತ್ ಸವಾಲೆಸೆದಿದ್ದಾರೆ.
ಅಮಿತ್ ಯಾರು ಎಂದು ಸಾ ರಾ ಮಹೇಶ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅಮಿತ್, "ನಾನು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೇನೆ. ಅಧಿಕಾರದಿಂದ ಇಳಿದ ಮೇಲೆ ನಿಮಗೆ ನಾನು ಯಾರು ಎಂದು ಗೊತ್ತಾಗುತ್ತದೆ" ಎಂದು ಹೇಳಿದರು.