ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿಯೇ ಅಡ್ಡಿ; ಎಚ್. ವಿಶ್ವನಾಥ್
ಮೈಸೂರು, ಜೂನ್ 27: ಸಿಎಂ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯಕ್ಕೆ ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯೊಬ್ಬರು ಹಳ್ಳಿಗಳಿಗೆ ಬರುತ್ತಿರುವಾಗ ಸ್ವಾಗತ ಮಾಡಬೇಕು. ಅದನ್ನು ಬಿಟ್ಟು ಅನಗತ್ಯ ಗೊಂದಲ ಸೃಷ್ಟಿಸಬಾರದು. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ರಾಜಕೀಯ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಮಧು ಬಂಗಾರಪ್ಪ ನೇಮಕ?
ಮೋದಿಗೆ ಓಟು ಹಾಕಿ ಸಮಸ್ಯೆ ನಮಗೆ ಹೇಳ್ತಿರಾ ಎಂದು ಬೇಸರಗೊಂಡು ಸಿಎಂ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅದರಲ್ಲಿ ಬೇರೇನೂ ಅರ್ಥವಿಲ್ಲ. ಎಲ್ಲ ಕಡೆ ಮೋದಿ ಮೋದಿ ಎಂದರೆ ಎಂಥವರಿಗಾದರೂ ಬೇಜಾರಾಗುತ್ತದೆ. ಅದೇ ರೀತಿ ಅವರಿಗೂ ಆಗಿದೆ. ಅದಕ್ಕೆ ಆ ಸಂದರ್ಭದಲ್ಲಿ ಆ ರೀತಿ ಹೇಳಿರಬಹುದು ಅಷ್ಟೆ' ಎಂದು ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮಧುಬಂಗಾರಪ್ಪರನ್ನು ನೇಮಕ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ನನ್ನ ಸಲಹೆ ನೀಡಿದ್ದೇನೆ. ಮಧು ಬಂಗಾರಪ್ಪ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಅಂತ ಹೇಳಿದ್ದೇನೆ. ಅದು ನನ್ನ ಸಲಹೆ ಅಷ್ಟೆ. ಆದರೆ ಈ ಸಂಬಂಧ ದೊಡ್ಡವರ ಆಯ್ಕೆಯೇ ಅಂತಿಮ. ಅದಕ್ಕೆ ನನ್ನ ಸಮ್ಮತಿ ಇದೆ ಎಂದು ಸ್ಪಷ್ಟಪಡಿಸಿದರು.