"ನಟನೆ ಮಾಡುವುದನ್ನು ಎಚ್.ಡಿ ಕುಮಾರಸ್ವಾಮಿ ನೋಡಿ ಕಲಿಯಬೇಕು''
ಮೈಸೂರು, ಜನವರಿ 19: ರೋಗ ಇರುವವರನ್ನು ಪತ್ತೆ ಹಚ್ಚಬಹುದು, ಆದರೆ ರೋಗ ಇರುವಂತೆ ನಟನೆ ಮಾಡುವವರನ್ನು ಪತ್ತೆ ಹಚ್ಚೋದು ಕಷ್ಟ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ಶಾಸಕ ಜಿ.ಟಿ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷ ಸಂಘಟನೆ ವಿಚಾರವಾಗಿ ವಿಭಾಗವಾರು ಪಟ್ಟಿಯಲ್ಲಿ ನನ್ನ ಹೆಸರು ಕೈ ಬಿಟ್ಟಿದ್ದಾರೆ. ಸಂಘಟನೆಯಲ್ಲಿ ನನಗೆ ವಯಸ್ಸಾಯ್ತು ಎಂದು ಕೈ ಬಿಟ್ಟಿರಬೇಕು. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯುತ್ತಿರಲಿಲ್ಲ. ಇನ್ನು ಇವಾಗ ನಡೆಯುತ್ತಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಶಾಸಕ ಜಿ.ಟಿ ದೇವೇಗೌಡ ಹಾಗೂ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ
ಪಾಲಿಕೆ ಮೇಯರ್ ವಿಚಾರದಲ್ಲಿ ನನ್ನನ್ನು ಬಿಟ್ಟು ಸಭೆ ನಡೆಸಿದ್ದಾರೆ. ಮಾಧ್ಯಮಗಳ ಮುಂದೆ ಹೇಳುವುದು ಒಂದು, ಅವರು ನಡೆದುಕೊಳ್ಳುವ ರೀತಿಯೇ ಒಂದು. ನಾನು ಜನತಾ ದಳದ ಶಾಸಕ, ಸಚಿವನಾಗಬೇಕು ಎಂಬ ಆಸೆ ಇದ್ದರೆ ಎಚ್.ವಿಶ್ವನಾಥ್, ನಾರಾಯಣ ಗೌಡ ಪಕ್ಷ ಬಿಟ್ಟು ಹೋದಾಗಲೇ ನಾನು ಬೀಡಬಹುದಿತ್ತು.
ಆದರೆ ಕುಮಾರಸ್ವಾಮಿಯನ್ನು ನಾನೇ ಮುಖ್ಯಮಂತ್ರಿ ಮಾಡಿ, ನಾನೇ ಪದಚ್ಯುತಿ ಮಾಡ್ತೀನಾ? ಆ ಕೆಲಸ ನಾನು ಮಾಡಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದಿನ ತಾ.ಪಂ ಹಾಗೂ ಜಿ.ಪಂ ಚುನಾವಣೆಗೂ ಸ್ವತಃ ನಾನೇ ಬಿ.ಫಾರಂ ಕೊಡ್ತೀನಿ ಅಂತ ಎಚ್ಡಿಕೆ ಹೇಳಿದ್ದಾರೆ. ಹಾಗಾಗಿ ಅದರಲ್ಲೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೆಗೌಡ ಜೆಡಿಎಸ್ ನಾಯಕರ ವಿರುದ್ಧ ಗುಡುಗಿದರು.