ಯಾರು ದೆಹಲಿಗೆ ಹೋಗಿದ್ದಾರೋ ಅವರನ್ನೇ ಕೇಳಿ: ಸಚಿವ ಸೋಮಣ್ಣ ಗರಂ
ಮೈಸೂರು, ಜೂನ್ 12: ಯಾರು ದೆಹಲಿಗೆ ಹೋಗಿದ್ದಾರೆ, ಹೋಗಿಲ್ಲ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಕಾರಣಕ್ಕೆ ದೆಹಲಿಗೆ ಹೋಗುತ್ತಿದ್ದಾರೆ ಎಂದು ಆ ಪುಣ್ಯಾತ್ಮರನ್ನೇ ಈ ಬಗ್ಗೆ ಕೇಳಿ ಎಂದು ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ, ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಕೆಲಕಾಲ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ""ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರಿಗೂ ಒಂದೊಂದು ಕಾಯಿಲೆ ಇದೆ. ನನಗೆ ಕೆಲಸ ಮಾಡುವ ಕಾಯಿಲೆ. ಅವರಿಗೆ ದೆಹಲಿಗೆ ಹೋಗುವ ಕಾಯಿಲೆ. ಆ ಕಾಯಿಲೆಯ ಮದ್ದು ಗೊತ್ತಿಲ್ಲ'' ಎಂದು ಲೇವಡಿ ಮಾಡಿದರು.
ರಾಜಕೀಯ ತಿರುವು ಪಡೆದ ಮೈಸೂರಿನ ಭೂ ಒತ್ತುವರಿ ವಿವಾದ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಯಾರು ದೆಹಲಿಗೆ ಹೋಗಿದ್ದಾರೆ, ಹೋಗಿಲ್ಲ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ನನ್ನ ಬುದ್ದಿವಂತಿಕೆಯನ್ನು ಕೊರೊನಾ ನಿಯಂತ್ರಣಕ್ಕೆ ಬಳಸುತ್ತಿದ್ದೇನೆ. ಕೆಲವರು ಆ ಬುದ್ದಿವಂತಿಕೆಯನ್ನು ಬೇರೆಯದಕ್ಕೆ ಬಳಸುತ್ತಿದ್ದಾರೆ ಎಂದು ಟೀಕಿಸಿದರು.
"ಇದು ಕೊರೊನಾ ಸೋಂಕು ನಿಯಂತ್ರಣ ಮಾಡಬೇಕಾದ ಸಮಯ. ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಸರಿಯಲ್ಲ. ಸಿಎಂ ಯಡಿಯೂರಪ್ಪ ಪ್ರತಿ ಜಿಲ್ಲೆ ಜಿಲ್ಲೆಗೆ ತಿರುಗುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಹೈಕಮಾಂಡ್ ಇದಕ್ಕೆಲ್ಲಾ ಒಂದು ಅಂಕಿತ ಹಾಕಬೇಕಿದೆ'' ಎಂದು ತಿಳಿಸಿದರು.
10 ಲಕ್ಷ ಮನೆ ನಿರ್ಮಾಣದ ಗುರಿ
Recommended Video
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯಿದೆ. 2023ರೊಳಗೆ 10 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 6 ಲಕ್ಷ, ಪಟ್ಟಣ ಪ್ರದೇಶದಲ್ಲಿ 3 ಲಕ್ಷ ಮತ್ತು ಬೆಂಗಳೂರಿನಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ 2.71 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಮುಗಿದಿದೆ. ಬಾಕಿ ಉಳಿದಿರುವ ಮನೆಗಳನ್ನು ನಿಗದಿತ ಅವಧಿಯೊಳಗೆ ನಿರ್ಮಿಸಿ ಅರ್ಹರಿಗೆ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವರಾದ ವಿ.ಸೋಮಣ್ಣ ಹೇಳಿದರು.