"ಸಿದ್ದರಾಮಯ್ಯ ನಮ್ಮನ್ನೇನೂ ಬೆಳೆಸಲಿಲ್ಲ, ಅವರೇ ವಲಸಿಗರು''
ಮೈಸೂರು, ನವೆಂಬರ್ 1: ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮನ್ನೇನೂ ಬೆಳೆಸಲಿಲ್ಲ, ನಾವು ಮೂಲ ಕಾಂಗ್ರೆಸ್ಸಿಗರಾಗಿದ್ದು, ಸಿದ್ದರಾಮಯ್ಯ ಆಮೇಲೆ ಕಾಂಗ್ರೆಸ್ಗೆ ಬಂದಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮನ್ನು ಬೆಳೆಸಿದ್ದೇನೆ ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ನಾವು ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡು ಪಕ್ಷ ಬಿಡಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಆದ ಅವಮಾನ, ಅನಾಹುತಗಳಿಂದ ಪಕ್ಷ ಬಿಟ್ಟೆವು ಎಂದು ತಿಳಿಸಿದರು.
ಕುತೂಹಲ ಮೂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ದೂರವಾಣಿ ಕರೆ!
ಸಿದ್ದರಾಮಯ್ಯ ಅವರು ನಮಗಾದ ನೋವನ್ನು ಸರಿಪಡಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ ಸೋಮಶೇಖರ್, ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲ್ಲುತ್ತಾರೆ, ಗೆದ್ದರೆ ಸಚಿವರಾಗುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಮುನಿರತ್ನ ಸೋಲುವ ಪ್ರಶ್ನೆಯೇ ಇಲ್ಲ, ಅದರಂತೆ ಅವರು ಸಚಿವ ಸ್ಥಾನ ಪಡೆಯುತ್ತಾರೆ ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಮುನಿರತ್ನ ಕ್ಷೇತ್ರದ ಜನರಿಗಾಗಿ ಹೆಚ್ಚಿನ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು. ಬೆಂಗಳೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೆಚ್ಚಿನ ಹಣ ಕೊಟ್ಟಿದ್ದೇನೆ ಎಂಬುದು ಸರಿಯಲ್ಲ.
ಬೆಂಗಳೂರಿನಲ್ಲಿ ಹೆಚ್ಚಿನ ಆದಾಯ ಬರುತ್ತದೆ. ಅದರಂತೆ 27 ವಿಧಾನಸಭಾ ಕ್ಷೇತ್ರಕ್ಕೂ ಹಂಚಿಕೆಯಾಗುತ್ತದೆ. ಬೆಂಗಳೂರಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಮನೆಯಿಂದ ಹಣ ತಂದುಕೊಟ್ಟಿಲ್ಲ ಎಂದು ಸಚಿವ ಸೋಮಶೇಖರ್ ಟಾಂಗ್ ಕೊಟ್ಟರು.