ಜಂಬೂಸವಾರಿ ಮಾರ್ಗದಲ್ಲಿ ವಾಕ್ ಮಾಡಿ ಸಮಸ್ಯೆ ಕೇಳಿದ ಸಚಿವ ಸೋಮಣ್ಣ
ಮೈಸೂರು, ಆಗಸ್ಟ್ 31: ನಾಡಹಬ್ಬ ದಸರೆಗೆ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ ಇಂದು ಬೆಳ್ಳಂಬೆಳಿಗ್ಗೆ ಗಜಪಡೆಯೊಂದಿಗೆ ಸಾಗಿ ರಾಜಪಥದ ಮಾರ್ಗದಲ್ಲಿನ ಸಮಸ್ಯೆಗಳನ್ನು ಗಮನಿಸಿದರು.
ವರ್ಷದ ಕೊನೆಯಲ್ಲಿ ಮೈಸೂರು, ಹಂಪಿಗೆ ಬರಲಿದೆ ಡಬಲ್ ಡೆಕ್ಕರ್ ಬಸ್?
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಿಟಿ ರೌಂಡ್ಸ್ ಹಾಕಿ ಸಮಸ್ಯೆಗಳನ್ನು ಆಲಿಸಿದರು. ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಬನ್ನಿಮಂಟಪದವರೆಗೂ ನಡಿಗೆ ಮೂಲಕ ಸಾಗಿದ ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಹಲವರು ಸಾಥ್ ನೀಡಿದರು.
ರಾಜಮಾರ್ಗದಲ್ಲಿ ಜಂಬೂಸವಾರಿ ಸುಗಮವಾಗಿ ತೆರಳಲು ಫುಟ್ ಪಾತ್, ರಸ್ತೆ ಸಂಚಾರ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಬಗೆಹರಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಜಂಬೂಸವಾರಿ ಸಾಗುವಾಗ ಯಾವುದೇ ತೊಂದರೆ ಆಗದಂತೆ ತಡೆಯಲು ಒಣಗಿರುವ ರಂಬೆಗಳನ್ನು ತೆಗೆದು ಹಾಕುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳಕ್ಕೆ ಬಂದರಷ್ಟೇ ಅಲ್ಲಿರುವ ಸಮಸ್ಯೆ ಗೊತ್ತಾಗಲಿದೆ ಎಂಬ ಕಾರಣಕ್ಕೆ ನಾಲ್ಕು ಕಿ.ಮೀ ದೂರ ನಡಿಗೆ ಕೈಗೊಂಡಿರುವುದಾಗಿ ತಿಳಿಸಿದರು.
ಜಂಬೂ ಸವಾರಿ ಮೆರವಣಿಗೆ ಸಾಗುವ ದಾರಿಯಲ್ಲಿ ಪ್ರತಿ ನ್ಯೂನತೆಯನ್ನು ಗಮನಿಸುತ್ತಾ ಸಾಗಿದ ಸಚಿವರು ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.