ಕಾಲೇಜು ಪುನರಾರಂಭ; ವಿದ್ಯಾರ್ಥಿಗಳಿಗೆ ಸಚಿವ ಸೋಮಶೇಖರ್ ಸಲಹೆ
ಮೈಸೂರು, ನವೆಂಬರ್ 17: ರಾಜ್ಯದಲ್ಲಿ ಕೋವಿಡ್ ಲಾಕ್ ಡೌನ್ ನಿಂದಾಗಿ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಕಾಲೇಜುಗಳು ಮಂಗಳವಾರದಿಂದ ತೆರೆದಿದ್ದು ವಿದ್ಯಾರ್ಥಿಗಳು ಸರ್ಕಾರದ ಮಾರ್ಗಸೂಚಿ ಅನುಸರಿಸಿ ತರಗತಿಗೆ ಹಾಜರಾಗುತ್ತಿರುವ ದೃಶ್ಯ ಕಂಡುಬಂದಿತು.
ತರಗತಿ ಕೊಠಡಿಯ ಬೋಧನೆಯ ಜತೆಗೆ ಆನ್ ಲೈನ್ ಹಾಗೂ ಆಫ್ ಲೈನ್ ಬೋಧನೆಗಳು ನಿರಂತರವಾಗಿರಲಿವೆ. ಸುರಕ್ಷತಾ ಕ್ರಮವಾಗಿ ಕಾಲೇಜು ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಕಾಲೇಜಿಗೆ ಬರಬೇಕಿದೆ. ಅಲ್ಲದೆ ಪೋಷಕರ ಒಪ್ಪಿಗೆ ಪತ್ರವನ್ನು ತರಬೇಕಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿ ನಡೆಸಲು ಸರ್ಕಾರ ಸೂಚಿಸಿದೆ.
ರಾಜ್ಯಾದ್ಯಂತ ಕಾಲೇಜುಗಳು ಓಪನ್; ರಾಮನಗರದಲ್ಲಿ ಕಾಲೇಜಿನತ್ತ ಮುಖ ಮಾಡದ ವಿದ್ಯಾರ್ಥಿಗಳು
ಏತನ್ಮಧ್ಯೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ವಿದ್ಯಾರ್ಥಿಗಳೇ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದ್ದಾರೆ. ಶೈಕ್ಷಣಿಕ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಅತಿ ಅವಶ್ಯಕ. ಆದರೆ ಕೊರೊನಾ ಕಾರಣದಿಂದ ಈ ಕಠಿಣ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಷ್ಟೇ ಅಗತ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಲೇಬೇಕು. ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇದರ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದ್ದಾರೆ.
ಕಾಲೇಜು ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಉತ್ಸುಕತೆ ಕಂಡು ಬಂತಾದರೂ ಕೊರೊನಾದಿಂದಾಗಿ ಬಹಳ ದಿನಗಳ ನಂತರ ಭೇಟಿಯಾದ ಸ್ನೇಹಿತರನ್ನು ಕೈಕುಲುಕಿ, ಪ್ರೀತಿಯಿಂದ ಆಲಂಗಿಸಿ ಮಾತನಾಡಿಸುವಂತಿಲ್ಲವೆಂಬ ಬೇಸರ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳ ಕಾಲೇಜು ಆವರಣ ಪ್ರವೇಶದ್ವಾರದಲ್ಲೇ ಅವರ ಕೈಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಿರುವುದು.