ಶಾಸಕ ಜಿ.ಟಿ ದೇವೇಗೌಡ ಹಾಗೂ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ
ಮೈಸೂರು, ಜನವರಿ 19: ಮುಖ್ಯಮಂತ್ರಿಯನ್ನು ಸೋಲಿಸಿದ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅವರು ಜೆಡಿಎಸ್ ಪಕ್ಷದಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿದ್ದವು. ಮೈಸೂರು ಭಾಗದ ಪ್ರಭಾವಿ ಜೆಡಿಎಸ್ ನಾಯಕರಾಗಿದ್ದ ಜಿಟಿಡಿ ಅವರು, ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಪಕ್ಷವೂ ಕೂಡ ಅವರನ್ನು ನಿರ್ಲಕ್ಷಿಸಿದೆ.
ಮೈಸೂರು ವಿಭಾಗದ ಜೆಡಿಎಸ್ ನಾಯಕರಲ್ಲಿ ಅಸಮಾಧಾನ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಹಲವು ದಿನಗಳಿಂದಲೂ ಸ್ಥಳೀಯ ನಾಯಕರ ನಡುವೆ ನಡೆಯುತ್ತಿದ್ದ ಶಾಸಕ ಜಿ.ಟಿ ದೇವೇಗೌಡರ ಮುಸುಕಿನ ಗುದ್ದಾಟ, ಇದೀಗ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟವೂ ಇದೀಗ ಬಹಿರಂಗವಾಗಿದೆ.
ಪಕ್ಷಕ್ಕೆ ಹೊಸ ಹುರುಪು
ಸಂಕ್ರಾಂತಿ ಬೆನ್ನಲ್ಲೇ ಪಕ್ಷಕ್ಕೆ ಹೊಸ ಹುರುಪು ನೀಡುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಟ್ಟಿರುವ ಜೆಡಿಎಸ್ ನಾಯಕರು, ಇದಕ್ಕಾಗಿ ತಮ್ಮದೇ ರಣತಂತ್ರ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ಬಗ್ಗೆ ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಜಿ.ಟಿ. ದೇವೇಗೌಡರಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ನಾಯಕರು ತೀರ್ಮಾನಿಸಿದಂತಿದೆ.
ಜೆಡಿಎಸ್ ವಿಭಾಗಗಳ ವೀಕ್ಷಕರುಗಳ ಪಟ್ಟಿ ಬಿಡುಗಡೆ
ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ವಿಭಾಗಗಳ ವೀಕ್ಷಕರುಗಳ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್, ಮೈಸೂರು ಭಾಗದ ಹಿರಿಯ ನಾಯಕ ಹಾಗೂ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜಿಟಿಡಿ ಹೊರತುಪಡಿಸಿ ಹಳೇ ಮೈಸೂರು ಪ್ರಾಂತ್ಯದ ಉಳಿದೆಲ್ಲ ಶಾಸಕರು, ಪ್ರಮುಖರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ.
ಉದ್ದೇಶ ಪೂರ್ವಕವಾಗಿ ಜಿಟಿಡಿ ಹೆಸರನ್ನು ಕೈಬಿಟ್ಟಿದೆ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೆಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ವಿಭಾಗಗಳ ವೀಕ್ಷಕರ ನೇಮಕ ಮಾಡಲಾಗಿದೆ. ಆದರೆ ಪಟ್ಟಿಯಲ್ಲಿ ಉದ್ದೇಶ ಪೂರ್ವಕವಾಗಿ ಜಿಟಿಡಿ ಹೆಸರನ್ನು ಕೈಬಿಟ್ಟಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜೆಡಿಎಸ್ ನಾಯಕರು ಮತ್ತು ಜಿ.ಟಿ ದೇವೆಗೌಡರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
Recommended Video
ಜಿಟಿಡಿಯನ್ನು ಪಕ್ಷದಿಂದ ಉಚ್ಚಾಟಿಸುವ ಮುನ್ಸೂಚನೆ
ಕೆಲ ದಿನಗಳ ಹಿಂದಷ್ಟೇ ಪಕ್ಷದ ಪರ ಇಲ್ಲದವರನ್ನು ಮೈಸೂರಿನಿಂದಲೇ ಉಚ್ಚಾಟಿಸುವುದಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದೀಗ ವೀಕ್ಷಕರ ಪಟ್ಟಿಯಿಂದ ಕೈಬಿಡುವ ಮೂಲಕ ಜಿಟಿಡಿಯನ್ನು ಪಕ್ಷದಿಂದ ಉಚ್ಚಾಟಿಸುವ ಮುನ್ಸೂಚನೆ ತೋರಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮೈಸೂರು ವಿಭಾಗದ ವೀಕ್ಷಕರುಗಳಾಗಿ ಶಾಸಕರಾದ ಎಚ್.ಡಿ ರೇವಣ್ಣ, ಸಾರಾ ಮಹೇಶ್, ಪುಟ್ಟರಾಜು, ಅಶ್ವಿನ್ ಕುಮಾರ್, ಅನ್ನದಾನಿ, ಮಾಜಿ ಶಾಸಕ ಚಿಕ್ಕಣ್ಣ, ನಿಖಿಲ್ ಕುಮಾರಸ್ವಾಮಿ, ಮೊಹಮ್ಮದ್ ಜಫ್ರುಲ್ಲಖಾನ್, ಅಬ್ದುಲ್ ಅಜೀಜ್. ಅಬ್ದುಲ್ಲಾ ಅವರನ್ನು ನೇಮಿಸಲಾಗಿದೆ. ಆದರೆ ಜಿ.ಟಿ ದೇವೇಗೌಡ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.