ಮೈಸೂರು: ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆಯ ರಕ್ಷಣೆ ಮಾಡಿದ ಆಟೋ ಚಾಲಕ
ಮೈಸೂರು, ಡಿಸೆಂಬರ್ 8: ಇತ್ತೀಚೆಗೆ ಪುಟ್ಟ ಮಕ್ಕಳು ಮನೆಯಲ್ಲಿ ಹಿರಿಯರು ಬುದ್ಧಿ ಹೇಳಿದ್ದನ್ನೂ ಸಹಿಸಿಕೊಳ್ಳದೆ ಮನೆ ಬಿಟ್ಟು ಹೋಗುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇಂತಹ ಕಾರಣಕ್ಕೆ ಮನೆಬಿಟ್ಟು ಬಂದ 12 ವರ್ಷದ ಬಾಲಕಿಯನ್ನು ಇಲ್ಲಿನ ಆಟೋ ಚಾಲಕರೊಬ್ಬರು ರಕ್ಷಣೆ ಮಾಡಿ ಮೈಸೂರು ನಗರದ ಬಾಲಕಿಯರ ಬಾಲಮಂದಿರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ಮೂಲದ ಈ ಬಾಲಕಿ ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಎಲ್ಲಿಗೆ ಹೋಗಬೇಕು ಎಂದು ತಿಳಿಯದೇ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದಳು. ಇದನ್ನು ಗಮನಿಸಿದ ಆಟೋ ಚಾಲಕ ಜುಬೇರ್ ಬಾಲಕಿಯ ಬಳಿ ಬಂದು ಎಲ್ಲಿಗೆ ಹೋಗಬೇಕೆಂದು ಕೇಳಿದ್ದಾರೆ.
Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!
ಮೈಸೂರಿನಲ್ಲಿ ನಮ್ಮ ಸಂಬಂಧಿಕರ ಮನೆಯಿದ್ದು, ಅಲ್ಲಿಗೆ ಹೋಗಬೇಕೆಂದು ಬಾಲಕಿ ಉತ್ತರ ನೀಡಿದ್ದಾಳೆ. ಇದೇ ವೇಳೆ ಜುಬೇರ್ ಸಂಬಂಧಿಕರ ಮನೆಯ ವಿಳಾಸ ನೀಡುವಂತೆ ಕೇಳಿದ್ದು, ಆಗ ಬಾಲಕಿ 'ನನಗೆ ಗೊತ್ತಿಲ್ಲ, ಅವರ ಮನೆಯವರ ಮೊಬೈಲ್ ನಂಬರ್ ಕೂಡ ನನ್ನ ಬಳಿ ಇಲ್ಲ ಎಂದು ಉತ್ತರಿಸಿದ್ದು, ತಕ್ಷಣ ಜಾಗೃತನಾದ ಆಟೋ ಚಾಲಕ ಬಾಲಕಿಯನ್ನು ನೇರವಾಗಿ ಶಕ್ತಿಧಾಮಕ್ಕೆ ಕರೆದುಕೊಂಡು ಹೋಗಿದ್ದಾರೆ.
ಆದರೆ ಇಲ್ಲಿ ಮಕ್ಕಳಿಗೆ ಅವಕಾಶವಿಲ್ಲ ಎಂದು ಹೇಳಿದ ಅಲ್ಲಿನ ಸಿಬ್ಬಂದಿ ಬಾಲಕಿಯರ ಬಾಲ ಮಂದಿರಕ್ಕೆ ಬಿಡುವಂತೆ ಸಲಹೆ ನೀಡಿದ್ದು, ಜುಬೇರ್ ನೇರವಾಗಿ ಆ ಬಾಲಕಿಯನ್ನು ಬಾಲಮಂದಿರಕ್ಕೆ ಕರೆ ತಂದು ಬಿಟ್ಟಿದ್ದಾರೆ.
ಅಲ್ಲಿ ಬಾಲಕಿಯನ್ನು ಕೌನ್ಸೆಲಿಂಗ್ ಮಾಡಿದಾಗ ನೀನು ಸರಿಯಾಗಿ ಓದುವುದಿಲ್ಲ ಎಂದು ಪಾಲಕರು ಪದೇ ಪದೆ ಬೈಯುತ್ತಿದ್ದರು. ಇಂಜಿನಿಯರಿಂಗ್ ಓದುತ್ತಿರುವ ತನ್ನ ಅಕ್ಕನಿಗೆ ಹೋಲಿಕೆ ಮಾಡಿ ಜರಿಯುವುದು ಮಾಡುತ್ತಿದ್ದರು ಎಂದು ಬಾಲಕಿ ಬಾಯ್ಬಿಟ್ಟಿದ್ದಾಳೆ.
ಇದೇ ಬಾಲಕಿಯ ಮನಸ್ಸನ್ನು ಹೆಚ್ಚು ಘಾಸಿ ಮಾಡಿದ್ದು, ತಾನು ಕೂಡಿಟ್ಟುಕೊಂಡಿದ್ದ ಹಣವನ್ನು ಬಳಸಿಕೊಂಡು ಬಾಲಕಿ ಮೈಸೂರು ಬಸ್ ಹತ್ತಿ ಬಂದಿದ್ದಾಳೆ ಎನ್ನಲಾಗಿದೆ. ಇದೀಗ ಬಾಲಕಿ ಬಾಲಮಂದಿರದಲ್ಲಿ ಸುರಕ್ಷಿತವಾಗಿದ್ದಾಳೆ.