ಎಚ್. ವಿಶ್ವನಾಥ್ ಪರವಾಗಿ ನಿಂತ ಉಭಯ ನಾಯಕರು
ಮೈಸೂರು, ಜೂನ್ 15: "ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆ. ಅವರಿಗೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ಇದೆ. ಅದೆಲ್ಲ ಮಾತುಕತೆ ಆಯಾ ಮಟ್ಟದಲ್ಲಿ ನಡೆಯುತ್ತದೆ. ಅವರಿಗೆ ಪಕ್ಷದಲ್ಲಿ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಅದೆಲ್ಲವನ್ನು ದೊಡ್ಡವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವೆಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ" ಎಂದು ಎಚ್. ವಿಶ್ವನಾಥ್ಗೆ ಸಚಿವ ಸ್ಥಾನ ಸಿಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಸಚಿವ ನಾರಾಯಣಗೌಡ.
Recommended Video
ಇಂದು ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ನಾರಾಯಣ ಗೌಡ ಅವರು ಉಭಯ ಕುಶಲೋಪರಿ ಮಾತುಕತೆ ನಡೆಸಿದರು. ನಂತರ ಉಭಯ ನಾಯಕರು ಹಲವು ವಿಷಯಗಳ ಕುರಿತು ಮಾತನಾಡಿದರು.
ವಿಶ್ವನಾಥ್ ಅವರಿಗೆ ಎಂಎಲ್ಸಿ ಟಿಕೆಟ್ ಸಿಗುತ್ತದೆ; ನಾರಾಯಣಗೌಡ
"ಯಾವ ಮಕ್ಕಳೇ ಆಗಲಿ ತಂದೆ ಜೊತೆ ಇಲ್ಲದೇ ಇನ್ನೆಲ್ಲಿ ಇರುತ್ತಾರೆ?"
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಗೌಡರು, "ವಿಜಯೇಂದ್ರರ ಹುಟ್ಟೂರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ. ವಿಜಯೇಂದ್ರಣ್ಣ ನಮ್ಮ ಜಿಲ್ಲೆಯವರು. ಅವರಿಗೆ ಜಿಲ್ಲೆಯ ಬಗ್ಗೆ ಗೌರವ ಇದ್ದೇ ಇರುತ್ತದೆ. ಅವರಿಗೆ ಖುಷಿ ಇದೆ. ನಮ್ಮೂರು ಎನ್ನುವ ಪ್ರೀತಿ ಇದೆ. ಯಾರೋ ಮಾತನಾಡುತ್ತಾರೆ ಸೂಪರ್ ಸಿಎಂ ಅಂತ. ಅವರಿಗೆ ತಡೆದುಕೊಳ್ಳದೆ ಮಾತನಾಡುತ್ತಾರೆ ಅಷ್ಟೆ. ಯಾವ ಮಕ್ಕಳೇ ಆಗಲಿ ತಂದೆ ಜೊತೆ ಇಲ್ಲದೇ ಇನ್ನೆಲ್ಲಿ ಇರುತ್ತಾರೆ? ಎಲೆಕ್ಷನ್ ಸಮಯದಲ್ಲಿ ಅವರೇ ಹೆಚ್ಚಿನ ಜವಾಬ್ದಾರಿ ವಹಿಸಿದ್ದರು. ಅದು ಕರ್ನಾಟಕ ಮಾತ್ರವಲ್ಲದೇ ಇಡಿ ದೇಶಕ್ಕೆ ಗೊತ್ತಿದೆ" ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ನೇಮಕದ ಕುರಿತು ಪ್ರತಿಕ್ರಿಯೆ
ನಗರಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ನೇಮಕದ ಕುರಿತು ಮಾತನಾಡಿದ ಅವರು, "ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ಕೋರ್ಟ್ ನಲ್ಲಿ ಸ್ಟೇ ಇದೆ, ಸರ್ಕಾರದ್ದು ತಪ್ಪಿಲ್ಲ. ಸರ್ಕಾರ ಮಾಡಿದ್ದಕ್ಕೆ ಬೇರೊಬ್ಬರು ಸ್ಟೇ ತರುತ್ತಾರೆ. ಎಲ್ಲವೂ ನೂರಕ್ಕೆ ನೂರರಷ್ಟು ಸರಿ ಇರಲು ಸಾಧ್ಯವಿಲ್ಲ, ಅಸಮಾಧಾನ ಇರುವವರು ಕೋರ್ಟ್ ಗೆ ಹೋಗುತ್ತಿದ್ದಾರೆ. ಉಪಸಮಿತಿ ರಚಿಸಲಾಗಿದ್ದು, ಅದರಲ್ಲಿ ಅಳವಡಿಸಿ ಶೀಘ್ರವೇ ಕೋರ್ಟಿಗೆ ಸಲ್ಲಿಸಬೇಕಿದೆ. ಎಲೆಕ್ಷನ್ ಡಿಕ್ಲೇರ್ ಮಾಡಲು ಡಿಸಿಗಳಿಗೆ ಸೂಚನೆ ನೀಡಲಾಗಿತ್ತು, ಅದಕ್ಕೂ ಸ್ಟೇ ತಂದಿದ್ದಾರೆ ಎಂದು ತಿಳಿಸಿದರು.
"ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ"
ವಿಶ್ವನಾಥ್ ಗೆ ಏನ್ ಅನ್ಯಾಯ ಆಗಿದೆ? ಅವರು ನಮ್ಮನ್ನ ನಂಬಿ ಬಂದಿದ್ದಾರೆ. ಯಡಿಯೂರಪ್ಪನವರ ಬಳಿ ಎಲ್ಲಾ ಮಾತಾಡಿದ್ದಾರೆ. ಯಡಿಯೂರಪ್ಪ ಅವರ ಜೊತೆ ನಾನು ಸಾಕಷ್ಟು ಮಾತುಕತೆ ನಡೆಸಿದ್ದೇನೆ. ಸಿಎಂ ಜೊತೆ ವಿಶ್ವನಾಥ್ ಅವರು ಮಾತಾಡಿ ಆರಾಮವಾಗಿ ಹೋಗಿದ್ದಾರೆ. ಗೆದ್ದವರಿಗೆಲ್ಲ ಯಡಿಯೂರಪ್ಪನವರು ಸಚಿವ ಸ್ಥಾನ ಕೊಟ್ಟಿದ್ದಾರೆ. ಇದೀಗ ಸೋತವರು ಕೂಡ ಸಚಿವ ಕೇಳ್ತಿದ್ದಾರೆ. ಅವರು ಕೇಳಿದ್ದನ್ನು ಬೇಡ ಅಂತ ಹೇಳೋಣ್ವಾ? ಪಕ್ಷ ಸೇರುವಾಗ ಏನು ಮಾತು ಕೊಟ್ಟಿದ್ದಾರೋ ಅದು ಅವ್ರಿಗೆ ಗೊತ್ತಿದೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದಿದ್ದಾರೆ ಸಂಸದ ಶ್ರೀನಿವಾಸ್ ಪ್ರಸಾದ್.
"ಕೇಂದ್ರ, ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ"
ಕೇಂದ್ರ ಹಾಗೂ ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ. ಮೂರು ವರ್ಷ ಯಡಿಯೂರಪ್ಪ ಅವರು ಅಧಿಕಾರ ಪೂರೈಸುತ್ತಾರೆ. ಎಲ್ಲರೂ ರಾಷ್ಟ್ರೀಯ ಪಕ್ಷದಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿದ್ದಾರೆ. ಹಾಗಾಗಿ ಇದೆಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ತಿಳಿಸಿದ್ದಾರೆ