ತಿ.ನರಸೀಪುರದ ನರಕ ಯಾತನೆ ಸಚಿವ ಮಹದೇವಪ್ಪರಿಗೆ ಕಾಣುತ್ತಿಲ್ಲವೆ?
ತಿ.ನರಸೀಪುರ, ಆಗಸ್ಟ್ 28: ಲೋಕೋಪಯೋಗಿ ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಕ್ಷೇತ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ತಿ.ನರಸೀಪುರಕ್ಕೊಮ್ಮೆ ಭೇಟಿ ನೀಡಿದರೆ ಅಲ್ಲಿನ ದೃಶ್ಯ ಮನಕಲಕುತ್ತದೆ.
ಎಲ್ಲೆಂದರಲ್ಲಿ ಹರಡಿ ಬಿದ್ದ ಕಸಗಳು, ಡಾಂಬರು ಕಾಣದ ಕೆಸರುಮಯ ರಸ್ತೆಗಳು, ಕೊಳಚೆ ತುಂಬಿದ ಬೀದಿಗಳು ಅಸಹ್ಯ ಹುಟ್ಟಿಸುತ್ತಿವೆ. ಕಳೆದೈದು ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಇರುವ ಮೂಲಕ ತಿ. ನರಸೀಪುರ ಪಟ್ಟಣ ಅಭಿವೃದ್ಧಿ ವಂಚಿತವಾಗಿರುವುದು ಕಂಡು ಬರುತ್ತಿದೆ.
ದೀಪದ ಕೆಳಗೆ ಕತ್ತಲು
ತಿ.ನರಸೀಪುರ ಮೀಸಲು ಕ್ಷೇತ್ರ ಹಾಗೂ ವರುಣಾ ಕ್ಷೇತ್ರ ಪ್ರತಿನಿಧಿಸುವ ಸಿ.ಎಂ.ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ, ಉಸ್ತುವಾರಿ ಸಚಿವರು ಆದ ಎಚ್.ಸಿ.ಮಹದೇವಪ್ಪನವರು ತವರು ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಹೀಗಾಗಿ ದೀಪದ ಕೆಳಗೆ ಕತ್ತಲು ಎಂಬಂತೆ ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಭಿವೃದ್ಧಿ ಮರೀಚಿಕೆ
ತಿ.ನರಸೀಪುರ ಪಟ್ಟಣವನ್ನು ಕಳೆದ 2 ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯಿಂದ ಪುರಭೆಯಾಗಿ ಮೆಲ್ದರ್ಜೇಗೇರಿಸಲಾಯಿತು. ಆಗ ಜನ ಇನ್ನೇನು ಅಭಿವೃದ್ಧಿಯಾಗಿ ಬಿಟ್ಟಿತು ಎಂದು ಕನಸು ಕಂಡಿದ್ದರು. ಆದರೆ ಅವರ ಕನಸು ಇನ್ನೂ ಕೂಡ ಕನಸಾಗಿಯೇ ಉಳಿದಿದೆ. ಈ ನಡುವೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನಡೆಸಲಾಗಿದೆಯಾದರೂ ಅದ್ಯಾವುದೂ ಕಾರ್ಯಗತಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ.
ನರಕಯಾತನೆ
ಇನ್ನು ಮಳೆ ಬಂತೆಂದರೆ ಪಟ್ಟಣದ ತ್ರಿವೇಣಿ ನಗರ, ವಿವೇಕಾನಂದನಗರ, ಪೇಟೆಕೇರಿ ಕಾಲೋನಿ, ಹೌಸಿಂಗ್ ಬೋರ್ಡ್ ಕಾಲೋನಿ, ವಿದ್ಯಾನಗರ, ಮಸೀದಿ ರಸ್ತೆ, ಹೆಳವರಹುಂಡಿ, ಆಲಗೂಡು, ಸೇರಿದಂತೆ ಹಲವು ಬಡಾವಣೆಯ ರಸ್ತೆಗಳು ಕೆಸರುಮಯವಾಗಿ ವಾಹನ ಸಂಚರಿಸುವುದು, ಪಾದಚಾರಿಗಳು ನಡೆದಾಡುವುದು ಎಲ್ಲವೂ ನರಕವಾಗಿ ಪರಿಣಮಿಸತೊಡಗಿದೆ.
ಇದೆಲ್ಲವನ್ನು ನೋಡಿಯೂ ನೋಡದಂತೆ ಪುರಸಭೆಯ ಮುಖ್ಯಾಧಿಕಾರಿ ಸಿ.ನಾಗರತ್ನ ಅವರು ಇರುವುದು ಅಚ್ಚರಿ ಮೂಡಿಸುತ್ತಿದೆ.
ಪಟ್ಟಣದತ್ತ ಗಮನಹರಿಸಿ
ಈ ಬಗ್ಗೆ ಜನಪ್ರತಿನಿಧಿಗಳನ್ನು ವಿಚಾರಿಸಿದರೆ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ರಸ್ತೆಗಳಂತೂ ಹೊಂಡಗಳಾಗಿದ್ದು, ಅದರಲ್ಲಿ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಇನ್ನಾದರೂ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಪಟ್ಟಣದತ್ತ ಗಮನಹರಿಸಿ ಜನರು ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.