ಎಂಎಲ್ಸಿ ಶ್ರೀಕಂಠೇಗೌಡ ವಿರುದ್ಧ ಸಚಿವ ನಾರಾಯಣ ಗೌಡ ಗರಂ
ಮೈಸೂರು, ಏಪ್ರಿಲ್ 26: ಮಂಡ್ಯದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವ ಘಟನೆ ಬಗ್ಗೆ ಸಚಿವ ನಾರಾಯಣ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮುದಾಯ ಭವನ ಸರ್ಕಾರದ ಆಸ್ತಿ, ಇದು ಅವರ ಮನೆ ಆಸ್ತಿ ಅಲ್ಲ ಎಂದು ಎಂಎಲ್ಸಿ ಶ್ರೀಕಂಠೇಗೌಡ ವಿರುದ್ಧ ಕಿಡಿಕಾರಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ಅವರು ಹೀಗೆ ನಡೆದುಕೊಂಡಿದ್ದು ಸರಿಯಲ್ಲ. ಅವರಿಂದ ದೊಡ್ಡ ತಪ್ಪಾಗಿದೆ. ಮಾಧ್ಯಮದವರು ನಿರಂತರವಾಗಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಎಂಎಲ್ಸಿ ಶ್ರೀಕಂಠೇಗೌಡ ಅವರು ಆಡಂಬರ ಹಾಗೂ ಪ್ರಚಾರ ಪ್ರಿಯರು. ಅವರಿಗೆ ಇಷ್ಟು ದಿನ ಪ್ರಚಾರ ಸಿಕ್ಕಿಲ್ಲ, ಅದಕ್ಕೆ ಈ ರೀತಿಯಾದರೂ ಪ್ರಚಾರ ಪಡೆದುಕೊಳ್ಳೋಣ ಅಂತ ಈ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಶ್ರೀಕಂಠೇಗೌಡರು ಮೊದಲು ಅವರ ಮಗನಿಗೆ ಸರಿಯಾಗಿ ಬುದ್ಧಿ ಹೇಳಬೇಕು. ಇಂತ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಈ ಇಡೀ ಪ್ರಕರಣವನ್ನು ನಾನು ಖಂಡಿಸುತ್ತೇನೆ ಎಂದು ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಇದಕ್ಕೂ ಮುನ್ನ ಸಚಿವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಶಾ ಕಾರ್ಯಕರ್ತೆಯನ್ನ ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿ ಧೈರ್ಯತುಂಬಿದರು.
ಜೆಡಿಎಸ್- ಕಾಂಗ್ರೆಸ್ ರಾಜಕಾರಣದಿಂದಾಗಿ ಇಂತಹ ಘಟನೆ ನಡೆಯುವಂತಾಗಿದೆ. ಆಶಾ ಕಾರ್ಯಕರ್ತೆಗೆ ಯಾವುದೇ ತೊಂದರೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ. ಕೆಲವರ ಪಿತೂರಿಯಿಂದ ಸರ್ಕಾರದವರು ಯಾರೂ ಬಂದಿಲ್ಲ ಅಂತ ಆರೋಪ ಮಾಡುತ್ತಿದ್ದಾರೆ. ಆದರೆ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಬಂದಿದ್ದರು ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ಅಲ್ಲದೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಾಂಪ್ರಮೈಸ್ ಮಾಡಿಸಲು ಬಂದಿದ್ದರು ಎಂಬ ಆರೋಪವನ್ನು ಸಚಿವರು ಅಲ್ಲಗಳೆದಿದ್ದಾರೆ. ಡಿಸಿ, ತಹಸೀಲ್ದಾರ್ ಯಾಕೆ ಕಾಂಪ್ರಮೈಸ್ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ಆಶಾ ಕಾರ್ಯಕರ್ತೆ ಸ್ವಲ್ಪ ಭಯ ಪಟ್ಟಿದ್ದಾರೆ ಅಷ್ಟೆ. ಇದರಲ್ಲಿ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳುವ ಅಂಶವೇ ಇಲ್ಲ. ಅವರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆ. ಪ್ರತಿ ಕ್ಷಣವು ಅವರಿಗೆ ಬೇಕಾದ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮೈಸೂರಿನಲ್ಲಿ ಸಚಿವ ನಾರಾಯಣಗೌಡ ಮಾಧ್ಯಮಗಳಿಗೆ ತಿಳಿಸಿದರು.