ಮೈಸೂರು: ಫಸಲಿಗೆ ಬಂದಿದ್ದ ಬಾಳೆ ನಾಶಗೊಳಿಸಿದ ದುಷ್ಕರ್ಮಿಗಳು
ಅತ್ತಳ್ಳಿ (ಮೈಸೂರು), ಜನವರಿ 01: ಬಾಳೆಯನ್ನು ನೆಟ್ಟು ಬೆಳೆಸಿ ಅದು ಫಸಲಿಗೆ ಬರುವ ಸಮಯದಲ್ಲೇ ದುಷ್ಕರ್ಮಿಗಳು ಕಡಿದು ನಾಶಗೊಳಿಸುವ ಮೂಲಕ ಹೊಸವರ್ಷದ ದಿನವೇ ರೈತ ಕಣ್ಣೀರಿಡುವಂತೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಬನ್ನೂರು ಬಳಿಯ ಅತ್ತಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರು ಸಮೀಪದ ಅತ್ತಹಳ್ಳಿ ಗ್ರಾಮದ ರಾಮಪ್ರಸಾದ್ ಎಂಬವರಿಗೆ ಸೇರಿದ್ದು, ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಬಾಳೆ ಬೆಳೆಯನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಇದರಿಂದ ರಾಮಪ್ರಸಾದ್ ನೋವಿನಲ್ಲಿ ದಿನಕಳೆಯುವಂತಾಗಿದೆ.
ರಾಮಪ್ರಸಾದ್ ಅವರು ತಮ್ಮ ಒಂದೂವರೆ ಎಕರೆ ಪ್ರದೇಶದ ಗದ್ದೆಯಲ್ಲಿ ಬಾಳೆಯನ್ನು ಬೆಳೆದಿದ್ದರು. ಗೊಬ್ಬರ ನೀರು ಹಾಕಿ ಆರೈಕೆ ಮಾಡಿದ್ದರಿಂದ ಹುಲುಸಾಗಿ ಬೆಳೆದು ಗೊನೆಬಿಟ್ಟು ಕೆಲವೇ ತಿಂಗಳಲ್ಲಿ ಕಟಾವಿಗೂ ಬರುವಂತಿತ್ತು. ಆದರೆ, ಭಾನುವಾರ ರಾತ್ರಿ ದುಷ್ಕರ್ಮಿಗಳು ಬಾಳೆತೋಟಕ್ಕೆ ನುಗ್ಗಿ ಬೆಳೆದು ನಿಂತ ಬಾಳೆಯನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ.
ಎಂದಿನಂತೆ ಸೋಮವಾರ ಬೆಳಗ್ಗೆ ಬಾಳೆತೋಟಕ್ಕೆ ತೆರಳಿದ ಸಂದರ್ಭ ಬಾಳೆಗಿಡಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ.
ಕುಂತನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಗದ್ದೆ ಇದಾಗಿದ್ದು, ಸಮೀಪದಲ್ಲಿಯೇ ಜನರ ಓಡಾಟ ಇದ್ದು ಹೀಗಿದ್ದರೂ ಸುಮಾರು ಒಂದೂವರೆ ಎಕರೆಯಲ್ಲಿರುವ ಸುಮಾರು 1900 ಗಿಡಗಳನ್ನು ಸಂಪೂರ್ಣವಾಗಿ ಕಿಡಿಗೇಡಿಗಳು ಕಡಿದು ಹಾಕಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಬೆಳೆಗಾರ ರಾಮಪ್ರಸಾದ್ ಅವರು ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದು, ಮಕ್ಕಳಾದ ವಿನಯ ಪ್ರಸಾದ್ ಮತ್ತು ವಿಜಯ ಪ್ರಸಾದ್ ಎಂಬುವರು ಮೈಸೂರಿಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭವನ್ನು ನೋಡಿಕೊಂಡು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.