ಭೂಕುಸಿತ ಉಂಟಾಗಿದ್ದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಸಚಿವ ವಿ.ಸೋಮಣ್ಣ ಭೇಟಿ
ಮಡಿಕೇರಿ, ಆಗಸ್ಟ್ 7: ಕೊಡಗು ಜಿಲ್ಲೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಉಂಟಾಗಿರುವ ಭೂಕುಸಿತ ಪ್ರದೇಶಕ್ಕೆ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ತ್ರಿವೇಣಿ ಸಂಗಮ ಪ್ರದೇಶವು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಭಾಗಮಂಡಲದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ತಲಕಾವೇರಿಯ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಬೋಟ್ ಮುಖಾಂತರ ಖುದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಭಾಗಮಂಡಲದ ಮತ್ತೊಂದು ಬದಿ ತಲುಪಿ ಬಳಿಕ ರಸ್ತೆ ಮಾರ್ಗವಾಗಿ ತಲಕಾವೇರಿಗೆ ತೆರಳಿದರು.
ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಲಕಾವೇರಿ ಭೂಕುಸಿತ ಪ್ರದೇಶ ವೀಕ್ಷಣೆ ನಂತರ ಭಾಗಮಂಡಲದಲ್ಲಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಜತೆ ಮಾತನಾಡಿದರು.
ಸೇಫ್ ಆಗಿದ್ದ ಕುಶಾಲನಗರದಲ್ಲೂ ನೆರೆ ಉಂಟಾಗಿದ್ದು ಹೇಗೆ?
ಬಳಿಕ ಮಾತನಾಡಿದ ಸಚಿವ ಸೋಮಣ್ಣ, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರ ಮನೆ ಕುಸಿತವಾದ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಚಿತ್ರಣವನ್ನು ಕಂಡು ನಿಜಕ್ಕೂ ಆಘಾತವಾಯಿತು ಎಂದು ಸಚಿವರು ಹೇಳಿದರು.
ಭಾಗಮಂಡಲ-ತಲಕಾವೇರಿ ರಸ್ತೆ ನಾಳೆಯೊಳಗೆ ಸಂಚಾರಕ್ಕೆ ಮುಕ್ತ
ತಲಕಾವೇರಿ ಭಾಗದಲ್ಲಿ ಹೆಚ್ಚಿನ ಮಳೆ ಆಗುತ್ತಿದ್ದರಿಂದ ಎನ್.ಡಿ.ಆರ್.ಎಫ್ ತಂಡದ ವತಿಯಿಂದ ರಕ್ಷಣಾ ಕಾರ್ಯ ಮಾಡಲಾಗಿಲ್ಲ.
ನಾಳೆ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ. ಭಾಗಮಂಡಲ-ತಲಕಾವೇರಿ ರಸ್ತೆ ನಾಳೆಯೊಳಗೆ ಸಂಚಾರಕ್ಕೆ ಮುಕ್ತ ಆಗಲಿದೆ. ನಾಳೆ ಬೆಳಿಗ್ಗೆ ಎನ್.ಡಿ.ಆರ್.ಎಫ್ ಕಾರ್ಯಾಚರಣೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಅಯ್ಯಪ್ಪ ಬೆಟ್ಟ ಸೇರಿದಂತೆ ಇತರ ಅಪಾಯಕಾರಿ ಸ್ಥಳದಿಂದ ಅಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅರ್ಚಕರ ಮನೆಯಲ್ಲಿದ್ದ ೪೦ ಕ್ಕೂ ಹೆಚ್ಚಿನ ಹಸುಗಳು ಕೊಚ್ಚಿಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಧಾನ ಅರ್ಚಕರ ಜೊತೆಗೆ ಇನ್ನೂ ೪ ಜನ ಇದ್ದರು ಎಂಬ ಮಾಹಿತಿ ಇದೆ ಎಂದರು.
ಜಿಲ್ಲೆಯ ಜನರು ಹೆದರುವ ಅಗತ್ಯವಿಲ್ಲ
ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ತಂಡ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿವೆ. ಜಿಲ್ಲೆಯ ಜನರು ಹೆದರುವ ಅಗತ್ಯವಿಲ್ಲ, ಎಚ್ಚರಿಕೆಯಿಂದಿರಿ ಎಂದು ಸಚಿವ ಸೋಮಣ್ಣ ಸಲಹೆ ನೀಡಿದರು.
ಮಳೆಗೆ ಜರಿದ ಬ್ರಹ್ಮಗಿರಿ ಬೆಟ್ಟ; ಅರ್ಚಕ ನಾರಾಯಣಾಚಾರ್ ಕುಟುಂಬಕ್ಕೆ ಶೋಧ
ಪ್ರಧಾನ ಅರ್ಚಕರು ಅಧಿಕಾರಿಗಳ ಮಾತನ್ನು ಕೇಳಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ, ಕಳೆದ ಬಾರಿ ತೋರಾದಲ್ಲಿ ಆದಂತೆಯೇ ಇಲ್ಲಿಯೂ ಅನಾಹುತ ಆಗಿದೆ. ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಜನರನ್ನು ಸುರಕ್ಷಿತವಾಗಿ ಇರಿಸಲಾಗಿದೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ಕೊರೊನಾ ಪರೀಕ್ಷೆ ನಡೆಸಿ ನೆಗಟಿವ್ ವರದಿ ಬಂದವರನ್ನು ಪರಿಹಾರ ಕೇಂದ್ರದಲ್ಲಿ ಇರಿಸುತ್ತೇವೆ ಎಂದು ತಿಳಿಸಿದರು.
ಜನರ ಹಿತ ಕಾಪಾಡಲು ಸರ್ಕಾರ ಬದ್ಧ
ಕೊರೊನಾ ಪಾಸಿಟಿವ್ ಬಂದರೆ ನೇರವಾಗಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಣ ಮುಖ್ಯ ಅಲ್ಲ, ಜನರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ವಸತಿ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಸಂಸದರಾದ ಪ್ರತಾಪ್ ಸಿಂಹ, ಜಿ.ಪಂ ಅಧ್ಯಕ್ಷರಾದ ಬಿ.ಎ ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಇತರರು ಇದ್ದರು.