ಸೈಯದ್ ಇಸಾಕ್ ಅವರಿಗೆ ಧರ್ಮಗ್ರಂಥಗಳ ಪುಸ್ತಕ ನೀಡಿದ ಸಚಿವ ಎಸ್ಟಿಎಸ್
ಮೈಸೂರು, ಏಪ್ರಿಲ್ 14: ಮೈಸೂರಿನ ರಾಜೀವ್ ನಗರದಲ್ಲಿ ಗ್ರಂಥಾಲಯ ನಡೆಸುತ್ತಿದ್ದ ಸೈಯದ್ ಇಸಾಕ್ ಅವರಿಗೆ ಗ್ರಂಥಾಲಯ ಮರುಸ್ಥಾಪನೆಗಾಗಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ವೈಯಕ್ತಿಕವಾಗಿ 25 ಸಾವಿರ ಧನಸಹಾಯ ಮಾಡಿದರು.
ಧನಸಹಾಯವಲ್ಲದೆ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ಮತ್ತು ಭಾರತೀಯ ಜನತಾ ಪಕ್ಷದ ಕಚೇರಿಗೆ ರಾಮಾಯಣ, ಮಹಾಭಾರತ, ಬೈಬಲ್ ಮತ್ತು ಕುರಾನ್ ಪುಸ್ತಕಗಳನ್ನು ನೀಡಿದರು.
ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಕ್ಕೆ ಉಸ್ತುವಾರಿ ಸಚಿವರಿಂದಲೇ ಆಕ್ಷೇಪ!
ಆರ್ಥಿಕ ನೆರವು ಮತ್ತು ಗ್ರಂಥಗಳನ್ನು ಸ್ವೀಕರಿಸಿದ ಸೈಯದ್ ಇಸಾಕ್ ಅವರು ಮಾತನಾಡಿ, ಒಂದು ಗ್ರಂಥಾಲಯವು ನೂರು ದೇವಾಲಯಗಳಿಗೆ ಸಮವಾಗಿದೆ. ಮಸೀದಿ, ದೇವಾಲಯ ಹಾಗೂ ಚರ್ಚ್ ಗಳು ನಿರ್ಮಾಣವಾದರೆ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಆದರೆ ಗ್ರಂಥಾಲಯ ನಿರ್ಮಾಣವಾದರೆ ಹಲವಾರು ವಿದ್ಯಾವಂತರು ಹುಟ್ಟಿಕೊಳ್ಳುತ್ತಾರೆ ಎಂದರು.
ನೂರು ಜನರ ಸ್ನೇಹ ಬೆಳೆಸಿದರೂ ಒಂದು ದಿನ ಮೋಸ ಮಾಡುತ್ತಾರೆ. ಆದರೆ ಪುಸ್ತಕಗಳು ಎಂದಿಗೂ ಯಾರಿಗೂ ಮೋಸ ಮಾಡುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು.