"ಕುಮಾರಸ್ವಾಮಿಯವರೇ... ಶಕುನಿ, ಮಂಥರೆಯ ಮಾತು ಕೇಳಬೇಡಿ''
ಮೈಸೂರು, ಮಾರ್ಚ್ 15: ಜೆಡಿಎಸ್ ನಾಯಕರ ಮೇಲಿನ ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡರ ಮುನಿಸು ಮುಂದುವರಿದಿದೆ. ತಮ್ಮದೇ ಪಕ್ಷದ ಶಾಸಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಜಿಟಿಡಿ, ಎಚ್.ಡಿ ಕುಮಾರಸ್ವಾಮಿ ಅವರೇ, ಶಕುನಿ, ಮಂಥರೆಯ ಮಾತು ಕೇಳಬೇಡಿ ಎಂದು ಶಾಸಕ ಸಾ.ರಾ ಮಹೇಶ್ ವಿರುದ್ಧ ಗುಡುಗಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತಾಡಿದ ಶಾಸಕ ಜಿಟಿಡಿ, ""ಶಕುನಿ ಕೌರವನ ಜೊತೆ ಸೇರಿ ಕೌರವ ವಂಶವನ್ನೇ ನಾಶ ಮಾಡಿದ. ಮಂಥರೆ ರಾಮನ ಪಟ್ಟಾಭಿಷೇಕ ತಪ್ಪಿಸಿ ಕಾಡಿಗೆ ಕಳುಹಿಸಿದಳು. ಕುಮಾರಸ್ವಾಮಿ ನಾಟಕದಲ್ಲಿ ಹೇಳುವ ಈ ಪ್ರಸಂಗಗಳಂತೆ ನಡೆದುಕೊಳ್ಳಬೇಡಿ. ನೀವು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅರ್ಥಪೂರ್ಣ ರೀತಿಯಲ್ಲಿ ತಿಳಿದುಕೊಳ್ಳಿ. ಸಾರಾ ಮಹೇಶ್ ಹೇಳಿದ್ದನ್ನೇ ಕಾಪಿ, ಜೆರಾಕ್ಸ್ ಹೊಡೆಯಲು ಹೋಗಬೇಡಿ. ನಿಮ್ಮ ನಾಯಕತ್ವಕ್ಕೆ ಬೆಲೆ ಇದೆ'' ಎಂದು ಕುಟುಕಿದರು.
"ಸಿಡಿ ಪ್ರಕರಣದ ಮಹಾನ್ ನಾಯಕ ಯಾರು? ಕುತೂಹಲ ನನಗೂ ಇದೆ''
ಕುಮಾರಸ್ವಾಮಿ ಅವರು ಜಿ.ಟಿ.ದೇವೇಗೌಡರ ಬೇರು ತೆಗೆಯುತ್ತಿಲ್ಲ. ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ. ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಊರೂರಿಗೆ ಹೋಗಿ ಪ್ರಚಾರವನ್ನೂ ಮಾಡದೆ ಮನೆಯಲ್ಲಿ ಕುಳಿತಿದ್ದೇನೆ. ನೀವು ತಾಲ್ಲೂಕುಗಳನ್ನು ಸುತ್ತುತ್ತಿದ್ದೀರಿ. ನನ್ನನ್ನು ನಾನು ಎಲ್ಲಿಯೂ ಆಲದಮರ ಅಂತ ಕರೆದುಕೊಂಡಿಲ್ಲ. ಆದ್ರೆ ನನ್ನ ವಿರುದ್ಧ ನೀವು ತಾಲ್ಲೂಕುಗಳಿಗೆ ಹೋಗಿ ಮಾತನಾಡಿದ್ದೀರಿ ಎಂದರು.
ಪಿರಿಯಾಪಟ್ಟಣದಲ್ಲಿ ಶಾಸಕ ಮಹದೇವು ಸಂಕಷ್ಟ ಕಾಲದಲ್ಲೂ ಜೆಡಿಎಸ್ ನಲ್ಲೇ ಉಳಿದುಕೊಂಡರು. ಅವರ ಮಗನ ವಿರುದ್ಧ ನೀವು ಪ್ರಚಾರ ಮಾಡಿದ್ದೀರಿ. ಜೆಡಿಎಸ್ ಬದಲು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದೀರಿ ಎಂದು ಜಿಟಿಡಿ ಕಿಡಿಕಾರಿದರು.
""ಶಾಸಕ ಸಾ.ರಾ ಮಹೇಶ್ ಛತ್ರಕ್ಕೆ ಬಂದು ನನ್ನನ್ನು ಜೆಡಿಎಸ್ ನಿಂದ ಹೊರಗೆ ಹಾಕುತ್ತೇವೆ ಅಂತ ಹೇಳಿದ್ದೀರಿ. ಪದೇ ಪದೇ ನನ್ನನ್ನು ಯಾಕೆ ಅವಮಾನ ಮಾಡುತ್ತೀರಿ. ನಾನು ಈಗಲೂ ಜೆಡಿಎಸ್ ನಲ್ಲೇ ಇದ್ದೇನೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಸಾಲಿನಲ್ಲೇ ನನಗೆ ಖುರ್ಚಿ ಇದೆ'' ಎಂದು ತಿಳಿಸಿದರು.
""ನಾನು ಈಗಲೂ ಜೆಡಿಎಸ್ ಶಾಸಕರ ಜತೆಯಲ್ಲೇ ಕುಳಿತುಕೊಳ್ಳುತ್ತಿದ್ದೇನೆ. ನಾನು ಎಲ್ಲಿಗೂ ಹೋಗದಂತೆ ಜೆಡಿಎಎಸ್ ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ. ಕುಮಾರಸ್ವಾಮಿ ಅವರು ಯಾರ್ಯಾರದ್ದೋ ಮಾತು ಕೇಳಿಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ'' ಎಂದು ಜಿಟಿ ದೇವೇಗೌಡ ಆರೋಪಿಸಿದರು.