ಕೆಎಸ್ಒಯು ಮಾನ್ಯತೆ ಕೇಂದ್ರದ ಹೊಣೆಯಲ್ಲ, ಯುಜಿಸಿಯದ್ದು: ಜಾವಡೇಕರ್
ಮೈಸೂರು, ಫೆಬ್ರವರಿ 20: ಇತ್ತೀಚೆಗೆ ಪದೇ ಪದೇ ಮೈಸೂರಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಬಹಳ ದಿನಗಳಿಂದ ವಿದ್ಯಾರ್ಥಿಗಳು ಗೋಗರೆದರೂ ಕೆಎಸ್ಒಯು ಮಾನ್ಯತೆ ಬಗ್ಗೆ ತುಟಿ ಬಿಚ್ಚಿರಲಿಲ್ಲ ಆದರೆ ನಿನ್ನೆ ಈ ಬಗ್ಗೆ ಮಾತನಾಡಿದ್ದಾರೆ.
ನಿನ್ನೆ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನೂತನ ಆವರಣದ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಎಸ್ಒಯು ಬಗ್ಗೆ ಮಾತನಾಡಿದ ಅವರು ಕೆಎಸ್ಒಯುಗೆ ಮಾನ್ಯತೆ ದೊರೆಯದ್ದಕ್ಕೆ ಕೇಂದ್ರ ಸರ್ಕಾರ ಹೊಣೆ ಅಲ್ಲ ಎಂದಿದ್ದಾರೆ.
ಕೆಎಸ್ಒಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಹೈಕೋರ್ಟ್
'ಕೆಎಸ್ಒಯುಗೆ ನಾಲ್ಕು ವರ್ಷದಿಂದ ಮಾನ್ಯತೆ ಸಿಗದೇ ವಿಳಂಬವಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರ ಹೊಣೆ ಅಲ್ಲ, ಮಾನ್ಯತೆ ವಿಷಯ ಯುಜಿಸಿಗೆ ಸಂಬಂಧಪಟ್ಟ ವಿಚಾರ ಈ ಕುರಿತು ಸರ್ಕಾರಕ್ಕೆ ಮನವಿ ಕೂಡಾ ಸಿಕ್ಕಿಲ್ಲ' ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಮಾನ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಮುಂಚೆಯೇ ಜಾವಡೇಕರ್ ಅವರು ಮೈಸೂರಿನಲ್ಲಿ ಕೆಎಸ್ಒಯು ವಿದ್ಯಾರ್ಥಿಗಳಿಂದ ಪ್ರತಿಭಟನೆ ಎದುರಿಸಿದ್ದರು, ಮನವಿ ಪತ್ರಗಳನ್ನು ಸಲ್ಲಿಸಿದ್ದರು ಅಷ್ಟೆ ಅಲ್ಲದೆ ಟ್ವಿಟರ್ನಲ್ಲಿ ಸಚಿವ ಜಾವಡೇಕರ್ ವಿರುದ್ಧ ಅಭಿಯಾನ ಕೂಡ ನಡೆಸಿದ್ದರೂ ಆದರೂ ಕೂಡ ಜಾವಡೇಕರ್ ಅವರು 'ಕೆಎಸ್ಒಯು ಮಾನ್ಯತೆ ಕುರಿತು ಮನವಿ ಬಂದಿಲ್ಲ' ಎಂದಿರುವುದು ಆಶ್ಚರ್ಯ ಮೂಡಿಸಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕೆಲವು ತಿಂಗಳುಗಳ ಹಿಂದೆ ಕೆಎಸ್ಒಯು ಆವರಣದಲ್ಲಿಯೇ ವಿದ್ಯಾರ್ಥಿಗಳ ಮತ್ತು ಸಚಿವ ಜಾವಡೇಕರ್ ಅವರ ಮುಖಾಮುಖಿ ಚರ್ಚೆ ಏರ್ಪಡಿಸಿದ್ದರಾದರೂ ಕಾರಣಾಂತರದಿಂದ ಆ ಸಭೆ ನಡೆಯಲಿಲ್ಲ, ಆಗ ವಿದ್ಯಾರ್ಥಿಗಳ ಸಿಟ್ಟು ಇನ್ನೂ ಹೆಚ್ಚಾಗಿತ್ತು.
ಸಚಿವರು ಹೇಳಿದಂತೆ ಯುಜಿಸಿಯು ಸ್ವಾಯತ್ತ ಸಂಸ್ಥೆಯಾದರೂ ಸಹಿತ ಕೇಂದ್ರದ ಅನುದಾನದಲ್ಲಿ ನಡೆಯುವ ಸಂಸ್ಥೆಯಾದ ಕಾರಣ ಕೇಂದ್ರದ ಪ್ರಭಾವದಲ್ಲಿ ಕಾರ್ಯ ನಿರ್ವಹಿಸುವುದು ಗುಟ್ಟೇನು ಅಲ್ಲ, ಹಾಗಿದ್ದರೂ ಸಹಿತ ಜಾವಡೇಕರ್ ಅವರು 'ಕೆಎಸ್ಒಯು ಮಾನ್ಯತೆ ಯುಜಿಸಿಗೆ ಸಂಬಂಧಪಟ್ಟ ವಿಚಾರ' ಎಂದಿರುವುದು ಸಚಿವರ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.