ನಾನು ರೆಬೆಲ್ ಅಲ್ಲ, ಪಕ್ಷಕ್ಕೆ ಲಾಯಲ್: ನನ್ನ ಮತ್ತು ಸಿಎಂ ನಡುವೆ ವೈಯಕ್ತಿಕ ಸಂಘರ್ಷವಿಲ್ಲ: ಕೆ.ಎಸ್ ಈಶ್ವರಪ್ಪ
ಮೈಸೂರು, ಏಪ್ರಿಲ್ 2: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅನುದಾನ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲಾಖೆ ಗಮನಕ್ಕೆ ತರದೇ ನೇರವಾಗಿ ಕೆಲವು ಶಾಸಕರಿಗೆ ಅನುದಾನ ಬಿಡುಗಡೆಯಾಗಿದೆ. ಬೆಂಗಳೂರು ನಗರ ಜಿ.ಪಂ ಒಂದಕ್ಕೆ 65 ಕೋಟಿ ರೂ. ಅನುದಾನ ಹಂಚಿಕೆಯಾಗಿರುವುದು ಉಲ್ಲಂಘನೆಯಾಗಿದೆ. ನನ್ನ ಗಮನಕ್ಕೆ ತರದೇ ಕ್ರಿಯಾಯೋಜನೆ ಆಗಿರೋದು ತಪ್ಪು. ಈ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ನಿಯಮ ಮತ್ತು ಪ್ರಕ್ರಿಯೆ ಮೀರಿದ್ದನ್ನು ಪ್ರಶ್ನೆ ಮಾಡಿದ್ದೇನೆ ಎಂದು ತಾವು ರಾಜ್ಯಪಾಲರಿಗೆ ಪತ್ರ ಬರೆದ ಬಗ್ಗೆ ಸ್ಪಷ್ಟನೆ ನೀಡಿದರು.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಈಶ್ವರಪ್ಪ: ಕುತೂಹಲ ಕೆರಳಿಸಿದ ಸುದ್ದಿಗೋಷ್ಠಿ
ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ
ಅಲ್ಲದೆ ಇದು ನನ್ನ ಮತ್ತು ಸಿಎಂ ನಡುವಿನ ವೈಯಕ್ತಿಕ ವಿಚಾರವಲ್ಲ. ನನ್ನ ಇಲಾಖೆಗೆ ಹಣಕಾಸು ಇಲಾಖೆ ಹಣ ನೀಡುತ್ತದೆ. ಆ ಹಣ ಖರ್ಚು ಮಾಡುವುದು ನನ್ನ ಇಲಾಖೆಯ ಹಕ್ಕು. ನಾನು ರೆಬೆಲ್ ಅಲ್ಲ, ಲಾಯಲ್. ನನ್ನ ಇಡೀ ಜೀವನದಲ್ಲಿ ನಾನು ಪಕ್ಷಕ್ಕೆ ರೆಬೆಲ್ ಆಗಿಲ್ಲ ಎಂದು ಹೇಳಿದರು. ಆದರೆ, ರಾಜ್ಯಪಾಲರಿಗೆ ಪತ್ರ ಬರೆದ ವಿಷಯದ ಕುರಿತು ಕೆಲವರು ಶಾಸಕರು ನಾನು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ. ಜತೆಗೆ ಡಿ.ಕೆ ಶಿವಕುಮಾರ್ ಹೇಳುತ್ತಾರೆ, ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟನೆ ನೀಡಿದರು.
ಕೆಜೆಪಿ ಬಳಿಕ ಕೇವಲ 4 ಸ್ಥಾನ ಗಳಿಸಿದರು
ಸಿಎಂ ಬಿಎಸ್ವೈ ಕೆಜೆಪಿ ಶುರು ಮಾಡಬೇಕು ಎಂದು ಶುರು ಮಾಡಿದರು, ನಾನು ಬೇಡ ಅಂದಿದ್ದೆ, ನಾನು ಅವರು ಒಂದೇ ತಟ್ಟೆಯಲ್ಲಿ ತಿಂದವರು, ಒಂದೇ ಬ್ಯುಸಿನೆಸ್ ಮಾಡುತ್ತಿದ್ದೆವು, ಕೆಜೆಪಿ ಬಳಿಕ ಕೇವಲ 4 ಸ್ಥಾನ ಗಳಿಸಿದರು. ಮತ್ತೆ ಬಿಜೆಪಿಗೆ ಬಿಎಸ್ವೈ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ನಾನು ಡಿ.ಎಸ್ ಶಂಕರ್ ಮೂರ್ತಿ ಮಾತುಕತೆ ನಡೆಸಿದ್ದೆವು ಎಂದು ತಿಳಿಸಿದರು.
ಸಿಎಂ ವಿರುದ್ಧ ಈಶ್ವರಪ್ಪ ದೂರಿಗೆ ಸಚಿವ ಸಿಸಿ ಪಾಟೀಲ್ ಆಕ್ರೋಶ
ಇದೇ ಮೊದಲ ಸಂಘರ್ಷ ಅಲ್ಲ
ಯಡಿಯೂರಪ್ಪ ಅವರು ಬಹಳ ಬೇಗ ಬೇರೆಯವರನ್ನು ನಂಬುತ್ತಾರೆ. ನನ್ನದು ಅವರದು ಇದೇ ಮೊದಲ ಸಂಘರ್ಷ ಅಲ್ಲ ಅದು ನಿಜ. ಈ ಜನ್ಮದಲ್ಲಿ ಬಿಜೆಪಿ ಸೇರುವುದಿಲ್ಲ ಅಂತ ಹೇಳಿದ್ದರು ಅದಕ್ಕೆ ನನ್ನ ಭಾಷೆಯಲ್ಲಿ ನಾನು ಉತ್ತರಿಸಿದ್ದೆ. ನಾನು ಆಗ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೆ, ನಾನು ಪಕ್ಷಕ್ಕೆ ಲಾಯಲ್ ಆಗಿದ್ದೇನೆ. ನನ್ನ ಜಾಯಮಾನದಲ್ಲಿ ರೆಬೆಲ್ ಆಗಲ್ಲ, ನಾನು ಪಕ್ಷಕ್ಕೆ ಲಾಯಲ್ ಆಗಿದ್ದೇನೆ ಎಂದರು.
ನಾನು ಎಂದಿಗೂ ರೆಬೆಲ್ ಆಗಲ್ಲ
ಕೆಲವು ಪತ್ರಿಕೆಗಳಲ್ಲಿ ಬಿಜೆಪಿಯಲ್ಲಿ ಈಶ್ವರಪ್ಪ ರೆಬೆಲ್ ಅಂತ ಹೇಳುತ್ತಿದ್ದಾರೆ, ನಾನು ಎಂದಿಗೂ ರೆಬೆಲ್ ಆಗಲ್ಲ. ಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತೇನೆ ಎನ್ನುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಎದುರುವ ಮನುಷ್ಯ ಅಲ್ಲ, ಕೆಲವು ಶಾಸಕರು ನೀವು ಮಾಡಿರುವುದು ಸರಿ ಅಂತ ಹೇಳುತ್ತಿದ್ದಾರೆ. ಸಹಿ ಸಂಗ್ರಹ ಮಾಡುತ್ತಿರುವವರಿಗೂ ಮುಂದೆ ನಾನು ಮಾಡುತ್ತಿರುವುದು ಸರಿ ಅಂತ ಗೊತ್ತಾಗಲಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.