"ಬಿಜೆಪಿ ಶಾಸಕರ ರಹಸ್ಯ ಮೀಟಿಂಗ್; ಮಾಧ್ಯಮಗಳ ತಪ್ಪು ಕಲ್ಪನೆ'
ಮೈಸೂರು, ಮೇ 29: ಕೆಲವು ಶಾಸಕರು ಒಂದು ಕಡೆ ಕುಳಿತು ಊಟ ಮಾಡಿದ್ದಾರೆ. ಅದನ್ನೇ ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ. ಸಭೆ ಸೇರಿದ ಮಾತ್ರಕ್ಕೆ ಏನೋ ಆಗಿಬಿಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
Recommended Video
ಬಿಜೆಪಿ ಶಾಸಕರ ರಹಸ್ಯ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಸುತ್ತೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕಾಫಿ ಕುಡಿಯಲು, ತಿಂಡಿ ತಿನ್ನಲು ಶಾಸಕರು ಒಂದು ಕಡೆ ಸೇರುವುದು ತಪ್ಪಲ್ಲ ಎಂದರು.
ಎಚ್ ವಿಶ್ವನಾಥ್ಗೆ ಕೈ ಕೊಟ್ಟರಾ ರಮೇಶ ಜಾರಕಿಹೊಳಿ?
ಕೊರೊನಾ ವೈರಸ್ ಕಾರಣದಿಂದ ಲಾಕ್ಡೌನ್ ಇದ್ದಿದ್ದರಿಂದ ಯಾರೂ ಪರಸ್ಪರ ಭೇಟಿಯಾಗಲು ಆಗಿರಲಿಲ್ಲ. ಬಹುದಿನಗಳ ನಂತರ ಎಲ್ಲರೂ ಕೂಡಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ ಅವರು, ಉಮೇಶ್ ಕತ್ತಿ ನನ್ನ ಸ್ನೇಹಿತ. ಆತ ಏನೇನೋ ಆಡ್ತಾನೆ, ಆದರೆ ಪಕ್ಷ ಬಿಡೋದಿಲ್ಲ ಎಂದರು.
ರಾಜ್ಯಸಭೆ, ವಿಧಾನ ಪರಿಷತ್ತು ಸದಸ್ಯತ್ವ ವಿಚಾರಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ನಮ್ಮ ಪಕ್ಷದ ಹೈಕಮಾಂಡ್ ಇದೆ. ಎಲ್ಲವನ್ನೂ ಅವರೇ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಎಚ್.ವಿಶ್ವನಾಥ್ ಆಯ್ಕೆಯ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು, ವಿಶ್ವನಾಥ್ ಇಬ್ಬರೂ ನಿನ್ನೆ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದೆವು. ಅವರು ಹಿರಿಯರು, ಅವರ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರು.
ನನಗೆ ಯೂಥ್ ಕಾಂಗ್ರೆಸ್ ಕೋಟಾದಡಿ ಮೊದಲು ಟಿಕೆಟ್ ಕೊಟ್ಟಿದ್ದೇ ಪ್ರಸಾದ್. ನನ್ನ ರಾಜಕೀಯ ಪ್ರವೇಶಕ್ಕೆ ಅವರು ಕಾರಣಕರ್ತರು. ಆದ್ದರಿಂದ ಭೇಟಿ ಮಾಡಿ ಮಾತನಾಡಿದ್ದೇನೆ. ಅದರ ಹೊರತು ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.