ಕೊರೊನಾ ವಿರುದ್ಧ ರಾಮಬಾಣ ಬಿಡೋಣ: ಸಚಿವ ಸೋಮಣ್ಣ
ಮೈಸೂರು, ಏಪ್ರಿಲ್ 02: ಶ್ರೀರಾಮ ನವಮಿ ಅಂಗವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಕೊರೊನಾ ಸೋಂಕಿಗೆ ರಾಮಬಾಣ ಬಿಡುವ ಮೂಲಕ ಶ್ರೀರಾಮನ ಜಪಿಸೋಣ, ಕೊರೊನ ಓಡಿಸೋಣ ಎಂಬ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿದಿನ ನಿರ್ಗತಿಕರಿಗೆ ಆಹಾರ ಒದಗಿಸುತ್ತಿರುವ ಕಲ್ಯಾಣ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ""ಭಾರತದಲ್ಲಿ ಕೋಟ್ಯಂತರ ಹಿಂದೂಗಳ ಆಚರಣೆ ಶ್ರೀರಾಮನವಮಿ ಆಗಿದ್ದು, ಇಂದು ಕೊರೊನಾ ಭೀತಿಯಿಂದಾಗಿ ನಾವೆಲ್ಲರೂ ಮನೆಯಲ್ಲಿಯೇ ಕುಟುಂಬ ಸಮೇತ ಆಚರಿಸಿ ಕೊರೊನಾ ಮುಕ್ತ ಮೈಸೂರಿಗಾಗಿ ಪ್ರಾರ್ಥಿಸೋಣವೆಂದರು.''
""ಪಾಶ್ಚಾತ್ಯ ಸಂಪ್ರದಾಯ, ಹೊರದೇಶದ ವ್ಯಾಮೋಹವಿಲ್ಲದಿದ್ದರೆ ಕೊರೊನಾವೆಂಬ ಯಾವ ರೋಗವು ಭಾರತದತ್ತ ಬರುತ್ತಿರಲಿಲ್ಲ. ಈಗಾಗಲೇ ಮೈಸೂರಿನಲ್ಲಿ ಮನೆ ಬಾಗಿಲಿಗೆ ತುರ್ತು ಅಗತ್ಯ ಸೇವೆಗಳಾದ ದಿನಸಿ, ಹಾಲು, ತರಕಾರಿ, ಹಣ್ಣು, ಹೂವು, ಸೊಪ್ಪು, ಮೆಡಿಕಲ್ ವ್ಯವಸ್ಥೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಒದಗಿಸುವ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಹಿರಿಯ ನಾಗರೀಕರು ಮತ್ತು ಸಣ್ಣಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಬೇಕೆಂದು'' ಮನವಿ ಮಾಡಿದರು.
ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ, ""ಕೊರೊನಾ ಸೋಂಕು ತಡೆಗಟ್ಟಲು ಭಾರತ ಲಾಕ್ ಡೌನ್ ಆದೇಶವು ದೇಶದ ಕಟ್ಟ ಕಡೆಯ ಭಾರತೀಯನನ್ನೂ ಕಾಪಾಡುವುದಾಗಿದೆ. 4 ನೇ ಹಂತದಲ್ಲಿ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಬೇಕಾದರೆ ಪ್ರತಿಯೊಬ್ಬ ನಾಗರೀಕರೂ ಮನೆಯಲ್ಲೇ ಇರಬೇಕು ಎಂದು ತಿಳಿಸಿದರು.
ಚೀನಾ ಉತ್ಪನ್ನ, ಪದಾರ್ಥಗಳನ್ನು ಭಾರತದಿಂದ ನಿರ್ಮೂಲನೆ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಮೇಕ್ ಇನ್ ಇಂಡಿಯಾ ಮುಂದಿನ ದಿನದಲ್ಲಿ ಪ್ರೇರೆಪಿಸಲು, ನಾವೆಲ್ಲರೂ ಸ್ವದೇಶಿ ಉತ್ಪನ್ನವನ್ನು ಮಾತ್ರ ಖರೀದಿಸಲು ಮುಂದಾದರೆ ದೇಶದ ಭವಿಷ್ಯ ಪ್ರಜ್ವಲವಾಗಿರುತ್ತದೆ ಎಂದರು.