ಬಿಜೆಪಿ ಸರ್ಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ: ಮಾಜಿ ಸಂಸದ ಆರೋಪ
ಮೈಸೂರು, ಅಕ್ಟೋಬರ್ 5: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಅವರ ಸೋದರ ಡಿ.ಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಜಿ ಸಂಸದ ಧ್ರುವ ನಾರಾಯಣ್ ತುರ್ತು ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ಒಂದು ಪ್ರತಿಷ್ಠಿತ ಸಂಸ್ಥೆಯಾಗಿತ್ತು, ಈಗ ಕಮ್ಯೂನಲ್ ಇನ್ವೆಸ್ಟಿಗೆಷನ್ ಬ್ಯೂರೋ ಆಗಿದೆ. ಇದು ಪೂರ್ವ ನಿಯೋಜಿತ ರಾಜಕೀಯ ದಾಳಿಯಾಗಿದೆ. ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದಾರೆ. ಸಿಬಿಐ ಬಿಜೆಪಿ ಏಜೆಂಟ್ ಆಗಿದೆ ಎಂದು ಆರೋಪಿಸಿದರು.
ಅರ್ಥಪೂರ್ಣವಾದ ಸರಳ ದಸರಾ ಆಚರಣೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ವಿಪಕ್ಷಗಳನ್ನು ಸೆದೆಬಡಿಯುವ ಕೆಲಸ ಆಗುತ್ತಿದ್ದು, ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸುತ್ತಿದ್ದರೂ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ತಿಳಿದು ದಾಳಿ ನಡೆದಿದೆ. ಇದು ಸೇಡಿನ ರಾಜಕಾರಣದ ದಾಳಿ, ಈ ಸೇಡಿನ ಬೆಂಕಿ ಒಂದು ದಿನ ಬಿಜೆಪಿಯನ್ನೇ ಸುಡಲಿದೆ ಎಂದು ಕಿಡಿಕಾರಿದರು.
ದೇಶದಾದ್ಯಂತ ಒನ್ ಸೈಡ್ ಟಾರ್ಗೆಟ್ ಮಾಡುತ್ತಿದ್ದಾರೆ. ಬಲವಾಗಿರುವ ವಿರೋಧ ಪಕ್ಷಗಳ ವಿರುದ್ಧ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಯವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಚುನಾವಣೆ ಸಂದರ್ಭದಲ್ಲಿ ಒಳ್ಳೆಯ ತಂತ್ರಗಳ ಮೂಲಕ ಚುನಾವಣೆ ಚತುರರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರ ಮನೆ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಆರೋಪಿಸಿದರು.
ಕನಕಪುರ ಬಂಡೆ ಯಾರಿಗೂ ಹೆದರುವುದಿಲ್ಲ, ಈ ಹಿಂದೆ ಗುಜರಾತ್ ಚುನಾವಣೆ ವೇಳೆ ದಾಳಿ ಮಾಡಿದ್ದರು. ಈಗ ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ದಾಳಿ ಮಾಡಿದ್ದಾರೆ. ಡಿಕೆಶಿ ತನಿಖೆಯಾದ ಮೇಲೂ ಪರಿಶುದ್ದರಾಗಿಯೇ ಆಚೆ ಬರುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಯಾಕೆ ದಾಳಿ ಮಾಡಬೇಕು ಎಂದು ಪ್ರಶ್ನಿಸಿದರು.
ರಾಜ್ಯಸಭೆ ಚುನಾವಣಾ ವೇಳೆ ತುಂಬಾ ರಿಸ್ಕ್ ತೆಗೆದುಕೊಂಡರು. ಆ ಕಾರಣಕ್ಕಾಗಿಯೇ ಅವರ ಮನೆ ಮೇಲೆ ದಾಳಿ ನಡೆದಿದೆ. ಉಪ ಚುನಾವಣೆ ವೇಳೆ ಸೋಲುವ ಭಯದಿಂದಲೇ ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.