“ಅತೃಪ್ತ ಪ್ರೇತ ತೃಪ್ತಿಪಡಿಸಲು ಯಡಿಯೂರಪ್ಪ ಯತ್ನ”; ಸಾರಾ ಮಹೇಶ್ ವ್ಯಂಗ್ಯ
ಮೈಸೂರು, ಆಗಸ್ಟ್ 21: "ಮೈಸೂರಿನ ಅತೃಪ್ತ ಪ್ರೇತವೊಂದನ್ನು ಸಮಾಧಾನಪಡಿಸಲು ಸಿಎಂ ಯಡಿಯೂರಪ್ಪನವರು ಬಗೆ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಮಾಜಿ ಸಚಿವ ಸಾ.ರಾ.ಮಹೇಶ್, ವಿಶ್ವನಾಥ್ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.
"ಎಚ್ಡಿಕೆಯನ್ನು ಹಳೆ ಮೈಸೂರಿನ ಸಿಎಂ ಎಂದ ನಿಮ್ಮನ್ನು ಏನನ್ನೋಣ?"
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಕೆಲವು ದಿನಗಳಿಂದ ಅತೃಪ್ತ ಪ್ರೇತವನ್ನು ಸಮಾಧಾನಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಸರ್ಕಾರದಲ್ಲಿ ಅಸಮಾಧಾನ ಎದ್ದಿದ್ದು, ಮೈಸೂರಿನಲ್ಲಿಯು ಹಬ್ಬಿದೆ. ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ. ಅಪವಿತ್ರ ಸರಕಾರದ ಅರ್ಧ ಸಚಿವ ಸಂಪುಟವಂತೂ ರಚನೆಯಾಗಿದೆ. ಮೈಸೂರು ಭಾಗಕ್ಕೆ ಒಂದೇ ಒಂದೂ ಸಚಿವ ಸ್ಥಾನ ಕೊಟ್ಟಿಲ್ಲ. ಈ ಭಾಗದಲ್ಲಿರುವ ಅತೃಪ್ತ ಪ್ರೇತಕ್ಕೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿರಬಹುದು" ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
"ನಾಡಹಬ್ಬ ದಸರೆಗೆ ದಿನಗಣನೆ ಆರಂಭವಾಗಿದೆ. ಆದರೂ ಅತೃಪ್ತ ಪ್ರೇತಕ್ಕೆ ಅವಕಾಶ ಮಾಡಿಕೊಡಲು ಸಿಎಂ ಈ ಪ್ರಯತ್ನ ನಡೆಸಿದ್ದಾರೆ. ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ರೀತಿ ಆಪರೇಷನ್ ಕಮಲಕ್ಕೆ ಬಳಕೆಯಾದ ಹಣದ ಬಗ್ಗೆಯೂ ತನಿಖೆ ಆಗಲಿ. ಫೋನ್ ಕದ್ದಾಲಿಕೆ ಪ್ರಕರಣದಿಂದ ಜೆಡಿಎಸ್ ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ" ಎಂದು ಕಿಡಿಕಾರಿದ್ದಾರೆ.
"ಕೊಡಗು ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಇದೆ. ಬೇರೆಯವರು ಬಂದು ಅದನ್ನು ಹೇಗೆ ನಿರ್ವಹಿಸುತ್ತಾರೆ? ಅಪ್ಪಚ್ಚು ರಂಜನ್ ಅಥವಾ ಕೆ.ಜಿ.ಬೋಪಯ್ಯ ಪೈಕಿ ಒಬ್ಬರನ್ನಾದರೂ ಸಚಿವರನ್ನಾಗಿ ಮಾಡಿಕೊಳ್ಳಬಹುದಿತ್ತು. ಪ್ರವಾಹ ಸಂದರ್ಭದಲ್ಲಿ 135 ಕಿ.ಮೀ. ದೂರ ಪ್ರಯಾಣ ಮಾಡಿ ಸಚಿವರನ್ನು ಭೇಟಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.