ಕೊರೊನಾದಿಂದ ಯಾರೂ ಹಸಿವಿನಿಂದ ಇರಬಾರದು: ಸಚಿವ ಸೋಮಣ್ಣ
ಮೈಸೂರು, ಏಪ್ರಿಲ್ 01: ಲಾಕ್ಡೌನ್ ಹಿನ್ನೆಲೆಯಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು, ಅಗತ್ಯವಿರುವ ಎಲ್ಲರಿಗೂ ಕರ್ನಾಟಕ ಸರ್ಕಾರದ ವತಿಯಿಂದ ಊಟೋಪಚಾರ ವ್ಯವಸ್ಥೆಯಾಗುತ್ತದೆ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ನಂಜನಗೂಡಿನ ಕಾರ್ಖಾನೆಯೊಂದರಲ್ಲೇ ಹೆಚ್ಚಿನ ಕೋವಿಡ್-19 ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ, ಕಾರ್ಖಾನೆ ಆವರಣ ಹಾಗೂ ನಂಜನಗೂಡಿನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕಡಕೊಳದಲ್ಲಿರುವ ಕೆಇಬಿ ಇಂಜಿನಿಯರ್ಸ್ ಸಭಾಂಗಣದಲ್ಲಿ ಅವರು ಅಧಿಕಾರಿಗಳ ಸಭೆ ನಡೆಸಿದರು.
ಇದೊಂದು ರಾಷ್ಟ್ರೀಯ ವಿಕೋಪವಾಘಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸಮಾಡಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕ್ವಾರಂಟೈನ್ನಲ್ಲಿರುವವರು ಹೊರಗಡೆ ಬರದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು.
ಕ್ವಾರಂಟೈನ್ ನಲ್ಲಿರುವವರ ಮನೆಗಳಿಗೆ ಪೊಲೀಸರು ಪ್ರತಿದಿನ ಹೋಗಿ ಬರುತ್ತಾರೆ. ಅವರೊಟ್ಟಿಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸಹ ಹೋಗಿ ಬರಬೇಕು. ನರ್ಸ್ ಗಳನ್ನು ಈ ಕೆಲಸಕ್ಕೆ ನಿಯೋಜಿಸಬಾರದು. ನರ್ಸ್ ಗಳನ್ನು ಆಸ್ಪತ್ರೆ ಕೆಲಸಗಳಿಗೆ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ 1,485 ನೌಕರರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಈ ಪೈಕಿ 761 ನಂಜನಗೂಡಿನವರು, 697 ನೌಕರರು ಇತರೆ ತಾಲ್ಲೂಕಿನವರು ಎಂದು ತಹಶೀಲ್ದಾರ್ ಮಹೇಶ್ ಮಾಹಿತಿ ನೀಡಿದರು. ನಂಜನಗೂಡು ಹಾಗೂ ಸುತ್ತಮುತ್ತ ಸ್ಯಾನಿಟೈಜರ್ ಸ್ಪ್ರೇ ಮಾಡಲಾಗಿದೆ. ಕೆಲವರನ್ನು ಖಾಸಗಿ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಹೋಮ್ ಕ್ವಾರಂಟೈನ್ ನಲ್ಲಿರುವ ಯಾರೊಬ್ಬರೂ ಹೊರಗೆ ಬಾರದಂತೆ ಪೊಲೀಸರು ಖಾತರಿ ಪಡಿಸಿಕೊಳ್ಳುತ್ತಾರೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹೇಳಿದರು.
ಸಭೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಹರ್ಷವರ್ಧನ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.