ಮೈಸೂರು ಮೃಗಾಲಯಕ್ಕೆ ಮತ್ತೆ 25.14 ಲಕ್ಷ ರೂ. ಚೆಕ್ ಹಸ್ತಾಂತರ
ಮೈಸೂರು, ಮೇ 30: ಮೈಸೂರಿನ ಜಯಚಾಮರಾಜೆಂದ್ರ ಮೃಗಾಲಯಕ್ಕೆ ಮತ್ತೆ 25.14 ಲಕ್ಷ ರೂ. ಚೆಕ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹಸ್ತಾಂತರಿಸಿದರು.
ಮೃಗಾಲಯಕ್ಕೆ ಒಟ್ಟಾರೆ ಇನ್ಫೋಸಿಸ್ ನ 22 ಲಕ್ಷ ರುಪಾಯಿ ಸೇರಿ ಒಟ್ಟು 2.85 ಕೋಟಿ ರೂ. ದೇಣಿಗೆ ಸಂಗ್ರಹಿಸಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕೊಟ್ಟಿದ್ದಾರೆ. ಕಳೆದ ಬಾರಿಯೂ 2.38 ಕೋಟಿ ರುಪಾಯಿ ಚೆಕ್ ಹಸ್ತಾಂತರಿಸಲಾಗಿತ್ತು.
ಮೈಸೂರು ಪ್ರವಾಸಿ ತಾಣಗಳ ಪುನರಾರಂಭ: ಉಸ್ತುವಾರಿ ಸಚಿವರ ಮಾತು
25 ಲಕ್ಷದ 14 ಸಾವಿರದ 500 ರುಪಾಯಿ ಚೆಕ್ ನೀಡಿ ಮಾತನಾಡಿದ ಸಚಿವ ಸೋಮಶೇಖರ್, ಮೃಗಾಲಯವನ್ನು ಪ್ರಾರಂಭಿಸಲು ನಾನು ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದರು.
ಮೃಗಾಲಯ ಪ್ರಾರಂಭದ ಬಗ್ಗೆ ರಾಜ್ಯ ಸರ್ಕಾರದ ಜೊತೆಯೂ ಚರ್ಚೆ ಮಾಡಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಆದೇಶ ಹೊರಬೀಳಲಿದೆ. ಅರಣ್ಯ ಸಚಿವರೂ ಪ್ರಾರಂಭಿಸುವ ಪರವಾಗಿದ್ದಾರೆ. ಒಮ್ಮೆ ಆದೇಶ ಬಂದ ಮೇಲೆ ಇಲ್ಲಿನ ಶಾಸಕರಾದ ರಾಮದಾಸ್ ಸೇರಿದಂತೆ ಹಲವು ಪ್ರಮುಖರು ಈ ಬಗ್ಗೆ ಮತ್ತೊಮ್ಮೆ ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಜಯಚಾಮರಾಜೇಂದ್ರ ಮೃಗಲಾಯಕ್ಕೆ ದೇಣಿಗೆ ನೀಡಲು ಅಕ್ಕ ಸಂಸ್ಥೆಯಿಂದ 27 ಲಕ್ಷ ರೂ. ಸಂಗ್ರಹವಾಗಿದೆ. ಅವರೊಂದಿಗೆ ಇಂದು ರಾತ್ರಿ 8 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದೇನೆ. ಇದಕ್ಕಾಗಿ ಅಲ್ಲಿಂದ ವ್ಯವಸ್ಥೆ ಮಾಡಿದ್ದಾಗಿ ಹೇಳಿದ್ದಾರೆ. ಮೃಗಾಲಯ ಮತ್ತು ಪ್ರಾಣಿಗಳಿಗೆ ನನ್ನಿಂದಾಗುವ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.