ರಮೇಶ್ ಜಾರಕಿಹೊಳಿಯ ಆ ಹೇಳಿಕೆ ಅಷ್ಟು ಪರಿಣಾಮ ಬೀರಿತಾ?
ಮೈಸೂರು, ಮೇ 31: ರಾಜ್ಯದ ಆಡಳಿತ ಪಕ್ಷ ಬಿಜೆಪಿಯಲ್ಲಿ ಎದ್ದಿದ್ದ ರಾಜಕೀಯ ಭಿನ್ನಾಭಿಪ್ರಾಯ ಮೇಲ್ನೋಟಕ್ಕೆ ತಣ್ಣಗೆ ಆದಂತೆ ಭಾಸವಾಗುತ್ತಿದೆ. ಇದಕ್ಕೆ ಕಾರಣ ಬಿಜೆಪಿ ಹೈಕಮಾಂಡ್ ನೀಡಿದ ಖಡಕ್ ವಾರ್ನಿಂಗ್ ಎಂಬ ಮಾತಿದೆಯಾದರೂ ಸಚಿವ ರಮೇಶ್ ಜಾರಕಿಹೊಳಿ ತೇಲಿ ಬಿಟ್ಟ ಮಾತಿನ ಬಾಣ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದನ್ನು ಈ ಸಂದರ್ಭದಲ್ಲಿ ತಳ್ಳಿ ಹಾಕುವಂತಿಲ್ಲ.
Recommended Video
ಇವತ್ತು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ ಎನ್ನುವುದಾದರೆ ಅದಕ್ಕೆ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಅವರು ಕಾರಣಕರ್ತರು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇಂತಹ ಜಾರಕಿಹೊಳಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿಯೇ ಬಿಟ್ಟ ಮಾತಿನ ಬಾಣ ಸ್ವಪಕ್ಷ ಮತ್ತು ವಿರೋಧ ಪಕ್ಷಗಳು ಬೆಚ್ಚಿ ಬೀಳುವಂತೆ ಮಾಡಿದ್ದಂತು ಸತ್ಯ.
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ
ರಾಜಕೀಯ ಅಂದ್ರೆ ಕಾಲಕ್ಕೆ ತಕ್ಕಂತೆ ತಂತ್ರಗಳನ್ನು ರೂಪಿಸಿ ಎದುರಾಳಿಗಳನ್ನು ಸದೆಬಡಿದು ಅಧಿಕಾರ ಪಡೆಯೋದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ರಾಜಕೀಯದಲ್ಲಿ ಯಾರು ಶತ್ರು, ಯಾರು ಮಿತ್ರರು ಎನ್ನುವುದನ್ನು ಹೇಳುವುದು ತುಸು ಕಷ್ಟವೇ. ಏಕೆಂದರೆ ಅಧಿಕಾರಕ್ಕೆ ಯಾರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಬೇಕಾದಷ್ಟು ನಿದರ್ಶನಗಳು ನಮ್ಮ ನಿಮ್ಮ ಮುಂದಿವೆ.
ಸಿಎಂ ಭೇಟಿಯಾದ ರಮೇಶ ಜಾರಕಿಹೊಳಿ, ಆರ್ ಅಶೋಕ್: ಕುತೂಹಲಕ್ಕೆ ಎಡೆ
ಇಡೀ ಜಗತ್ತು, ದೇಶ, ರಾಜ್ಯ ಕೊರೊನಾದ ವಿರುದ್ಧ ಹೋರಾಡುತ್ತಾ ತಲೆ ಕೆಡಿಸಿಕೊಳ್ಳುತ್ತಿದ್ದರೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ವಿರುದ್ಧ ಸ್ವಪಕ್ಷೀಯರೇ ಭಿನ್ನಮತವನ್ನು ಸ್ಫೋಟಿಸಿದ್ದಾರೆ. ಜತೆಗೆ ಇಂತಹ ಕಠಿಣ ಸಂದರ್ಭದಲ್ಲಿ ತಮಗಿರುವ ಅಧಿಕಾರದ ದಾಹವನ್ನು ಹೊರ ಜಗತ್ತಿಗೆ ತೋರಿಸಿದ್ದು ನಿಜಕ್ಕೂ ಅಸಹನೀಯವೇ.
ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ
ಇಷ್ಟಕ್ಕೂ ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇವತ್ತಿಗೂ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿಕೊಳ್ಳದ ನಾಯಕರಿದ್ದಾರೆ. ಆದರೆ ಅವರು ಮೇಲ್ನೋಟಕ್ಕೆ ನಾವೆಲ್ಲರೂ ಒಟ್ಟಾಗಿದ್ದೇವೆ ಎನ್ನುತ್ತಲೇ ತಮ್ಮ ಅಸಮಾಧಾನವನ್ನು ಸಮಯ ಸಿಕ್ಕಾಗಲೆಲ್ಲ ಹೊರಹಾಕುತ್ತಲೇ ಇರುತ್ತಾರೆ. ಅದರಲ್ಲೂ ಆಪರೇಷನ್ ಕಮಲದ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಸಚಿವರಾದ ಬಳಿಕವಂತೂ ಕೆಲವರಿಗೆ ಸಹಿಸಿಕೊಳ್ಳಲಾಗದಷ್ಟು ಅಸಮಾಧಾನವಿದೆ. ಜತೆಗೆ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂಬ ನೋವು ಅವರೆಲ್ಲರನ್ನು ಕಾಡುತ್ತಲೇ ಇದೆ. ಅದು ಕೆಲವೊಮ್ಮೆ ಅಸಮಾಧಾನದ ಹೊಗೆಯಾಗಿ ಹೊರ ಬಂದು ಉಸಿರುಗಟ್ಟುವಂತೆ ಮಾಡುತ್ತದೆ.
