ನಂಜನಗೂಡಿನಲ್ಲಿ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿದ ಸಚಿವ, ಶಾಸಕ.!
ನಂಜನಗೂಡು, ಜೂನ್ 8: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಘೋಷಣೆಯಾದ್ಮೇಲೆ ಪ್ರವೇಶ ನಿಷೇಧಕ್ಕೊಳಪಟ್ಟಿದ್ದ ದೇವಸ್ಥಾನಗಳು ಇದೀಗ ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಇಂದು ತೆರೆಯಲಾಗಿದೆ. ಸಾರ್ವಜನಿಕರು ನಂಜುಂಡೇಶ್ವರನ ದರ್ಶನ ಪಡೆಯುತ್ತಿದ್ದಾರೆ.
ಚಾಮುಂಡೇಶ್ವರಿ, ನಂಜುಂಡೇಶ್ವರನ ದರ್ಶನ ಪಡೆದ ಸಚಿವ ST ಸೋಮಶೇಖರ್
ಕೈಗೆ ಸ್ಯಾನಿಟೈಸರ್ ಹಾಕಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ನಂಜುಂಡೇಶ್ವರನ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಶ್ರೀಕಂಠೇಶ್ವರನ ದರ್ಶನ ಪಡೆಯಲು ಭಕ್ತ ಸಮೂಹ ಸರದಿ ಸಾಲಿನಲ್ಲಿ ನಿಂತಿದ್ದಾರೆ.
ಹೀಗಿರುವಾಗಲೇ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಇಂದು ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಹರ್ಷವರ್ಧನ್ ಭೇಟಿ ನೀಡಿದ್ದರು. ದೇವರಿಗೆ ಪ್ರಥಮ ಪೂಜೆ ಸಲ್ಲಿಸಿ ಸಚಿವ ಮತ್ತು ಶಾಸಕರು ಆಶೀರ್ವಾದ ಪಡೆದರು. ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್, ಎಸ್.ಪಿ. ರಿಷ್ಯಾಂತ್, ತಹಸೀಲ್ದಾರ್ ಮಹೇಶ್ ಕುಮಾರ್ ಕೂಡ ಹಾಜರಿದ್ದರು.
ದೇವಾಲಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕರು ನೀತಿ ನಿಯಮಗಳಿಗೆ ಡೋಂಟ್ ಕೇರ್ ಎಂದಿದ್ದಾರೆ. ದೇವಸ್ಥಾನದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಸ್ಯಾನಿಟೈಸರ್ ಕೂಡ ಉಪಯೋಗಿಸಿಲ್ಲ. ಹಾಗೇ, ಜಿಲ್ಲಾಡಳಿತ ನಿರ್ಮಿಸಿದ ಮಾರ್ಕ್ ಮುಖಾಂತರ ದೇವಾಲಯಕ್ಕೆ ಯಾರೂ ಪ್ರವೇಶ ಮಾಡಲಿಲ್ಲ. ಆ ಮೂಲಕ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರೂಪಿಸಿರುವ ನಿಯಮಗಳಿಗೆ ಸಚಿವರು, ಶಾಸಕರೇ ಎಳ್ಳುನೀರು ಬಿಟ್ಟಂಗಾಗಿದೆ.
ಹಾಗ್ನೋಡಿದ್ರೆ, ಮೈಸೂರಿನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರಿದ್ದಿದ್ದು ನಂಜನಗೂಡಿನಲ್ಲಿ. ನಂಜುಂಡೇಶ್ವರನ ಆಶೀರ್ವಾದದಿಂದ ನಂಜನಗೂಡಿನಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂಬುದು ಭಕ್ತರ ನಂಬಿಕೆ.