ಭಿನ್ನಾಭಿಪ್ರಾಯದ ಕಿಡಿ ಹಚ್ಚಿದ ಶಾಸಕರು
ಬಹಳಷ್ಟು ರಾಜಕೀಯ ಮುಖಂಡರು ಕಾಲಕ್ಕೆ ತಕ್ಕಂತೆ ಭಿನ್ನಾಭಿಪ್ರಾಯದ ಕಿಡಿ ಹೊತ್ತಿಸುತ್ತಾ, ಬೇರೆ ಪಕ್ಷದತ್ತ ಮುಖಮಾಡುವ ಬೆದರಿಕೆಯೊಡ್ಡುತ್ತಾ ಅಧಿಕಾರ ಪಡೆದುಕೊಂಡಿದ್ದಾರೆ. ಆದರೆ ಅದು ಎಲ್ಲ ಕಾಲಕ್ಕೂ ಸಲ್ಲಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಇವತ್ತು ಬಿಜೆಪಿಯಲ್ಲಿರುವ ನಾಯಕರ ಪೈಕಿ ಉಮೇಶ್ ಕತ್ತಿ, ಬಸವನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಸೇರಿದಂತೆ ಒಂದಷ್ಟು ಶಾಸಕರು ಸಭೆ ನಡೆಸುವ ಮೂಲಕ ಭಿನ್ನಾಭಿಪ್ರಾಯವಿರುವ ಸೂಚನೆಯನ್ನು ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ಸಂದೇಶ ನೀಡಿದರು. ಇದು ಆಡಳಿತ ಪಕ್ಷದಲ್ಲಿ ಅಂದುಕೊಂಡಂತಹ ಯಾವುದೇ ಸಂಚಲನವನ್ನು ಸೃಷ್ಟಿಸಿದಂತೆ ಗೋಚರಿಸಿಲ್ಲ. ಬದಲಿಗೆ ವಿರೋಧ ಪಕ್ಷ, ಅದರಲ್ಲೂ ಕಾಂಗ್ರೆಸ್ ನಾಯಕರಿಗೆ ಒಂದಷ್ಟು ಜೀವ ಜಲ ನೀಡಿದಂತಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ: ಸಿದ್ಧರಾಮಯ್ಯ
ಬಿಸಿಮುಟ್ಟಿಸಿದ ಜಾರಕಿಹೊಳಿ ಹೇಳಿಕೆ
ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದರೆ ಅದರ ಲಾಭ ಪಡೆಯಲು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಒಂದಷ್ಟು ನಾಯಕರು ತುದಿಗಾಲಲ್ಲಿ ನಿಂತರು. ಒಂದು ಹೆಜ್ಜೆ ಮುಂದೆ ಹೋದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವವನ್ನು ಅವರ ಪಕ್ಷದ ನಾಯಕರೇ ಒಪ್ಪುತ್ತಿಲ್ಲ ಎನ್ನವುದಾದರೆ ಈ ಸರ್ಕಾರ ತೊಲಗಬೇಕೆಂದರು.
ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದಂತೆಯೇ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಹೈಕಮಾಂಡ್ ಒಪ್ಪಿದರೆ ಕಾಂಗ್ರೆಸ್ನಿಂದ ಐವರು ಶಾಸಕರನ್ನು ಕರೆತರುತ್ತೇನೆಂಬ ಹೇಳಿಕೆಯನ್ನು ತೇಲಿಬಿಟ್ಟರು. ಈ ಹೇಳಿಕೆ ಎರಡು ಪಕ್ಷದಲ್ಲಿ ಸಂಚಲನ ಮೂಡಿಸಿದ್ದಂತು ಸತ್ಯ. ಈಗಾಗಲೇ ರಮೇಶ್ ಜಾರಕಿ ಹೊಳಿ ಅಂತಹ ತಂತ್ರದಲ್ಲಿ ಯಶಸ್ವಿಯಾಗಿರುವುದರಿಂದ ಯಾರು ಕೂಡ ಅದನ್ನು ಹಗುರವಾಗಿ ಪರಿಗಣಿಸುವಂತಿರಲಿಲ್ಲ.
ಜಾರಕಿಹೊಳಿ ಸಾಮರ್ಥ್ಯ ಸಾಬೀತಾಯಿತಾ?
ಈ ಹೇಳಿಕೆ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಹಚ್ಚಿ ಭಿನ್ನಾಭಿಪ್ರಾಯದ ಹೊಗೆಯನ್ನು ಸೃಷ್ಟಿಸಿದ್ದ ನಾಯಕರಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಿತ್ತು. ನೀವು ಪಕ್ಷ ಬಿಟ್ಟು ಹೋದರೂ ಬೇರೆ ಪಕ್ಷದಿಂದ ಶಾಸಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಸಂದೇಶವನ್ನು ನೀಡಿದಂತಿತ್ತು. ಜತೆಗೆ ಕಾಂಗ್ರೆಸ್ ಪಕ್ಷದ ನಾಯಕರಿಗೂ ಪಕ್ಷದಲ್ಲಿರುವ ಶಾಸಕರನ್ನು ಕಳೆದುಕೊಳ್ಳುವ ಭಯವನ್ನುಂಟು ಮಾಡಿತ್ತು. ಹೀಗಾಗಿ ಯಾವುದೇ ರಾಜಕೀಯ ಬೆಳವಣಿಗೆ ನಡೆಯದೆ ತಣ್ಣಗಾಗಿತ್ತು. ರಾಜಕೀಯದಲ್ಲಿ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಅವರ ಸಾಮರ್ಥ್ಯವೇನು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.